ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಂಬಾರ್ಡಿ ಸಂದೇಶ

Last Updated 10 ಜನವರಿ 2013, 19:59 IST
ಅಕ್ಷರ ಗಾತ್ರ

ಫು ಟ್‌ಬಾಲ್ ಆಟ ಗೊತ್ತಿದ್ದವರಿಗೆಲ್ಲ ಸಾಮಾನ್ಯವಾಗಿ ವಿನ್ಸ್ ಲೋಂಬಾ   ರ್ಡಿಯ ಹೆಸರು ಗೊತ್ತಿರುತ್ತದೆ. ಒಂದು ಕಾಲಕ್ಕೆ ಫುಟ್‌ಬಾಲ್ ಆಟದಲ್ಲಿ  ಅತ್ಯಂತ ಶ್ರೇಷ್ಠ ಕೋಚ್ ಆಗಿದ್ದವರು. ಅವರು ತರಬೇತಿ ನೀಡುತ್ತಿದ್ದರೆ ಆ ತಂಡ ಅದ್ಭುತವಾಗಿ ಆಡುತ್ತದೆ ಎಂಬ ಭರವಸೆ ಹುಟ್ಟಿಸಿದವರು. ಅವರನ್ನು ಗ್ರೀನ್ ಬೇ ಪ್ಯಾಕರ್ಸ ಎಂಬ ತಂಡದವರು ತರಬೇತುದಾರನನ್ನಾಗಿ ನಿಯಮಿಸಿಕೊಂಡರು. ಆಗ ಆ ತಂಡದ ಆಟದ ಮಟ್ಟ ಪೂರ್ತಿ ಕುಸಿದು ಹೋಗಿತ್ತು. ಯಾವ ಆಟಗಾರನಲ್ಲೂ ಗೆಲ್ಲುವೆವೆಂಬ ಆಸೆ ಇರಲಿಲ್ಲ. ಆ ವರ್ಷ ಆಡಿದ ಬಹುತೇಕ ಆಟಗಳಲ್ಲಿ  ಹೀನಾಯ ಸೋಲು ಕಂಡು ಮುಂದಿನ ವರ್ಷ ಅವರನ್ನು ಯಾರೂ ಲೆಕ್ಕಕ್ಕೆ ತೆಗೆದುಕೊಳ್ಳಲಾರರು ಎಂಬುದು ಎಲ್ಲರ ಅಭಿಪ್ರಾಯವಾಗಿತ್ತು.

ಆ ಸಮಯದಲ್ಲಿ  ಲೋಂಬಾರ್ಡಿ ತಂಡವನ್ನು ಸೇರಿಕೊಂಡರು. ಮರುದಿನ ತಂಡದ ಎಲ್ಲ ಆಟಗಾರರನ್ನು ಕರೆದು ಸಭೆ ಸೇರಿಸಿದರು. ಅವರೆಲ್ಲ ಜೋಲುಮುಖ ಹಾಕಿಕೊಂಡು ಕೆಳಗೆ ನೋಡುತ್ತ ಕುಳಿತುಕೊಂಡರು. ಲೋಂಬಾರ್ಡಿ ಅವರ ಮುಂದೆ ನಿಂತು ಗಂಭೀರವಾಗಿ ಹೇಳಿದರು,  ಎಲ್ಲರೂ ನಿಮ್ಮ ಮುಖಗಳನ್ನು ಮೇಲೆತ್ತಿ ನನ್ನ ಕಣ್ಣುಗಳನ್ನು ನೋಡಿ. ನೀವು ಈ ವರ್ಷ ಕೆಲವು ಆಟಗಳಲ್ಲಿ  ಸೋತಿರಬಹುದು ಆದರೆ ಜೀವನದಲ್ಲಿ  ಸೋತಿಲ್ಲ. ನಿಮಗೊಂದು ವಿಷಯ ನಾನು ನಂಬಿಕೆಯಿಂದ, ಭರವಸೆಯಿಂದ ಹೇಳುತ್ತೇನೆ. ನನ್ನನ್ನು ಖಚಿತವಾಗಿ ನಂಬಿ. ಮುಂದಿನ ವರ್ಷದ ಕೊನೆಯೊಳಗೆ ಗ್ರೀನ್ ಬೇ ಪ್ಯಾಕರ್ಸ್ ತಂಡ ದೇಶದ ಚಾಂಪಿಯನ್ ತಂಡವಾಗಿರುತ್ತದೆ.

ಅದನ್ನು ನೀವೇ ಸಾಧ್ಯಮಾಡಲಿದ್ದೀರಿ. ನಾವು ಆಡುವ ಎಲ್ಲ ಆಟಗಳನ್ನು ಗೆಲ್ಲಲಿದ್ದೇವೆ. ಅದಕ್ಕಾಗಿ ಆಟದ ಮೂಲತತ್ವಗಳನ್ನು ವಿದ್ಯಾರ್ಥಿಗಳಂತೆ ಕಲಿಯೋಣ. ನಾವು ಖ್ಯಾತ ಆಟಗಾರರೆಂಬ ಗರ್ವ ಮರೆತುಬಿಡಿ. ಮಕ್ಕಳು ಪ್ರಾರಂಭದಲ್ಲಿ  ಕಲಿಯುವಂತೆ ಎಲ್ಲರೂ ಆಟವಾಡೋಣ.  ಇದು ಹೇಗೆ ಆದೀತೆಂಬ ಚಿಂತೆ ನಿಮ್ಮ ಮನಸ್ಸಿನಲ್ಲಿ  ಬಂದಿರಬಹುದು. ಇದಕ್ಕೆ ನೀವು ಮಾಡಬೇಕಾದದ್ದು ಎರಡೇ. ಒಂದು, ನನ್ನಲ್ಲಿ, ನನ್ನ ಮಾತಿನಲ್ಲಿ  ಸಂಪೂರ್ಣ ನಂಬಿಕೆ ಇರಲಿ.

