ಕಳೆದ ವರ್ಷದ ಸಿಇಟಿ ಕೌನ್ಸೆಲಿಂಗ್ನ ಕೊನೆಯ ಸುತ್ತು ಮುಗಿದ ನಂತರವೂ ಸುಮಾರು 6,000ಕ್ಕೂ ಹೆಚ್ಚು ಎಂಜಿನಿಯರಿಂಗ್ ಸೀಟುಗಳು ವಿದ್ಯಾರ್ಥಿಗಳೇ ಇಲ್ಲದೆ ಖಾಲಿ ಉಳಿದಿದ್ದವು. ಇದೇನು ಒಂದು ವರ್ಷದ ಕಥೆಯಲ್ಲ. ಕಳೆದ ಕೆಲವು ವರ್ಷಗಳಿಂದ ಹೀಗೆ ಎಂಜಿನಿಯರಿಂಗ್ ಸೀಟುಗಳು ಖಾಲಿ ಉಳಿಯುತ್ತಲೇ ಇವೆ. ಐಐಟಿಗಳಲ್ಲಿ ಕುಸಿಯುತ್ತಿರುವ ಗುಣಮಟ್ಟದ ಶಿಕ್ಷಣ, ಹೊಸ ಐಐಟಿಗಳನ್ನು ಕಾಡುತ್ತಿರುವ ಬೋಧಕರ ಸಮಸ್ಯೆಗಳ ನಡುವೆ ಕರ್ನಾಟಕಕ್ಕೂ ಒಂದು ಐಐಟಿಯನ್ನು ಕೇಂದ್ರ ಸರ್ಕಾರದ ಹಣಕಾಸು ಸಚಿವ ಅರುಣ್ ಜೇಟ್ಲಿ ಘೋಷಿಸಿದ್ದಾರೆ.
ಹಾಗೆ ನೋಡಿದರೆ ಐದೂವರೆ ದಶಕಗಳ ಹಿಂದೆಯೇ ಕರ್ನಾಟಕದಲ್ಲೊಂದು ಐಐಟಿ ಸ್ಥಾಪನೆಯಾಗಬೇಕಿತ್ತು. ಕರ್ನಾಟಕ ಈ ನಿಟ್ಟಿನಲ್ಲಿ ಏನಾದರೂ ಮಾಡುವ ಮುನ್ನವೇ ಆಗಿನ ತಮಿಳುನಾಡು ಮುಖ್ಯಮಂತ್ರಿ ಕೆ. ಕಾಮರಾಜ್ ಅವರು ಮ್ಯಾಜಿಕ್ ಮಾಡಿದರು. ದಕ್ಷಿಣ ಭಾರತದ ಐಐಟಿ ಇಂದಿನ ಚೆನ್ನೈ ಆಗಿರುವ ಅಂದಿನ ಮದ್ರಾಸಿನಲ್ಲಿ ಸ್ಥಾಪನೆಯಾಯಿತು. ದೇವೇಗೌಡರು ಪ್ರಧಾನಿಯಾಗಿದ್ದಾಗ ಕರ್ನಾಟಕಕ್ಕೆ ಐಐಟಿ ಬಂತು ಎನ್ನುವಷ್ಟರಲ್ಲಿ ಕೈತಪ್ಪಿತು. ಮತ್ತೊಂದು ಸುತ್ತಿನಲ್ಲಿ ಸಿ.ಎನ್.ಆರ್.ರಾವ್ ಅವರ ಪ್ರಯತ್ನದ ಫಲವಾಗಿ ಕರ್ನಾಟಕಕ್ಕೆ ಒಂದು ಐಐಟಿ ಬರುತ್ತದೆ ಎಂದು ಎಲ್ಲರೂ ಭಾವಿಸಿದ್ದಾಗ ಅದು ಆಂಧ್ರಪ್ರದೇಶದ ಪಾಲಾಯಿತು.
ಈಗ ಕರ್ನಾಟಕಕ್ಕೆ ದೊರೆತಿರುವ ಐಐಟಿ ಎಲ್ಲಿ ಸ್ಥಾಪನೆಯಾಬೇಕೆಂಬುದು ಒಂದು ರಾಜಕೀಯ ಪ್ರಶ್ನೆಯಾಗುತ್ತಿದೆ. ದೇವೇಗೌಡರು ಇದನ್ನು ಹಾಸನಕ್ಕೆ ಕೊಂಡೊಯ್ಯುವ ಪ್ರಯತ್ನದಲ್ಲಿದ್ದರೆ ಇದು ಹೈದರಾಬಾದ್ ಕರ್ನಾಟಕದಲ್ಲೇ ಸ್ಥಾಪನೆಯಾಗಬೇಕೆಂಬ ಕೂಗು ಕೇಳಿಬರುತ್ತಿದೆ. ಈ ನಡುವೆ ಕರ್ನಾಟಕದ ಬಿಜೆಪಿ ನಾಯಕರಲ್ಲಿ ಕೆಲವರು ಇದನ್ನು ಧಾರವಾಡದಲ್ಲಿ ಸ್ಥಾಪಿಸುವುದಕ್ಕೆ ಬೇಕಿರುವ ಒತ್ತಡ ತಂತ್ರ ಹಾಕಲು ಮುಂದಾಗಿದ್ದಾರೆ. ಒಂದು ರಾಷ್ಟ್ರೀಯ ಮಟ್ಟದ ಶಿಕ್ಷಣ ಸಂಸ್ಥೆ ತಮ್ಮಲ್ಲೇ ಸ್ಥಾಪನೆಯಾಗಬೇಕೆಂದು ಯಾವುದೇ ಪ್ರದೇಶದ ಜನಪ್ರತಿನಿಧಿಗಳು ಭಾವಿಸುವುದು ಸಹಜ. ಅದಕ್ಕೆ ಇಂಥ ಒತ್ತಡ ತಂತ್ರಗಳೂ ಸಹಜವೇ. ಈ ರಾಜಕಾರಣದಾಚೆಗೆ ದೃಷ್ಟಿ ಹರಿಸಿದರೆ ಮುಖ್ಯವಾಗಿ ಕಾಣಿಸುವ ಪ್ರಶ್ನೆ ಈ ಐಐಟಿಯಿಂದ ಕರ್ನಾಟಕ ರಾಜ್ಯಕ್ಕೆ, ಕನ್ನಡಿಗರಿಗೆ ಏನು ಲಾಭ?
ಇಂಥದ್ದೊಂದು ಪ್ರಶ್ನೆಯನ್ನು ಕೇಳಿದಾಕ್ಷಣ ರಾಷ್ಟ್ರೀಯ ಮಹತ್ವವುಳ್ಳ ಸಂಸ್ಥೆಗಳ ಕುರಿತಂತೆ ಈ ಬಗೆಯ ಪ್ರಾದೇಶಿಕತೆಯ ಪ್ರಶ್ನೆಗಳು ಸರಿಯಲ್ಲ ಎಂಬ ವಾದವನ್ನು ಮುಂದೊಡ್ಡಲಾಗುತ್ತದೆ. ಈ ಬಗೆಯ ಸಂಸ್ಥೆಗಳು ಒಟ್ಟಾರೆ ಶೈಕ್ಷಣಿಕ ವಾತಾವರಣವನ್ನು ಉತ್ತಮ ಪಡಿಸುತ್ತವೆ. ಆದ್ದರಿಂದ ಈ ಪ್ರಶ್ನೆಗಳು ಪ್ರಸ್ತುತವಲ್ಲ ಎಂಬುದು ಮತ್ತೊಂದು ವಾದ. ಇವರೆಡನ್ನೂ ಒಪ್ಪಿಕೊಂಡೇ ಇಲ್ಲಿಯ ತನಕದ ಬೆಳವಣಿಗೆಗಳನ್ನು ಅವಲೋಕಿಸಿದರೆ ನಮಗೆ ಸಿಗುವ ಚಿತ್ರಣವೇ ಈ ವಾದಗಳನ್ನು ಹುಸಿಗೊಳಿಸುತ್ತದೆ.
