2015ರ ಹೊಸ ವರ್ಷದ ಆರಂಭದ ವಾರ ಅಂದರೆ ಜ.2 ರಂದು ಅಂತ್ಯಗೊಂಡ ವಾರದಲ್ಲಿ ಸಂವೇದಿ ಸೂಚ್ಯಂಕ 646 ಅಂಶಗಳ ಏರಿಕೆ ಕಂಡಿತು ನಂತರ ಜ.9 ರಂದು ಅಂತ್ಯಗೊಂಡ ವಾರದಲ್ಲಿ 423 ಅಂಶಗಳ ಇಳಿಕೆ ದಾಖಲಿಸಿತು.
ಜ.16 ರಂದು ಕೊನೆಗೊಂಡ ವಾರದಲ್ಲಿ ಸೂಚ್ಯಂಕ 663 ಅಂಶಗಳ ಏರಿಕೆ ದಾಖಲಿಸಿದೆ. ಈ ಗಾತ್ರದ ಏರಿಕೆ ಮುಂದಿನ ದಿನಗಳಲ್ಲಿ ಸ್ವಾಭಾವಿಕವಾಗಿರುತ್ತದೆ. ಕಾರಣ ಸಂವೇದಿ ಸೂಚ್ಯಂಕದ ಗಾತ್ರ ಕಳೆದ ಒಂದು ವರ್ಷದಲ್ಲಿ ಸುಮಾರು 9 ಸಾವಿರ ಅಂಶಗಳಷ್ಟು ಬೃಹದಾಕಾರವಾಗಿ ಬೆಳೆದಿದೆ.
ಈ ವಾರದ ಆರಂಭದ ದಿನಗಳಲ್ಲಿ ಸಂವೇದಿ ಸೂಚ್ಯಂಕ ಜಾಗತಿಕ ಪೇಟೆಗಳಿಗನುಗುಣವಾಗಿ ಸ್ಪಂದಿಸಿ ಏರಿಳಿತ ಪ್ರದರ್ಶಿಸಿದೆ, ಆದರೆ ಗುರುವಾರದಂದು ಭಾರತೀಯ ರಿಸರ್ವ್ ಬ್ಯಾಂಕ್, ಬಹುದಿನಗಳಿಂದ ನಿರೀಕ್ಷಿಸುತ್ತಿದ್ದ ಬಡ್ಡಿ ದರ ಕಡಿತವನ್ನು ದಿಢೀರ್ ಪ್ರಕಟಿಸಿದ ಬೆಳವಣಿಗೆಯು ಪೇಟೆಗಳಲ್ಲಿ ಮಿಂಚು ಸಂಚರಿಸುವಂತೆ ಮಾಡಿತು.
ಗುರುವಾರದಂದು ಚಟುವಟಿಕೆ ಎಷ್ಟು ಚುರುಕಾಗಿತ್ತೆಂದರೆ ಬ್ಯಾಂಕಿಂಗ್ ವಲಯದ ಷೇರುಗಳು ಗಗನಕ್ಕೆ ಚಿಮ್ಮಿದ ಕಾರಣ ಬ್ಯಾಂಕೆಕ್್ಸ ಸೂಚ್ಯಂಕವು 22,260 ಅಂಶಗಳ ಗರಿಷ್ಠ ದಾಖಲೆ ನಿರ್ಮಿಸಿತು. ಆಕ್ಸಿಸ್ ಬ್ಯಾಂಕ್ ವಾರ್ಷಿಕ ಗರಿಷ್ಠದ ದಾಖಲೆ ಮಾಡಿದರೆ, ಮರುದಿನ ಎಚ್ಡಿಎಫ್ಸಿ ಬ್ಯಾಂಕ್ ವಾರ್ಷಿಕ ಗರಿಷ್ಠವನ್ನು ದಾಖಲಿಸಿತು.
ಅಂತೆಯೇ, ಎಚ್ಡಿಎಫ್ಸಿ ಸೇರಿದಂತೆ ಗೃಹ ಸಾಲ ನೀಡುವ ಪ್ರಮುಖ ಕಂಪೆನಿಗಳು ಏರಿಕೆಯಿಂದ ವಿಜೃಂಭಿಸಿದವು. ಪ್ರಮುಖ ಕಂಪೆನಿಗಳಾದ ಸನ್ಟಿವಿ ನೆಟ್ವರ್ಕ್, ಇಂಡಿಯಾ ಸೀಮೆಂಟ್ ಎಚ್ಡಿಐಎಲ್, ಹಿಂದೂಸ್ಥಾನ್ ಯೂನಿ ಲೀವರ್, ಪ್ರೆಸ್ಟೀಜ್ ಎಸ್ಟೇಟ್, ಯುಪಿಎಲ್, ಟಿ.ವಿ.ಎಸ್. ಮೋಟಾರ್, ಪಿಪವಾವ್ ಡಿಫೈನ್್ಸ ಮುಂತಾದವುಗಳು ಈ ವಾರ ಗಮನಾರ್ಹ ಏರಿಕೆಯಿಂದ ಹೂಡಿಕೆದಾರರನ್ನು ಹರ್ಷಿತಗೊಳಿಸಿವೆ.
