ಬಿಡಿಎ (ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ) ನಿವೇಶನ ಸಿಕ್ಕಿ, ಸಾಲ ಮಾಡಿ ಮನೆ ಕಟ್ಟಿದಾಗ ಎಲ್ಲ ಮಧ್ಯಮ ವರ್ಗದವರಂತೆ ನನಗೂ ಸಂಭ್ರಮವಿತ್ತು. ಮಿತ್ರರ ಅಭಿನಂದನೆಗಳ ಸುರಿಮಳೆಗೆ ಏನೋ ಸಾಧನೆ ಮಾಡಿದಂತೆ ಭಾಸವಾಗತೊಡಗಿತು. ಒಂದು ಸಂಜೆ ಮನೆ ಹೊರಗೆ ಬಡಾವಣೆಯ ಸೌಂದರ್ಯ ನೋಡುತ್ತಾ ನಿಂತಾಗ ಕುರಿ ಮೇಯಿಸಿ ಮನೆ ಕಡೆಗೆ ಹೋಗುತ್ತಿದ್ದ ವ್ಯಕ್ತಿ ನಿಂತು ಮಾತನಾಡಿಸಿದರು.
‘ಇದೆಲ್ಲ ಹತ್ತು ವರ್ಷದ ಹಿಂದೆ ನಮ್ಮ ಹೊಲ ಆಗಿತ್ತು ತಾಯಿ, ನನ್ನದು, ಐದು ಎಕರೆ ಇತ್ತು. ಸರ್ಕಾರ ಕೊಟ್ಟ ದುಡ್ಡಲ್ಲಿ ಮಗಳಿಗೆ ಮದುವೆ ಮಾಡಿದೆ. ಮೂರುಜನ ಗಂಡು ಮಕ್ಕಳು, ನಮಗೆ ಬರಬೇಕಾದ ನಿವೇಶನ ಕುರಿತ ವಿಚಾರ ಇನ್ನೂ ಕೋರ್ಟಲ್ಲಿ ನಡೀತಾ ಇದೆ...’ ಎಂದರು.
ಇದು, ಪಕ್ಕದ ಗೊಲ್ಲರ ಹಟ್ಟಿಯಲ್ಲಿ ವಾಸ ಮಾಡುವ ಮರಿಯಪ್ಪನ ವ್ಯಥೆ. ಬಹುಶಃ ಅವರು ಇಲ್ಲಿಯ ಮೂಲನಿವಾಸಿಗಳು. ಆ ಹಟ್ಟಿಯಲ್ಲಿ ಎಷ್ಟೋ ವರ್ಷಗಳಿಂದ ಸತ್ತವರ ನೆನಪಿಗೆ ಇಡುವ ಕಲ್ಲಿನ ಸಾಲು ಹಳೆ ಶಿಲಾಯುಗದ ಸಂಸ್ಕೃತಿಯನ್ನು ನೆನಪಿಸುವಂತಿದೆ. ಬೆಳೆದು ಗಿಜಿಗುಡುವ ನಗರದ ಒಳಗೂ ಅವರ ಮನೆಯಂಚಿನಲ್ಲಿ ಕುರಿರೊಪ್ಪಗಳನ್ನು ಹಾಗೇ ಉಳಿಸಿಕೊಂಡಿದ್ದಾರೆ. ನೂರಾರು ವರ್ಷಗಳಿಂದ ಇಲ್ಲೇ ಬಾಳಿ ಬದುಕಿದ ಜನರ ಭೂಮಿಯನ್ನು ವಶಪಡಿಸಿಕೊಂಡು ಸರ್ಕಾರ ನಿವೇಶನಗಳನ್ನು ಮಾಡಿ ಮಧ್ಯಮವರ್ಗ, ಇಲ್ಲವೇ ಮೇಲ್ವರ್ಗಕ್ಕೆ ಮಾರುತ್ತದೆ. ನಿವೇಶನದ ಬೆಲೆ ವರ್ಷಕ್ಕೆ ಎರಡು–ಮೂರು ಪಟ್ಟು ಹೆಚ್ಚುತ್ತಾ ಹೋಗುತ್ತದೆ.ನನ್ನ ಅಥವಾ ನನ್ನಂತಹವರ ಮನೆಗಳನ್ನು ಭೂಮಿ ಕಳೆದುಕೊಂಡವರ ಕಣ್ಣೀರು ಬೆಚ್ಚಗಾಗಿಸಿದೆಯೇ? ಮರಿಯಪ್ಪನ ಉಳುಮೆ ಮಾಡುವ ಹಕ್ಕನ್ನು ಕಸಿದುಕೊಂಡವರು ಯಾರು?