ಐಐಟಿಯಂಥ ಸಂಸ್ಥೆಗಳನ್ನು ಭಾರತದ ವಿವಿಧೆಡೆ ಸ್ಥಾಪಿಸುವ ಯೋಜನೆ ಸ್ವಾತಂತ್ರ್ಯ ಪೂರ್ವದ್ದು. 1946ರಲ್ಲಿ ವೈಸ್ರಾಯ್ ಅವರ ಕಾರ್ಯಕಾರಿ ಮಂಡಳಿಯಲ್ಲಿದ್ದ ಸರ್. ಜೋಗಿಂದರ್ ಸಿಂಗ್ ಯುದ್ಧೋತ್ತರ ಭಾರತದ ಕೈಗಾರಿಕಾ ಅಭಿವೃದ್ಧಿಗಾಗಿ ತಂತ್ರಜ್ಞಾನ ಸಂಸ್ಥೆಗಳನ್ನು ಸ್ಥಾಪಿಸುವುದಕ್ಕಾಗಿ ನಳಿನಿ ರಂಜನ್ ಸರ್ಕಾರ್ ನೇತೃತ್ವದ 20 ಮಂದಿಯ ಸಮಿತಿಯೊಂದನ್ನು ರಚಿಸಿದ್ದರು. ಅದು ಭಾರತದ ವಿವಿಧ ಸ್ಥಳಗಳಲ್ಲಿ ಐಐಟಿಯಂಥ ಸಂಸ್ಥೆಗಳು ಮತ್ತು ಅವುಗಳ ಮಾನ್ಯತೆಯಡಿಯಲ್ಲಿ ಇರುವ ಎರಡನೇ ಹಂತದ ಸಂಸ್ಥೆಗಳನ್ನು ರೂಪಿಸುವ ಸಲಹೆ ಮಾಡಿತ್ತು. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಇವು ಐಐಟಿ ಹೆಸರಿನಲ್ಲಿ ಸ್ಥಾಪನೆಯಾದವು. ಮೊದಲ ಐಐಟಿ 1950ರಲ್ಲಿ ಪಶ್ಚಿಮ ಬಂಗಾಳದ ಖರಗ್ಪುರದಲ್ಲಿ ಆರಂಭಗೊಂಡಿತು. 1956ರಲ್ಲಿ ಸಂಸತ್ತು ಈ ಸಂಸ್ಥೆಗೆ ಸಂಬಂಧಿಸಿದ ಮಸೂದೆಯೊಂದನ್ನು ಅಂಗೀಕರಿಸಿ ಇದನ್ನು ರಾಷ್ಟ್ರೀಯ ಮಹತ್ವವುಳ್ಳ ಸಂಸ್ಥೆ ಎಂದು ಮಾನ್ಯ ಮಾಡಿತು. ಮುಂದೆ ಇದೇ ಪರಂಪರೆ ಉಳಿದ ಐಐಟಿಗಳ ಸ್ಥಾಪನೆಗೂ ವಿಸ್ತರಿಸಿತು.
ಮೊದಲ ಹಂತದಲ್ಲಿ ಸ್ಥಾಪನೆಯಾದ ಐಐಟಿಗಳಂತೂ ವಿಶ್ವ ಮಟ್ಟದಲ್ಲೇ ಹೆಸರು ಮಾಡಿವೆ. ಖಾಸಗಿ ಕ್ಷೇತ್ರದ ಅತ್ಯುತ್ತಮ ಗುಣಮಟ್ಟದ ಹೆಗ್ಗಳಿಕೆಯನ್ನು ಪಡೆದಿರುವ ಸಂಸ್ಥೆಗಳೂ ಇವುಗಳನ್ನು ಸೋಲಿಸಲಾರದ ಮಟ್ಟಿಗೆ ಇವು ಬಲವಾಗಿವೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಆರಂಭವಾದ ಸಂಸ್ಥೆಗಳಿಗೆ ಈ ಹೆಗ್ಗಳಿಕೆಯಿಲ್ಲ. ಎಲ್ಲಾ ಸರ್ಕಾರಿ ಸಂಸ್ಥೆಗಳಿಗಿರುವ ಸಮಸ್ಯೆಗಳೇ ಇಲ್ಲಿಯೂ ಇವೆ ಎಂಬ ದೂರುಗಳು ವ್ಯಾಪಕವಾಗಿ ಕೇಳಿಬರುತ್ತಿವೆ.
ಬೋಧನಾ ಗುಣಮಟ್ಟ, ಸಂಪನ್ಮೂಲದ ಕೊರತೆ ಸಮಸ್ಯೆಗಳ ಕುರಿತು ವ್ಯಾಪಕ ಚರ್ಚೆಗಳೂ ನಡೆಯುತ್ತಿವೆ. ಹಾಗೆಯೇ ಹಳೆಯ ಐಐಟಿಗಳು ಕೇವಲ ಉತ್ಕೃಷ್ಟತೆಯ ದ್ವೀಪಗಳಾಗಿ ಉಳಿದಿರುವ ಕುರಿತೂ ಚರ್ಚೆ ಆರಂಭವಾಗಿ ಹಲವು ವರ್ಷಗಳು ಉರುಳಿ ಹೋದವು. ಖರಗ್ಪುರದ ಐಐಟಿಯ ಮೊದಲ ಘಟಿಕೋತ್ಸವದಲ್ಲಿ ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಐಐಟಿಯನ್ನು ಭಾರತದ ಭವಿಷ್ಯದ ಪ್ರತೀಕವೆಂದಿದ್ದರು. ಈ ಮಾತಿಗೆ ಆರು ದಶಕ ಕಳೆಯುವ ಹೊತ್ತಿಗೆ ಐಐಟಿ ಶಿಕ್ಷಣವನ್ನೇ ಹಾಸ್ಯ ಮಾಡುವ ‘ತ್ರೀ ಈಡಿಯಟ್ಸ್’ನಂಥ ಚಲನಚಿತ್ರವನ್ನು ಬಾಲಿವುಡ್ ನಿರ್ಮಿಸುವ ಸ್ಥಿತಿಗೆ ಐಐಟಿಗಳು ಬಂದಿದ್ದವು.
ಈ ‘ಮೂರ್ಖೋತ್ತರ ಕಾಲ’ದಲ್ಲಿ ಕರ್ನಾಟಕಕ್ಕೆ ಐಐಟಿ ಬರುತ್ತಿದೆ ಎಂಬುದು ನಮಗೆ ನೆನಪಿರಬೇಕು. 1946ರಲ್ಲಿ ಐಐಟಿಯ ಪರಿಕಲ್ಪನೆ ಜನ್ಮತಳೆದಾಗ ಇವು ಮಾದರಿ ಸಂಸ್ಥೆಗಳಾಗಿಯೂ ಅವುಗಳ ಕೆಳಗೆ ಅದೇ ಗುಣಮಟ್ಟಕ್ಕೆ ಏರಬಲ್ಲ ಎರಡನೇ ಹಂತದ ಸಂಸ್ಥೆಗಳನ್ನು ಸ್ಥಾಪಿಸುವ ಆಲೋಚನೆಯಿತ್ತು. ಆದರೆ ಸಂಭವಿಸಿದ್ದು ಮಾತ್ರ ಅದಕ್ಕೆ ವಿರುದ್ಧವಾಗಿ. ಒಂದು ಸಾಮಾನ್ಯ ಎಂಜಿನಿಯರಿಂಗ್ ಕಾಲೇಜಿಗೆ ವಾರ್ಷಿಕ ದೊರೆಯುವ ಸಂಪನ್ಮೂಲ ಸುಮಾರು 10ರಿಂದ 20 ಕೋಟಿ ರೂಪಾಯಿಗಳಷ್ಟು ಮಾತ್ರ. ಆದರೆ ಒಂದು ಐಐಟಿಗೆ ಆಗುವ ಖರ್ಚು 90ರಿಂದ 130 ಕೋಟಿ ರೂಪಾಯಿಗಳು. ಈ ಪ್ರಮಾಣದ ಸಂಪನ್ಮೂಲ ಸಹಜವಾಗಿಯೇ ಪರಿಣಾಮ ಬೀರುತ್ತದೆ. ಐಐಟಿಗಳನ್ನು ಮಾದರಿಯಾಗಿಟ್ಟುಕೊಂಡು ಉಳಿದ ಸಂಸ್ಥೆಗಳನ್ನು ಅವುಗಳ ಮಟ್ಟಕ್ಕೆ ಏರಿಸುವ ಪ್ರಯತ್ನ ಸ್ವಾತಂತ್ರ್ಯೋತ್ತರ ಭಾರತದಲ್ಲಿ ನಡೆಯಲೇ ಇಲ್ಲ.