ಹಿಂದಿನ ವಾರದಲ್ಲಿ ಏರಿಕೆಯಿಂದ ಮಿಂಚಿದ್ದ ಜುಬಿಲಂಟ್ ಲೈಫ್ ಸೈನ್ಸಸ್, ಗುಜರಾತ್ ಪಿಪವಾವ್ಗಳು ಇಳಿಕೆಯಲ್ಲಿದ್ದವು. ಕ್ಲಾರಿಯಂಟ್ ಕೆಮಿಕಲ್್ಸ ಕಂಪೆನಿಯ ಠಾಣೆಯಲ್ಲಿನ 87 ಎಕರೆ ಪ್ರದೇಶ ಮಾರಾಟ ಮಾಡುವ ಮೂಲಕ ಬರಬೇಕಿದ್ದ 1,102 ಕೋಟಿ ಹಣ ಸಂದಾಯವಾಗಿರುವ ವಿಚಾರ ಪ್ರಕಟವಾದ ನಂತರ ಗಮನಾರ್ಹ ಲಾಭಾಂಶದ ನಿರೀಕ್ಷೆಯಿಂದ ಕಳೆದ 15 ದಿನಗಳಲ್ಲಿ 850ರಂದ 1,185ವರೆಗೂ ಜಿಗಿತ ಪ್ರದರ್ಶಿಸಿದೆ.
ಒಟ್ಟಾರೆ ಈ ವಾರ ಸಂವೇದಿ ಸೂಚ್ಯಂಕ 663 ಅಂಶಗಳ ಮುನ್ನಡೆ ಪಡೆದು ಪೇಟೆಯ ಬಂಡವಾಳ ಮೌಲ್ಯ್ನು ಹಿಂದಿನ ವಾರದ 98.63 ಲಕ್ಷ ಕೋಟಿಯಿಂದ 100.89 ಲಕ್ಷ ಕೋಟಿಗೆ ತಲುಪಿಸಿದೆ. 100.89 ಲಕ್ಷ ಕೋಟಿಯು ಸರ್ವಕಾಲೀನ ದಾಖಲೆಯ ಮಟ್ಟವಾಗಿದೆ.
ಇದಕ್ಕೆ ಜೊತೆಯಾಗಿ ಮಧ್ಯಮ ಶ್ರೇಣಿ ಸೂಚ್ಯಂಕ 207 ಅಂಶಗಳ, ಕೆಳಮಧ್ಯಮ ಶ್ರೇಣಿ ಸೂಚ್ಯಂಕವು 112 ಅಂಶಗಳ ಏರಿಕೆ ಪಡೆದವು. ವಿದೇಶಿ ವಿತ್ತೀಯ ಸಂಸ್ಥೆಗಳು ವಾರಾಂತ್ಯದಲ್ಲಿ ರಭಸದ ಖರೀದಿಗೆ ಮುಂದಾಗಿ ಒಟ್ಟು 3,248 ಕೋಟಿ ಹೂಡಿ ಮಾಡಿದರೆ ಸ್ಥಳೀಯ ವಿತ್ತೀಯ ಸಂಸ್ಥೆಗಳು 1,753 ಕೋಟಿ ಮೌಲ್ಯದ ಷೇರು ಮಾರಾಟ ಮಾಡಿ ಅವಕಾಶದ ಲಾಭ ಪಡೆದುಕೊಂಡಿವೆ.
ಬೋನಸ್ ಷೇರು
ಡೆಲ್ಟಾನ್ ಕೇಬಲ್ ಕಂಪೆನಿಯು ವಿತರಿಸಲಿರುವ 2:1ರ ಅನುಪಾತದ ಬೋನಸ್ ಷೇರಿಗೆ 27ನೇ ಜನವರಿ ನಿಗದಿತ ದಿನವಾಗಿದೆ.
ಹಕ್ಕಿನ ಷೇರು
ಕೆನರಾ ಬ್ಯಾಂಕ್ನ ಅಂಗ ಸಂಸ್ಥೆ ಕ್ಯಾನ್ಫಿನ್ ಹೋಮ್್ಸ ಕಂpeನಿಯು ಪ್ರತಿ ಷೇರಿಗೆ 45 ರಂತೆ 3:10ರ ಅನುಪಾತದಲ್ಲಿ ಹಕ್ಕಿನ ಷೇರು ವಿತರಿಸಲಿದೆ. ಈ ವಿಚಾರ ಪ್ರಕಟಣೆ ಮಾಡಿದ ದಿನ 12 ರಂದು ಷೇರಿನ ಬೆಲೆಯು 695 ರವರೆಗೂ ಏರಿಕೆ ಕಂಡು 601 ರವರೆಗೂ ಇಳಿಕೆ ಕಂಡಿತು. ಕಳೆದ ಒಂದು ತಿಂಗಳಿಂದ ಷೇರಿನ ಬೆಲೆಯು 442 ರಿಂದ ಏರಿಕೆ ಕಂಡಿರುವ ಹಿನ್ನೆಲೆಯಲ್ಲಿ 450 ರಂತೆ ವಿತರಣೆ ಮಾಡುವ ಬೆಲೆ ಹೆಚ್ಚಿನ ಮಹತ್ವ ಪಡೆಯಲಾರದು. ಜನವರಿ 27 ನಿಗದಿತ ದಿನವಾಗಿದೆ.
ವಹಿವಾಟಿನ ಬಿಡುಗಡೆ
ಧನುಸೆರಿ ಪೆಟ್ರೋಲಿಯಂ ಅಂಡ್ ಟೀ ಇಂಡಸ್ಟ್ರೀಸ್ ಕಂಪೆನಿಯ ಟೀ ವಿಭಾಗ ಬೇರ್ಪಡಿಸಿ ಧನುಸೆರಿ ಟೀ ಅಂಡ್ ಇಂಡಸ್ಟ್ರೀಸ್ ರಚಿಸಲಾಗಿದ್ದು ಪ್ರತಿ 5 ಹಳೇ ಕಂಪೆನಿಯ ಷೇರಿಗೆ ಒಂದರಂತೆ ಹೊಸ ಕಂಪೆನಿಯ ಷೇರು ವಿತರಿಸಲಾಗಿದೆ. ಜನವರಿ 20 ರಿಂದ ಧನುಸೆರಿ ಟೀ ಅಂಡ್ ಇಂಡಸ್ಟ್ರೀಸ್ ಲಿ. ಕಂಪೆನಿಯ ಷೇರುಗಳು ‘ಟಿ’ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಲಿದೆ.
ಹೂಡಿಕೆ ಮುನ್ನ ಕಂಪೆನಿ ಆಂತರಿಕ ಸಾಧನೆ ಗಮನಿಸಿ
ಇಂದಿನ ದಿನಗಳಲ್ಲಿ ಷೇರುಪೇಟೆಯ ಸೂಚ್ಯಂಕಗಳ ಏರಿಳಿತವು ಅತ್ಯಂತ ಹರಿತವಾಗದ್ದು, ಏರಿಳಿತಗಳಿಗೆ ವೈವಿಧ್ಯಮಯವಾದ ಕಾರಣಗಳನ್ನು ಸೃಷ್ಠಿ ಮಾಡಲಾಗುತ್ತಿದೆ. ಅಂದರೆ ಕಂಪೆನಿಗಳ ಕಾರ್ಯಸಾಧನೆ, ಚಟುವಟಿಕೆ ಕೌಶಲ್ಯ, ವೃತ್ತಿಪರತೆ, ಹೂಡಿಕೆದಾರ ಸ್ನೇಹಿ, ನೀತಿ ಪಾಲನೆಗಳಂತಹ ಆಂತರಿಕ ಮೂಲಭಾಷಾಂತರಗಳನ್ನು ಹೊರತುಪಡಿಸಿ ಹೊರಗಿನ ಅಂಕಗಳೇ ಹೆಚ್ಚು ಪ್ರಭಾವಿಯಾಗಿವೆ.