ವಾಸ್ತವವಾಗಿ ರೈತನ ಭೂಮಿಯನ್ನು ವಶಪಡಿಸಿಕೊಳ್ಳುವ ಹಕ್ಕನ್ನು ಭಾರತ ೧೧೦ ವರ್ಷಗಳಷ್ಟು ಹಿಂದೆಯೇ ಪಡೆದುಕೊಂಡಿದೆ ಎಂದರೆ ಆಭಾಸ ಎನಿಸಬಹುದು. ಇದು ಉತ್ಪ್ರೇಕ್ಷೆಯಲ್ಲ. ೧೮೯೪ರ ಭೂ ಸ್ವಾಧೀನ ಕಾಯ್ದೆಯನ್ನೇ ಸಣ್ಣಪುಟ್ಟ ತಿದ್ದುಪಡಿಯೊಂದಿಗೆ ಈವರೆಗೆ ಪಾಲಿಸುತ್ತಾ ಬಂದಿದ್ದೇವೆ. ವಸಾಹತುಶಾಹಿ ನಮ್ಮನ್ನು ಬಿಟ್ಟರೂ ಅವರ ಬಳುವಳಿಗಳಿಗೆ ನಾವು ಸದಾ ವಿಧೇಯರಾಗಿದ್ದೇವೆ. ಬ್ರಿಟಿಷರು ಈ ನೆಲವನ್ನು ನೋಡುತ್ತಿದ್ದ ರೀತಿಗೂ ನಮ್ಮದೇ ಸರ್ಕಾರ ನಮ್ಮನ್ನು ನೋಡುವ ರೀತಿಗೂ ಯಾವ ವ್ಯತ್ಯಾಸವೂ ಇಲ್ಲವೇ? ‘ತೋಳ ಕುರಿ ನ್ಯಾಯ’ದ ವಸಾಹತು ನೀತಿಯಲ್ಲಿ ಸರ್ಕಾರದ ಯಾವುದೇ ಯೋಜನೆಗೆ ಭೂಮಿಯನ್ನು ವಶಪಡಿಸಿಕೊಳ್ಳಲು ಕಾನೂನಿನ ಅಡಿಯಲ್ಲಿ ಅವಕಾಶ ಇತ್ತು. ಇಂತಹ ಕಾನೂನುಗಳನ್ನೇ ಈ ಕಾಲಕ್ಕೂ ಶ್ರೇಷ್ಠವೆಂದು ಅನುಸರಿಸುತ್ತಿರುವುದಕ್ಕೆ ಇದೊಂದು ಸಣ್ಣ ಉದಾಹರಣೆ
ಸ್ವಾತಂತ್ರ್ಯೋತ್ತರ ಭಾರತದಲ್ಲಿ ನಗರಗಳು ಹಳ್ಳಿಗಳನ್ನು ನುಂಗಲು ಅಭಿವೃದ್ಧಿ ಒಂದು ನೆಪವಾಯಿತು. ಜನಸಂಖ್ಯೆ ಬೆಳೆದಂತೆ ಭೂಮಿ ಬೇಡಿಕೆ ಹೆಚ್ಚಾದುದರಿಂದ ಪೈಪೋಟಿ ಬೆಳೆದು ಅಸಹಾಯಕ ರೈತರ ಉಳುಮೆ ಭೂಮಿ ಕಬಳಿಕೆ ಮಿತಿಮೀರಿತು. ಭೂಮಿ ಕಳೆದುಕೊಂಡ ರೈತರು ನೆಪಮಾತ್ರದ ಪರಿಹಾರವನ್ನು ಪಡೆದು ಬದಲಾವಣೆಯ ಚಕ್ರಕ್ಕೆ ಸಿಕ್ಕಿ ನಲುಗಿಹೋದರು. ಯಾವ ಭೂ ಸುಧಾರಣಾ ಕಾನೂನೂ ಇದನ್ನು ಮುಟ್ಟಲಿಲ್ಲ. ಇದು ಅದರ ಚರ್ಚೆಯ ಭಾಗವೂ ಆಗಲಿಲ್ಲ.
೧೯೯೦ರ ನಂತರ ಜಾಗತೀಕರಣ ಪ್ರಕ್ರಿಯೆ ಕೈಗಾರಿಕಾ ಬೆಳವಣಿಗೆಯನ್ನು ಪವಿತ್ರವಾದುದೆಂದು ಭಾವಿಸುವಂತೆ ಮಾಡಿದೆ. ಕೈಗಾರಿಕೆ ಸ್ಥಾಪನೆ ಎಂದಾದರೆ ಅದಕ್ಕಾಗಿ ಸರ್ಕಾರ ಏನೂ ಮಾಡಲು ಸಿದ್ಧ. ಖಾಸಗಿ ಬಂಡವಾಳಗಾರರು ಎಲ್ಲೆಂದರಲ್ಲಿ ರೈತರಿಂದ ಭೂಮಿಯನ್ನು ಕೊಂಡು ಕೈಗಾರಿಕೆಗಳನ್ನು ಸ್ಥಾಪಿಸುತ್ತಾ ಬಂದಿದ್ದಾರೆ. ಅದನ್ನೆಂದೂ ಸರ್ಕಾರ ಪ್ರಶ್ನಿಸುವುದಿಲ್ಲ. ಕಾಡಿನ ಬಗ್ಗೆ ಇರುವ ಕಾಳಜಿ ಕೃಷಿಭೂಮಿ ಕುರಿತು ಇಲ್ಲ. ಅದರಲ್ಲೂ ವಿದೇಶಿ ಬಂಡವಾಳ ಬರುವುದಾದರೆ ನೀರು, ವಿದ್ಯುತ್, ಭೂಮಿ ಎಲ್ಲವನ್ನೂ ಉದಾರವಾಗಿ ನೀಡಲು ಸರ್ಕಾರ ಮುಂದಾಗುತ್ತದೆ.
ನಗರದ ವಿಸ್ತರಣೆಯ ಹೆಸರಿನಲ್ಲಿ ಭೂಮಿಯ ವಶ, ರಿಯಲ್ ಎಸ್ಟೇಟೆಂಬ ಶಿರೋನಾಮೆ ಅಡಿಯಲ್ಲಿ ಭೂಮಿ ಮಾರಾಟ ದಂಧೆಯಾಗಿದೆ. ಅತ್ಯಂತ ವೇಗವಾಗಿ ಲಾಭ ತರುವ ಮಾರ್ಗ ಇದಾಗಿರುವುದರಿಂದ ಮಾಫಿಯಾ ಆಗಿ ಬೆಳೆಯಲು ಹೆಚ್ಚು ಸಮಯವನ್ನೇನೂ ತೆಗೆದುಕೊಳ್ಳಲಿಲ್ಲ. ನಿವೇಶನಗಳನ್ನು ವಿಸ್ತರಿಸಲು ಹೇಳಿಮಾಡಿಸಿದ ಜಾಗವೆಂದರೆ ನಗರದ ಸುತ್ತಮುತ್ತಲ ಪ್ರದೇಶ. ನಗರಕ್ಕೆ ಅಂಟಿಕೊಂಡಂತಿರುವ ಹಳ್ಳಿಗಳೇ ಇವರ ಮೊದಲ ಬೇಟೆ.
ಆ ಹಳ್ಳಿಗಳ ಜನರೂ ದಿಢೀರನೆ ಬರಬಹುದಾದ ಹಣದ ನಿರೀಕ್ಷೆಯಲ್ಲಿ ಅಸ್ಥಿರವಾದ ಬದುಕನ್ನು ಸಾಗಿಸುತ್ತಾರೆ. ಕಡೆಗೂ ಒಂದು ದಿನ ಆ ಹಳ್ಳಿಯ ಹೊಲಗಳು ಒಂದೊಂದಾಗಿ ನಗರದ ಸ್ವಾಧೀನವಾಗುತ್ತವೆ. ಜಮೀನು ಮಾರಾಟದಿಂದ ಬಂದ ಹಣ, ಆವರೆಗೆ ಮಾಡಿದ ಕೈಸಾಲ ತೀರಿಸುವಲ್ಲಿ ಮುಗಿದು ಹೋಗುತ್ತದೆ. ಇತ್ತ ಹಳ್ಳಿಯವರೂ ಆಗದೆ ಅತ್ತ ನಗರ ವಾಸಿಗಳೂ ಆಗದೆ ಅತಂತ್ರ ಸ್ಥಿತಿಯಲ್ಲೇ ನಗರದ ಸುತ್ತಲ ಹಳ್ಳಿಗಳು ಕರಗಿ ಹೋಗುತ್ತಿವೆ. ರಸ್ತೆ ನಿರ್ಮಾಣಕ್ಕಾಗಿ, ಕೈಗಾರಿಕೆಗಳನ್ನು ಕಟ್ಟಲು ಹೀಗೆ ಹತ್ತು ಹಲವು ಕಾರಣಗಳನ್ನು ಹೇಳಿ ಹಳ್ಳಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಅದಕ್ಕೆ ಈವರೆಗೆ ಕೊಟ್ಟ ಬೆಲೆ ನೆಪ ಮಾತ್ರ. ಬೆಲೆ ಎನ್ನುವುದಕ್ಕಿಂತ ಪರಿಹಾರ ಎನ್ನಬಹುದು.
ತಮ್ಮದಲ್ಲದ ತಪ್ಪಿಗೆ ಪರಿಹಾರ ಪಡೆಯಲು ಸಣ್ಣಪುಟ್ಟ ರೈತರು ಕಚೇರಿಗಳನ್ನು ಸುತ್ತಿ ಲಂಚ ಕೊಟ್ಟು ಹಣ್ಣಾಗಿ ಹೋಗಿದ್ದಾರೆ. ಹಣದ ಆರ್ಥಿಕತೆಯಲ್ಲಿ ಬದುಕದ ರೈತರಿಗೆ ಕೊಡುವ ಸಣ್ಣ ಪ್ರಮಾಣದ ಹಣವೂ ಆಪಾರವಾಗಿ ಕಾಣುತ್ತದೆ. ಭೂಮಿ ಕಳೆದುಕೊಂಡ ಎಲ್ಲಾ ಸಂದರ್ಭಗಳಲ್ಲೂ ರೈತರು ಪ್ರತಿಭಟನೆ ಮಾಡದೆ ಹೋಗಲು ಇದೂ ಒಂದು ಕಾರಣ. ನ್ಯಾಯ ಸಿಗುವವರೆಗೆ ವರ್ಷಾನುಗಟ್ಟಲೆ ಹೋರಾಡುವ ಶಕ್ತಿ ಜನಸಾಮಾನ್ಯರಿಗೆ ಇರುವುದಿಲ್ಲ. ಆದ್ದರಿಂದ ಇಂತಹ ಹೋರಾಟಗಳೇನಿದ್ದರೂ ತಕ್ಷಣದ ಪ್ರತಿಕ್ರಿಯೆಯಾಗಿರುತ್ತವೆ.
ಆದರೂ ಈವರೆಗೆ ನಡೆದ ಚಳವಳಿಗಳು ಹಾಗೂ ಪ್ರತಿಭಟನೆಗಳ ಫಲವಾಗಿ, ಭೂಮಿ ವಶಪಡಿಸಿಕೊಳ್ಳಲು ಮಾಡಿದ ೧೮೯೪ರ ಕಾಯ್ದೆಗೆ ಬದಲಾಗಿ ಹೊಸ ಕಾಯ್ದೆಯನ್ನು ಕೇಂದ್ರ ಸರ್ಕಾರ ಜಾರಿಗೆ ತರುತ್ತಿದೆ. ೨೦೧೧ರ ಭೂಸ್ವಾಧೀನ, ಪುನರ್ವಸತಿ ಮತ್ತು ಪರಿಹಾರ ಮಸೂದೆ ಎಂದು ಅದನ್ನು ಕರೆದಿದೆ. ಸದನದಲ್ಲಿ ನಡೆದ ಸರ್ವಪಕ್ಷಗಳ ಚರ್ಚೆ ಮತ್ತು ಒಪ್ಪಿಗೆಯ ನಂತರ ನೋಟಿಫಿಕೇಷನ್ ಆಗಿ ಹೊರಬರುತ್ತಿದೆ.
ಎಲ್ಲಾ ಪಕ್ಷಗಳೂ ರೈತರ ಪರವಾಗಿಯೇ ವಾದಿಸುತ್ತಿವೆ. ಯಾರಿಗೂ ರೈತರಿಗೆ ಅನ್ಯಾಯವಾಗುವುದು ಬೇಡ. ಹಾಗಾಗಿ ಹಳ್ಳಿ ಪ್ರದೇಶವಾದಲ್ಲಿ ಭೂಮಿಯ ಮಾರುಕಟ್ಟೆ ಬೆಲೆಯ ನಾಲ್ಕು ಪಟ್ಟು ಪರಿಹಾರವಾಗಿ ಕೊಡಲು ಅವಕಾಶ ಕಲ್ಪಿಸಲಾಗಿದೆ. ನಗರ ವಲಯವಾದಲ್ಲಿ ಮಾರುಕಟ್ಟೆ ಬೆಲೆಯ ಎರಡು ಪಟ್ಟನ್ನು ಭೂಮಿ ಕಳೆದುಕೊಂಡವರಿಗೆ ಕೊಡಲಾಗುವುದು. ಪರಿಹಾರದ ಮೊತ್ತ ಹೊರನೋಟಕ್ಕೆ ಉದಾರವಾಗಿಯೇ ಕಾಣುತ್ತದೆ. ಆದರೆ ಯಾರೂ ವಿಶೇಷ ಆರ್ಥಿಕ ವಲಯಕ್ಕೆ (SEZ) ಇದನ್ನು ಅನ್ವಯಿಸಲು ಒತ್ತಾಯಿಸಿಲ್ಲ. ಈ ವಲಯಗಳು ಅತ್ಯಾಧುನಿಕ ಪರಿಭಾಷೆಯಲ್ಲಿ ವಿವರಿಸಿಕೊಂಡ ಬಹುರಾಷ್ಟ್ರೀಯ ಕಂಪೆನಿಯ ಕೋಠಿಗಳಾಗಿವೆ.
ಬೇಸಾಯದಲ್ಲಿ ಬೆವರು ಬಸಿಯ ಬೇಕು. ಬಸಿದರೂ ಎಣ್ಣೆ ಬರುವ ಹೊತ್ತಿಗೆ ಬೆಲೆ ಬಿದ್ದು ಹೋಗುತ್ತದೆ. ಇದನ್ನೆಲ್ಲಾ ಕಂಡ ಹಳ್ಳಿಯ ಯುವಕರು ನಗರದ ಕಡೆ ಮುಖ ಮಾಡಿದ್ದಾರೆ. ನಗರದ ಬಣ್ಣಗಳು ಎಳೆ ಮನಸ್ಸುಗಳನ್ನು ಕೂಗಿ ಕರೆಯುತ್ತವೆ. ನಗರದಲ್ಲಿ ಮಲಮೂತ್ರ ವಿಸರ್ಜನೆಗೂ ಬೆಲೆ ತೆರಬೇಕಾಗುತ್ತದೆ ಎಂದು ಗೊತ್ತಾಗುವ ಹೊತ್ತಿಗೆ ನಗರದ ಗುಲಾಮಗಿರಿಯನ್ನು ಒಪ್ಪಿಕೊಂಡು ಕೊಳೆಗೇರಿ
ವಾಸಿಗಳಾಗಿರುತ್ತೇವೆ.
ಭೂ ಸ್ವಾಧೀನವಾದಾಗ ಅದರ ಮಾರುಕಟ್ಟೆ ಬೆಲೆಯನ್ನು ನಿರ್ಧರಿಸುವವರು ಸರ್ಕಾರಿ ಅಧಿಕಾರಿಗಳೇ ಆಗಿರುತ್ತಾರೆ. ನಾವಿಂದು ಭೂ ಒಡೆತನದ ಪ್ರಶ್ನೆಯನ್ನು ಮೊದಲು ಅರ್ಥೈಸಿಕೊಳ್ಳಬೇಕಾಗಿದೆ. ಈ ಪ್ರಶ್ನೆಯನ್ನು ಬ್ರಿಟಿಷರನ್ನು ಕೇಳಿದಷ್ಟು ನಮ್ಮನ್ನು ನಾವು ಕೇಳಿಕೊಳ್ಳುತ್ತಿಲ್ಲ.
ಭೂಮಿಯ ನಿಜವಾದ ಒಡೆತನ ಯಾರದು? ಸರ್ಕಾ-ರದ್ದೋ, ಖಾಸಗಿ ವ್ಯಕ್ತಿಯದೋ ಅಥವಾ ಸಮುದಾಯದ್ದೋ? ಭೂಮಿಯನ್ನು ಯಾರು ಬೇಕಾದರೂ ಕೊಳ್ಳಬಹುದು ಅಥವಾ ಮಾರಬಹುದು ಎಂದಾಗಲೇ ಸಮುದಾಯದ ಒಡೆತನ ಇಲ್ಲವೆಂದಂತಾಗುತ್ತದೆ. ಶತಮಾನಗಳಿಂದ ಒಂದು ಸಮುದಾಯ ಬದುಕಿದ ಜಾಗವನ್ನು ಸರ್ಕಾರದ ಯೋಜನೆಗಳಿಗಾಗಿ ತೆರವು ಮಾಡಬೇಕಾಗುತ್ತದೆ ಎನ್ನುವುದು ಮಾನವ ಹಕ್ಕಿಗೆ ವಿರುದ್ಧವಾದುದು. ಈ ಕೆಲಸವನ್ನು ಪರರು ಮಾಡಿದಾಗ ಖಂಡಿಸುತ್ತೇವೆ...
ಬುಡಕಟ್ಟು ಜನರು ಭೂಮಿ ಕಳೆದುಕೊಂಡಾಗ ನರ್ಮದಾ ಬಚಾವ್ ಆಂದೋಲನದಂತಹ ಹೋರಾಟಗಳು ನಿರಂತರವಾಗಿ ಈ ಪ್ರಶ್ನೆಗಳನ್ನು ಕೇಳಿವೆ. ವಿಶೇಷ ಆರ್ಥಿಕ ವಲಯ ಸ್ಥಾಪನೆ ಸಂದರ್ಭದಲ್ಲೂ ಗುಂಪು ಗುಂಪು ಹಳ್ಳಿಗಳನ್ನೇ ವಶಪಡಿಸಿಕೊಳ್ಳಲಾಗಿದೆ. ಎಲ್ಲವೂ ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತದೆ. ಬಹುತೇಕ ಅದು ಕೈಗಾರಿಕಾ ಯೋಜನೆ ರೂಪಿಸುವವರ ಹಕ್ಕೇನೋ ಎನ್ನುವಂತಾಗಿದೆ. ವಿಶೇಷ ಆರ್ಥಿಕ ವಲಯಗಳನ್ನು ರೂಪಿಸಿದ್ದೇ ಕೈಗಾರಿಕಾ ಬಂಡವಾಳಗಾರರನ್ನು ಆಕರ್ಷಿಸುವುದಕ್ಕೆ. ಅದರಲ್ಲೂ ವಿದೇಶಿ ದುಡ್ಡಿಗಾಗಿ ಹಾಸಿದ ಕೆಂಪು ರತ್ನಗಂಬಳಿ. ಈ ಕೈಗಾರಿಕೆಗಳ ಸ್ಥಾಪನೆಗೆ ಒಳ್ಳೆ ನೀರಿನ ಸೌಲಭ್ಯ ಮತ್ತು ಉತ್ತಮ ರಸ್ತೆ ಸಂಪರ್ಕ ಅಗತ್ಯ. ಜೊತೆಗೆ ಉತ್ತಮ ಹವಾಮಾನ ಇರುವ ಪ್ರದೇಶಗಳ ಮೇಲೆ ಇವರ ಕಣ್ಣು. ಅಂತಹ ಜಾಗಗಳು ಸಹಜವಾಗಿ ಒಳ್ಳೆಯ ಬೇಸಾಯದ ಭೂಮಿಯಾಗಿರುತ್ತವೆ.
ಪಾಳು ಬಿದ್ದ ನೆಲ, ಕೈಗಾರಿಕೆಗಳಿಗೂ ಬೇಡ. ಸುಂದರವಾದದ್ದು ಜಗತ್ತಿನಲ್ಲಿ ಎಲ್ಲೇ ಇದ್ದರೂ ಅದನ್ನು ಪಡೆಯುವ ಹಕ್ಕನ್ನು ಬಹುರಾಷ್ಟ್ರೀಯ ಕಂಪೆನಿಗಳು ಪಡೆದುಕೊಂಡೇ ಹುಟ್ಟಿವೆ- ಜಾಗತೀಕರಣದಲ್ಲಿ. ಭೂ ಸ್ವಾಧೀನದ ಹಕ್ಕು ಮಾರುವವನದಲ್ಲ ಅದು ಕೊಳ್ಳುವವನದ್ದಾಗಿದೆ.
ಬೆಂಗಳೂರಿನ ಸುತ್ತಮುತ್ತಲ ಹವಾಮಾನ ಹಣ್ಣು ತರಕಾರಿ ಬೆಳೆಗೆ ಹೇಳಿಮಾಡಿಸಿದಂತಿದೆ. ಆದ್ದರಿಂದ ಆ ಊರುಗಳನ್ನು ಬಿರುಸಿನಲ್ಲಿ ವಶಪಡಿಸಿಕೊಳ್ಳಲಾಗುತ್ತದೆ. ಹತ್ತು ವರ್ಷಗಳ ಹಿಂದೆ ಕಾಣುತ್ತಿದ್ದ ದ್ರಾಕ್ಷಿ ತೋಟಗಳು ಇಂದು ಕಣ್ಮರೆಯಾಗಿವೆ. ತಲೆ ತರಿದ ತೆಂಗಿನ ಮರಗಳ ಸಾಲು ಗೋಳು ಹೇಳಿಕೊಳ್ಳಲಾಗದೆ ಉರುಳಿ ಬೀಳುತ್ತಿವೆ. ಎಸ್ಇಜೆಡ್ ವಿರುದ್ಧದ ದನಿ, ಬುಡಮೇಲಾದ ಮರದ ಸುಯ್ಯುವ ಗಾಳಿಯಂತೆ ಕ್ಷೀಣವಾಗಿ ಕೇಳಿಸಿತು. ಬೆಂಗಳೂರು ಸಮೀಪದ ನಂದಗುಡಿ ಯೋಜನೆ, ವಿರೋಧಕ್ಕೆ ಮಣಿಯದಿದ್ದರೂ ಸಕಾಲಕ್ಕೆ ಯೋಜನೆಯನ್ನು ಆರಂಭಿಸಲಾಗದೆ ಕೈಬಿಡುವಂತಾಗಿದೆ.
ಇಲ್ಲೆಲ್ಲಾ ಪರಿಹಾರ ಪಡೆಯುವುದು ಸಾಹಸದ ವಿಚಾರವೇ ಆಗಿದೆ. ಕೋಟ್ಯಂತರ ರೂಪಾಯಿ ಬಂಡವಾಳ ಹೂಡಿ, ಮುಂದೆ ಪಡೆಯುವ ಲಾಭದಲ್ಲಿ ರೈತನ ಪಾಲೇನು ಎಂದು ಕೇಳಬೇಕಾಗಿದೆ.ಅವರನ್ನು ಯೋಜನೆಯ ಪಾಲುದಾರರನ್ನಾಗಿಸಿಕೊಳ್ಳಲು ಈವರೆಗೆ ಯಾರೂ ಅವಕಾಶವನ್ನು ಕಲ್ಪಿಸಿಲ್ಲ. ಹೊಸ ಕಾಯ್ದೆಯು ಆ ವಿಚಾರವಾಗಿ ಮೌನವಾಗಿದೆ. ಈವರೆಗೆ ಕೃಷಿ ಭೂಮಿಯನ್ನು ಕೊಳ್ಳುವುದಾದರೆ ಆತ ರೈತನಾಗಿರಬೇಕಿತ್ತು. ಹೊಸ ಕಾಯ್ದೆ ಅದನ್ನೆಲ್ಲೂ ಚರ್ಚಿಸದೆ, ಸಾರ್ವಜನಿಕ ಹಿತಾಸಕ್ತಿಯನ್ನು ಎತ್ತಿಹಿಡಿಯುತ್ತದೆ.
ಭೂಮಿಯನ್ನು ವಶಪಡಿಸಿಕೊಳ್ಳಲು ಕೃಷಿಗೆ ಸಂಬಂಧಪಟ್ಟ ಕೈಗಾರಿಕೆ, ಸಾರ್ವಜನಿಕ ಹಿತಾಸಕ್ತಿಯ ಚಟುವಟಿಕೆಗಳು ಉದಾಹರಣೆಗೆ ಶಾಲೆ, ಕಾಲೇಜು, ಆಸ್ಪತ್ರೆ, ನೀರು ಶುದ್ಧೀಕರಣ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇದಲ್ಲದೆ ಹೆದ್ದಾರಿ, ರಕ್ಷಣೆ ಇಂತಹ ಕ್ಷೇತ್ರಗಳಿಗಂತೂ ಯಾರ ಅನುಮತಿಯೂ ಬೇಕಾಗಿಲ್ಲ. ಉಳಿದಂತೆ ಸರ್ಕಾರದ ಯೋಜನೆಯಾದಲ್ಲಿ ಆ ಪ್ರದೇಶದಲ್ಲಿ ಭೂಮಿಯ ಒಡೆತನ ಹೊಂದಿರುವವರಲ್ಲಿ ಶೇ 70ರಿಂದ ೮೦ರಷ್ಟು ಜನರು ತಮ್ಮ ಒಪ್ಪಿಗೆ ನೀಡಬೇಕಾಗುತ್ತದೆ. ನಮ್ಮ ರೈತರಿಗಿರುವ ಅರಿವು ಎಚ್ಚರದಲ್ಲಿ ಇಷ್ಟೆಲ್ಲಾ ತೀರ್ಮಾನಗಳನ್ನು ತೆಗೆದುಕೊಳ್ಳಬಲ್ಲರೆ? ಖಂಡಿತವಾಗಿ ಅವರ ಪರವಾಗಿ ಅವರೇ ನಿಲ್ಲಲಾರರು.
ಆ ಕ್ಷಣದ ಸಮಸ್ಯೆಗೆ ಪರಿಹಾರವಾಗಿ ಸಿಕ್ಕುವ ಹಣಕ್ಕೋ ಅಥವಾ ಬೆದರಿಕೆಗೋ ಮಣಿಯಬಲ್ಲರು. ‘ನೈಸ್’ ರಸ್ತೆ ಯೋಜನೆಯಲ್ಲಿ ನಡೆದ ಕೃಷಿ ಭೂಮಿಯ ಹಗಲು ದರೋಡೆ ಒಳ್ಳೆ ನಿದರ್ಶನ. ಅದು ಯಾರ ಅಭಿವೃದ್ಧಿಗೆ ದಾರಿಯಾಗಿದೆ ಎನ್ನುವುದನ್ನು ಬಿಡಿಸಿ ಹೇಳಬೇಕಾಗಿಲ್ಲ. ನಿತ್ಯ ಅಭಿವೃದ್ಧಿಯ ಅಬ್ಬರದ ಭಾಷಣ ಮಾಡುತ್ತಾ ಭಾವಿ ಪ್ರಧಾನಿಯಾಗುವ ಕನಸು ಕಟ್ಟುತ್ತಿರುವ ನರೇಂದ್ರ ಮೋದಿ ಅವರ ಯೋಜನೆಗಳಿಂದಾಗಿ ೩೫ ಹಳ್ಳಿಗಳು ಮುಳುಗುತ್ತಿವೆ. ಅವರ ಉಳಿವಿಗಾಗಿ ಜನ ಬೀದಿಗಿಳಿದಿದ್ದಾರೆ. ಪರಿಹಾರ ಯೋಜನೆ ಅವರನ್ನು ಉಳಿಸಬಲ್ಲದೆ? ಬಂಗಾಳದ ನಂದಿಗ್ರಾಮದ ಯೋಜನೆಯಿಂದ ರಾಜಕೀಯ ಪೈಪೋಟಿ ಹಲವು ತಿರುವುಗಳೊಂದಿಗೆ ಕಮ್ಯೂನಿಸ್ಟ್ ಪಕ್ಷ ಅಧಿಕಾರ ಕಳೆದುಕೊಂಡಿತು.
ನೋಡುತ್ತಾ ಹೋದರೆ ಭಾರತದ ಹಳ್ಳಿಗಳು ತಮ್ಮ ಸ್ವರೂಪನ್ನು ಬದಲಾಯಿಸಿಕೊಳ್ಳಬೇಕಾದ ಸಂದರ್ಭ ನಿಜ. ಆದರೆ ಹೀಗೆ ಅಸಹಾಯಕತೆಯಲ್ಲಿ ಕೊನೆಗೊಳ್ಳುವುದು ನೋವಿನ ಸಂಗತಿ. ತಾತ, ಮುತ್ತಾತನ ಕಾಲದಿಂದ ನೆಲೆಸಿದ್ದ ಸ್ಥಳ, ಆ ಜಾಗದಲ್ಲಿ ಅವರು ಕಟ್ಟಿಕೊಂಡಿದ್ದ ಸಂಸ್ಕೃತಿ, ನೆಲದೊಂದಿಗಿನ ಕಳ್ಳುಬಳ್ಳಿಯ ಸಂಬಂಧ ಇದಕ್ಕೆಲ್ಲಾ ಹಣದ ರೂಪದಲ್ಲಿ ಪರಿಹಾರ ಕೊಡಬಲ್ಲರೆ? ನೆಲದ ನಂಟನ್ನು ಕಸಿದುಕೊಳ್ಳುವ ಅಭಿವೃದ್ಧಿ ಯೋಜನೆಗಳ ಹುನ್ನಾರವೇ ಪರಿಹಾರ, ಪುನರ್ವಸತಿ.
ಆಧುನಿಕ ಮಾನವ, ನಗರಗಳನ್ನು ನಿರ್ಮಿಸುವುದರಲ್ಲೇ ‘ಮೋಕ್ಷ’ ಕಂಡುಕೊಂಡಂತಿದೆ. ನಗರವಾಸಿಗಳ ಅನುಕೂಲಕ್ಕಾಗಿ ಶಾಲೆ, ಕಾಲೇಜು ವಿಶ್ವವಿದ್ಯಾಲಯ ಹೀಗೆ ದೊಡ್ಡ ದೊಡ್ಡ ಹೆಸರಿನ ಸಂಸ್ಥೆಗಳನ್ನು ಕಟ್ಟಲು ಭೂಮಿ ವಶಪಡಿಸಿಕೊಳ್ಳುವುದು ಹೇಗೆಂದು ಕಾಯ್ದೆ ರೂಪಿಸಲು ಸಾಧ್ಯವಾಗುತ್ತದೆ. ಆದರೆ ಅದೇ ಹಳ್ಳಿ ಅಭಿವೃದ್ಧಿ ಯೋಜನೆಗಳು ಕನಸೇ ಆಗಿ ಉಳಿಯುತ್ತವೆ.
ಇಡೀ ಕಾನೂನಿನ ಅಂತರಾಳ ನಗರ ವಿಸ್ತರಿಸಬೇಕು, ಕೈಗಾರಿಕೆ ಹೆಚ್ಚಬೇಕು. ತ್ರಾಸವಿಲ್ಲದಂತೆ ಹಳ್ಳಿಗಳನ್ನು ತೊಡೆದು ಹಾಕಬೇಕು. ರೈತನ ಸ್ವಾಭಿಮಾನವನ್ನು ಕಸಿದು ನಗರದ ಸೇವೆಗೆ ಹಚ್ಚಬೇಕು. ಭೂಮಿ ಒಡೆತನ ಅದು ಬಂಡವಾಳಗಾರನ ಕಣ್ಣು ಬೀಳುವವರೆಗೆ ಮಾತ್ರ. ಬಹಳ ನಾಜೂಕಾಗಿ ರೂಪಿಸಿರುವ ಕಾಯ್ದೆ. ವಸಾಹತು ನೀತಿಗಿಂತಲೂ ನಾಜೂಕಾದ ಭಾಷೆ ಬಳಸಿದ ಕಾಯ್ದೆ. ಒಟ್ಟಿನಲ್ಲಿ ಮನೆಯಂಗಳದಲ್ಲಿ ಆಡುವ ಕೂಸಿನ ಕೈಗೆ ಮಿಠಾಯಿ ಕೊಟ್ಟು ಜೀತಕ್ಕೆ ಬಿಟ್ಟಂತಾಗಿದೆ.
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.