ಈ ಪ್ರಕ್ರಿಯೆ ಕೇವಲ ತಂತ್ರಜ್ಞಾನ ಶಿಕ್ಷಣಕಷ್ಟೇ ಸೀಮಿತವಾದುದೇನೂ ಅಲ್ಲ. ಉಳಿದ ವಿಷಯಗಳ ಉನ್ನತ ಶಿಕ್ಷಣ ಕ್ಷೇತ್ರದಲ್ಲೂ ಇದೆ. ಕೇಂದ್ರ ಸರ್ಕಾರ ರಾಷ್ಟ್ರೀಯ ಮಹತ್ವದ ಸಂಸ್ಥೆಗಳ ಹೆಸರಿನಲ್ಲಿ ಉತ್ಕೃಷ್ಟತೆಯ ದ್ವೀಪಗಳನ್ನು ಸೃಷ್ಟಿಸುತ್ತಾ ಸಾಗಿತು. ರಾಜ್ಯ ಸರ್ಕಾರಗಳ ಅಧೀನದಲ್ಲಿರುವ ಸಂಸ್ಥೆಗಳು ಎಲ್ಲಾ ಬಗೆಯ ಸಂಪನ್ಮೂಲ ಕೊರತೆಯಿಂದ ಸೊರಗುತ್ತಾ ಸಾಗಿದವು. ಪರಿಣಾಮವಾಗಿ ರಾಜ್ಯ ಸರ್ಕಾರದ ಮೇಲ್ವಿಚಾರಣೆಯಲ್ಲಿರುವ ಸಂಸ್ಥೆಗಳು ಕೀಳು ಮತ್ತು ಕೇಂದ್ರದ ಅಧೀನದಲ್ಲಿರುವ ಶಿಕ್ಷಣ ಸಂಸ್ಥೆಗಳು ಶ್ರೇಷ್ಠ ಎಂಬ ಮನೋಭಾವ ಸೃಷ್ಟಿಯಾಯಿತು. ಈ ವಾತಾವರಣವೇ ಕೇಂದ್ರ ಸರ್ಕಾರಕ್ಕೆ ರಾಷ್ಟ್ರೀಯ ಸಂಸ್ಥೆಗಳನ್ನು ರಾಜ್ಯಗಳಿಗೆ ಉಡುಗೊರೆಯಾಗಿ ಕೊಡುವ ಅವಕಾಶ ಕಲ್ಪಿಸಿತು. ಇಷ್ಟರ ಮಧ್ಯೆಯೂ ಒಂದು ಸಮಾನತೆ ಸಾಧ್ಯವಾಗುತ್ತಿದೆ. ಅದೇನೆಂದರೆ ತಥಾಕಥಿತ ರಾಷ್ಟ್ರೀಯ ಸಂಸ್ಥೆಗಳೂ ಗುಣಮಟ್ಟದಲ್ಲಿ ಕುಸಿದು ಉಳಿದ ಸಂಸ್ಥೆಗಳ ಮಟ್ಟಕ್ಕೆ ಇಳಿಯುತ್ತಿರುವುದು!
ತಂತ್ರಜ್ಞಾನ ಶಿಕ್ಷಣದ ಗುಣಮಟ್ಟ ಕುಸಿತಕ್ಕೆ ಹೊಸ ಐಐಟಿ ಮದ್ದು, ಕಾನೂನು ಶಿಕ್ಷಣ ಗುಣಮಟ್ಟದ ಕುಸಿತಕ್ಕೆ ಹೊಸ ರಾಷ್ಟ್ರೀಯ ಕಾನೂನು ಶಾಲೆ ಮದ್ದು, ರಾಜ್ಯ ಸರ್ಕಾರದ ಅಡಿಯಲ್ಲಿರುವ ವಿಶ್ವವಿದ್ಯಾಲಯಗಳಲ್ಲಿ ಸಂಭವಿಸುವ ಗುಣಮಟ್ಟ ಕುಸಿತಕ್ಕೆ ಕೇಂದ್ರೀಯ ವಿಶ್ವವಿದ್ಯಾಲಯಗಳು ಪರಿಹಾರ ಎಂಬ ಸರಳ ಸೂತ್ರವನ್ನು ಎಲ್ಲರೂ ಒಪ್ಪಿಕೊಂಡಿರುವ ಕಾಲಘಟ್ಟದಲ್ಲಿ ನಾವಿದ್ದೇವೆ. ಎಲ್ಲರ ಜೊತೆಗೂಡಿ ಎಲ್ಲರ ಅಭಿವೃದ್ಧಿಯ ಕನಸನ್ನು ಬಿತ್ತಲು ಹೊರಟಿರುವ ಪ್ರಧಾನಿ ಈ ಸ್ಥಿತಿಯನ್ನು ಬದಲಾಯಿಸುವ ನಿಟ್ಟಿನಲ್ಲಿ ಹೆಜ್ಜೆ ಇಡಬಹುದಿತ್ತು. ದುರದೃಷ್ಟವಶಾತ್ ಅವರೂ ಐಐಟಿ ಘೋಷಣೆಯ ಮೂಲಕ ಹಳೆಯ ಪರಂಪರೆಯನ್ನೇ ಮುಂದುವರಿಸುವಂತೆ ಕಾಣಿಸುತ್ತಿದೆ.
ಐಐಟಿಗಳ ಪ್ರವೇಶ ಪರೀಕ್ಷೆಗೆ ಸಂಬಂಧಿಸಿದಂತೆ ಹಲವು ದೂರುಗಳಿವೆ. ಇದರಲ್ಲಿ ಬಹಳ ಮುಖ್ಯವಾದುದು ಪ್ರವೇಶ ಪರೀಕ್ಷೆ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಷ್ಟೇ ನಡೆಯುತ್ತದೆ ಎಂಬುದು. ಗುಜರಾತಿ ಸಾಹಿತ್ಯ ಪರಿಷತ್ ಇದರ ವಿರುದ್ಧ ಧ್ವನಿ ಎತ್ತಿ ಗುಜರಾತ್ ಹೈಕೋರ್ಟ್ನಲ್ಲಿ ಒಂದು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಿದೆ. ಮದ್ರಾಸ್ ಹೈಕೋರ್ಟ್ನಲ್ಲಿಯೂ ಇಂಥದ್ದೇ ಮೊಕದ್ದಮೆಯೊಂದಿದೆ. ಕರ್ನಾಟಕದಲ್ಲಿ ಐಐಟಿ ಸ್ಥಾಪನೆಯಾದ ಮಾತ್ರಕ್ಕೆ ಕರ್ನಾಟಕದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶ ದೊರೆಯುತ್ತದೆ ಎಂಬ ಭ್ರಮೆಯಲ್ಲಂತೂ ನಾವು ಇರಬೇಕಾಗಿಲ್ಲ ಎಂಬುದಂತೂ ಸ್ಪಷ್ಟ. ಇಲ್ಲಿ ನಮಗೆ ದೊರೆಯುವುದೇನಿದ್ದರೂ ರಾಷ್ಟ್ರೀಯ ಪಾಲು ಮತ್ತು ರಾಜ್ಯ ಭಾಷೆಯ ಕುರಿತ ಕೀಳರಿಮೆ ಮಾತ್ರ.
ಇಷ್ಟಾಗಿಯೂ ಹೊಸ ಐಐಟಿಯನ್ನು ನಿರಾಶೆಯಿಂದ ನೋಡುವ ಅಗತ್ಯವೇನೂ ಇಲ್ಲ. ಈಗ ಆಗಿರುವುದು ಐಐಟಿ ಸ್ಥಾಪನೆಯ ಘೋಷಣೆಯಷ್ಟೇ. ಇದನ್ನು ಹೊಸ ಮಾದರಿಯಲ್ಲಿ ಕಟ್ಟುವುದಕ್ಕಾಗಿ ಒತ್ತಡ ಹೇರುವ ಸಾಧ್ಯತೆಗಳು ಇನ್ನೂ ಉಳಿದುಕೊಂಡಿವೆ. ಭಾರತದ ಮುಂದಿನ ಭವಿಷ್ಯದ ಪ್ರತೀಕವಾಗುವಂತೆ ಕರ್ನಾಟಕದ ಐಐಟಿ ರೂಪುಗೊಳ್ಳುವಂತೆ ಮಾಡಲು ನಮ್ಮ ಜನಪ್ರತಿನಿಧಿಗಳು ಪ್ರಯತ್ನಿಸಬೇಕಾಗಿದೆ. ಸಂವಿಧಾನದ 14ನೇ ಪರಿಚ್ಛೇದವನ್ನೇ ಉಲ್ಲಂಘಿಸುವ ಪರೀಕ್ಷಾ ಮಾದರಿಯನ್ನು ಬದಲಾಯಿಸುವುದು, ಉತ್ಕೃಷ್ಟತೆಯ ದ್ವೀಪವನ್ನು ಉತ್ಕೃಷ್ಟತೆಯ ಪ್ರಸರಣಾ ಕೇಂದ್ರವಾಗಿ ಬದಲಾಯಿಸುವ ಕೆಲಸ ಕರ್ನಾಟಕದಿಂದಲೇ ಆರಂಭವಾಗಬಾರದೇಕೆ?
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.