ಈ ಸಂದರ್ಭದಲ್ಲಿ ಸೂಚ್ಯಂಕಗಳು ಮುಂದಿನ ದಿನಗಳಲ್ಲಿ ತಲುಪಬಹುದಾದ ಗುರಿಗಳನ್ನು ವಿಶ್ಲೇಷಿಸಲಾಗುತ್ತಿದೆ. ಅದಕ್ಕೂ ಮುನ್ನ ಹೂಡಿಕೆದಾರರು ವಾಸ್ತವಾಂಶಗಳನ್ನು ಮನದಲ್ಲಿಟ್ಟಿರಬೇಕು. ಪೇಟೆಗಳನ್ನು, ಕಳೆದ ಎರಡು ಮೂರು ವಾರಗಳ ಚಲನೆಯನ್ನು ಗಮನಿಸಿ, ವಿವರಿಸಬೇಕಾದರೆ ದುಸ್ತರವಾಗಲಿದೆ.
ಇದರ ಹಿನ್ನೆಲೆ ಎಂದರೆ ಸೂಚ್ಯಂಕಗಳು ಈಗಾಗಲೆ ಹೆಚ್ಚಿನ ಏರಿಕೆ ಕಂಡಿವೆ. ಹಾಗಾಗಿ ಏರಿಕೆಯಾಗಲಿ ಅಥವಾ ಇಳಿಕೆಯಾಗಲಿ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಕಂಪೆನಿಗಳನ್ನು ಹೂಡಿಕೆಗೆ ಆಯ್ಕೆ ಮಾಡಿಕೊಳ್ಳುವಾಗ ಮೊದಲ ಆದ್ಯತೆ ಕಂಪೆನಿಗಳ ಆಂತರಿಕ ಸಾಧನೆ ಗುಣಮಟ್ಟಕ್ಕೆ ನೀಡಿ, ನಂತರ ಅದರ ಷೇರಿನ ಪೇಟೆಯ ಬೆಲೆಯ ಏರಿಳಿತಗಳಿಗನುಗುಣವಾಗಿ ಕುಸಿತದಲ್ಲಿದ್ದಾಗ ಕೊಳ್ಳುವ ಯೋಚನೆ ಮಾಡಬಹುದು.
ಬಾಹ್ಯ ಕಾರಣಗಳು ಕಂಪೆನಿ ಷೇರುಗಳ ಮೇಲೆ ಎಂತಹ ಪ್ರಭಾವ ಬೀರಬಹುದೆಂಬುದಕ್ಕೆ ರಿಲೈಯನ್ಸ್ ಇಂಡಸ್ಟ್ರೀಸ್, ಒ.ಎನ್.ಜಿ.ಸಿ. ಯಂತಹ ಕಂಪೆನಿಗಳು, ಅಂತರರಾಷ್ಟ್ರೀಯ ಪೇಟೆಯಲ್ಲಿ ಕಚ್ಚಾ ತೈಲ ಬೆಲೆ ಕುಸಿತದ ಪ್ರಭಾವ ಕಂಪೆನಿಗಳ ಆಂತರಿಕ ಅಂಶಗಳ ಸಾಧನೆ ಕಡೆಗಣಿಸುವಂತೆ ಮಾಡಿದೆ.
ರಫ್ತು ಕಂಪೆನಿಗಳ ಲಾಭಗಳಿಕೆಗೆ ರೂಪಾಯಿ – ಡಾಲರ್ ಬೆಲೆಗಳಲ್ಲಿ ಉಂಟಾಗುತ್ತಿರುವ ಏರಿಳಿತಗಳು ನೇರವಾಗಿ ಪ್ರಭಾವ ಬೀರುತ್ತಿದೆ. ಕಾರು ಕಂಪೆನಿಗಳು ಬೆಲೆ ಹೆಚ್ಚಿಸಿರುವ ಸುದ್ದಿಯೂ ಇದೆ.
ಹೀಗೆ ಪ್ರತಿಯೊಂದು ಬೆಳವಣಿಗೆಯ ಹಿಂದೆ ಅಡಕವಾಗಿರುವ ಅಂಶಗಳನ್ನು ಪೇಟೆಯಲ್ಲಿ ಆ ಷೇರುಗಳಿಗೆ ತಾಳೆ ಹಾಕಿ ಕಂಪೆನಿ ಷೇರು ಹೂಡಿಕೆಗೆ ಯೋಗ್ಯವೇ ಎಂಬುದನ್ನು ನಿರ್ಧರಿಸುವುದು ಅಲ್ಪಮಟ್ಟಿಗೆ ಸುರಕ್ಷಿತ. ಈಗ ಪೇಟೆಗಳಲ್ಲಿ ಲಾಭಗಳಿಸುವುದೊಂದೇ ಗುರಿ. ಇದರ ಸಾಧನೆಗೆ ಅನುಸರಿಸುವ ಮಾರ್ಗ ನಗಣ್ಯ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.