ಎರಡನೆಯದು ನಿಮ್ಮಲ್ಲಿ  ಜೀವನೋತ್ಸಾಹ ಎಂದಿಗೂ ಕಡಿಮೆಯಾಗಬಾರದು. ನಿಮ್ಮ ಚಿಂತನೆಯಲ್ಲಿ  ಉಳಿಯಬೇಕಾದದ್ದು ಮೂರೇ. ನಿಮ್ಮ ಮನೆ, ನಿಮ್ಮ ಆರೋಗ್ಯ ಮತ್ತು ನಿಮ್ಮ ಆಟ. ನಿಮ್ಮ ನಡಿಗೆಯಲ್ಲಿ  ಕುಣಿತವಿರಲಿ, ತಲೆ ಎಂದಿಗೂ ಬಾಗದಿರಲಿ, ಮುಖದ ನಗೆ ಮಾಸದಿರಲಿ. ಹೃದಯದೊಳಗೆ ಲಾವಾರಸ ಕುದಿಯುತ್ತಿದ್ದರೂ ಮುಖದಲ್ಲಿ  ಮಂದಹಾಸ ಮಿನುಗಲಿ. ನೀವೆಲ್ಲ ಸೇರಿ ಒಂದು ಚಾಂಪಿಯನ್ ತಂಡ  ನಿರ್ಮಾಣ ಮಾಡುವುದಕ್ಕೆ ಹೊರಟವರು ಎಂಬುದು ಸದಾ ಸ್ಮೃತಿಯಲ್ಲಿ  ಇರಲಿ.

ಸಭೆ ಮುಗಿದು ಹೊರಬಂದಾಗ ಒಬ್ಬ ಆಟಗಾರ, `ನನಗೆ ಅರಿವಿಲ್ಲದಂತೆ ನಾನು ಹತ್ತು ಇಂಚು ಉದ್ದವಾದಂತೆ ಎನ್ನಿಸಿತು' ಎಂದ. ಅಂದಿನಿಂದ ಲೋಂಬಾರ್ಡಿ ಯಾವುದೇ ಆಟಗಾರನ ಮುಖದ ಮೇಲೆ ಚಿಂತೆಯ ಗೆರೆ ಬಾರದಂತೆ ನೋಡಿಕೊಂಡ. ಮರುವರ್ಷ ಗ್ರೀನ್ ಬೇ ಪ್ಯಾಕರ್ಸ್ ತಂಡ ಆಡಿದ ಎಲ್ಲ ಆಟಗಳನ್ನು ಗೆದ್ದು ಚಾಂಪಿಯನ್ ಆಯಿತು. ಜನ ಬೆರಗಾದರು. ಗ್ರೀನ್ ಬೇ ಪ್ಯಾಕರ್ಸ ತಂಡಕ್ಕೆ ಆದದ್ದು ನಮಗೆಲ್ಲ ಆಗಬಹುದು.

ನಮಗೆ ಲೋಂಬಾರ್ಡಿ ದೊರೆಯಲಿಕ್ಕಿಲ್ಲ. ಆದರೆ ಅವನ ಮಾರ್ಗದರ್ಶನ ದೊರೆತಿದೆ. ನಮ್ಮ ಮನಸ್ಸು ನಮ್ಮ ಯಶಸ್ಸು ಅಥವಾ ಸೋಲನ್ನು ತೀರ್ಮಾನಿಸುತ್ತದೆ. ಮನಸ್ಸಿನಲ್ಲಿ  ಉತ್ಸಾಹ ನೆಲೆಯಾಗಿದ್ದರೆ ಸೋಲು ಸಾಧ್ಯವೇ ಇಲ್ಲ. ಈ ಉತ್ಸಾಹ ಬರುವುದು ನಮ್ಮ ಆತ್ಮವಿಶ್ವಾಸದಿಂದ, ನಂಬಿಕೆಯಿಂದ. ಇಂದು ಯಾವುದೋ ಕಾರಣಕ್ಕೆ ಸೋತಿರಬಹುದು. ಆದರೆ, ನಾಳೆ ಮತ್ತೊಂದು ಬೇರೆ ದಿನ. ಯಶಸ್ಸು ನಮ್ಮದೇ ಎಂಬ ಉತ್ಸಾಹ, ನಂಬಿಕೆಯಿಂದ ಮುನ್ನುಗ್ಗಿದರೆ ನಮ್ಮ ಪ್ರಯತ್ನಗಳಿಗೆ ಸಾವಿರ ಆನೆಯ ಬಲ ಬರುತ್ತದೆ. ಒಂದು ಯಶಸ್ಸು, ಯಶಸ್ಸಿನ ಸರಮಾಲೆಗಳಿಗೆ ನಾಂದಿಯಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT