ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂಡಲಸಂಗಮದ ಸಂಗಮೇಶ್ವರ ಭವ್ಯ ರಥೋತ್ಸವ| ಬಂಗಾರ ಕಳಸದ ದರ್ಶನ ಪಡೆದ ಭಕ್ತಸಾಗರ

Published 30 ಏಪ್ರಿಲ್ 2024, 4:54 IST
Last Updated 30 ಏಪ್ರಿಲ್ 2024, 4:54 IST
ಅಕ್ಷರ ಗಾತ್ರ

ಕೂಡಲಸಂಗಮ: ವರ್ಷದಲ್ಲಿ ಮೂರು ದಿನ ಮಾತ್ರ ಭಕ್ತರ ದರ್ಶನಕ್ಕೆ ದೊರೆಯುವ ಸಂಗಮನಾಥನ ಕಳಸಕ್ಕೆ ರಾಜ್ಯ ಮಾತ್ರವಲ್ಲದೆ ನೆರೆಯ ರಾಜ್ಯಗಳಿಂದ ಅಪಾರ ಭಕ್ತರು ಆಗಮಿಸಿ ದರ್ಶನ ಪಡೆದರು. ಕೆಲವು ಭಕ್ತರು ಬಂಗಾರದ ಕಳಸ ಹೊತ್ತು ನಡೆದರೆ ಇನ್ನೂ ಕೆಲವರು ಸ್ಪರ್ಶಿಸಿ ಸಂಭ್ರಮ ಪಟ್ಟರು.

ಬಾಗಲಕೋಟೆ ಜಿಲ್ಲಾ ಖಜಾನೆಯಲ್ಲಿ ವರ್ಷವಿಡಿ ಭದ್ರತೆಯಲ್ಲಿರುವ ಸಂಗಮೇಶ್ವರ ಬಂಗಾರ ಕಳಸವು ಜಾತ್ರೆಯ ನಿಮಿತ್ಯ 3 ದಿನ ಮಾತ್ರ ಭಕ್ತರ ದರ್ಶನಕ್ಕೆ ದೊರೆಯುವುದು. ಉಳಿದ ಅವಧಿಯಲ್ಲಿ ಜಿಲ್ಲಾ ಖಜಾನೆಯ ಭದ್ರತೆಯಲ್ಲಿ ಇರುವುದು.

ಭಾನುವಾರ ಬೆಳಗ್ಗೆ 8:30ಕ್ಕೆ ಬಾಗಲಕೊಟೆ ತಹಶೀಲ್ದಾರ್ ಕಾರ್ಯಾಲಯದಲ್ಲಿ ಕಳಸದ ಬಾಬುದಾರರು 72 ಗಂಟೆಯಲ್ಲಿ ಕಳಸವನ್ನು ಮರಳಿ ತಲ್ಲುಪಿಸುತ್ತೇವೆ ಎಂಬ ಷರತ್ತುಬದ್ದ ಮುಚ್ಚಳಿಕೆ ಪತ್ರಕೊಟ್ಟು ಪೊಲೀಸ್ ಭದ್ರತೆಯಲ್ಲಿ ಸಾಯಂಕಾಲ 5:30ರವರೆಗೆ ಬಾಗಲಕೋಟೆಯಲ್ಲಿ, ರಾತ್ರಿ ಇಡೀ ಪಾದಯಾತ್ರೆಯ ಮೂಲಕ ಹಳೆಮಲ್ಲಾಪೂರ, ಕಿರಸೂರ, ಭಗವತಿ, ಹಳ್ಳೂರ, ಬೇವೂರ ಮಾರ್ಗದ ಮೂಲಕ ಸೋಮವಾರ ಬೆಳಗ್ಗೆ 10 ಗಂಟೆಗೆ ಕೂಡಲಸಂಗಮಕ್ಕೆ ಆಗಮಿಸಿತು.

47 ಕಿ.ಮೀ. ದೂರದ ಮಾರ್ಗದುದ್ದಕ್ಕೂ ವಿವಿಧ ಗ್ರಾಮದ ಭಕ್ತರು ಸಂಭ್ರಮದಿಂದ ಬಂಗಾರದ ಕಳಸ ಸ್ವಾಗತಿಸಿ, ಪೂಜೆ, ಮೆರವಣಿಗೆ ಮಾಡಿ ಮುಂದಿನ ಗ್ರಾಮಕ್ಕೆ ಕಳುಹಿಸಿದರು. ಮಾರ್ಗದುದ್ದಕ್ಕೂ ಅನೇಕ ಭಕ್ತರು ಪ್ರಸಾದ, ತಂಪು ಪಾನಿಯ, ಹಣ್ಣುಗಳನ್ನು ವಿತರಿಸಿದರು.

ಪಾದಯಾತ್ರೆಯಲ್ಲಿ ಸುಮಾರು 16 ಸಾವಿರಕ್ಕೂ ಅಧಿಕ ಪುರುಷರು, 4 ಸಾವಿರಕ್ಕೂ ಅಧಿಕ ಮಹಿಳೆಯರು ಇದ್ದರು. 10 ಗಂಟೆಗೆ ಕೂಡಲಸಂಗಮಕ್ಕೆ ಆಗಮಿಸುತ್ತಿದ್ದಂತೆ ವಿವಿಧ ಗ್ರಾಮಗಳಿಂದ ಬಂದ ಕಲಾ ತಂಡಗಳು ನೃತ್ಯ ಪ್ರದರ್ಶನ ಮಾಡುತ್ತ ಸಂಗಮೇಶ್ವರ ದೇವಾಲಯಕ್ಕೆ ಆಗಮಿಸಿದರು.

ವಿವಿಧ ಗ್ರಾಮದ ಮಹಿಳೆಯರು ಆರತಿಯೊಂದಿಗೆ ಕಳಸದ ಹಿಂದೆ ಸಂಗಮನಾಥನ ದೇವಾಲಯದಲ್ಲಿ ಐದು ಸುತ್ತು ಪ್ರದಕ್ಷಿಣೆ ಹಾಕಿ ಸಂಗಮೇಶ್ವರ ದೇವಾಲಯದ ಮುಂದೆ ಪೂಜೆ ಸಲ್ಲಿಸಿ ದೇವಾಲಯದಿಂದ ಬಸವೇಶ್ವರ ವೃತ್ತದ ಮೂಲಕ ಗ್ರಾಮದ ಕಳಸದ ಕಟ್ಟೆಯವರೆಗೆ ಮೆರವಣಿಗೆಯ ಮೂಲಕ ತಂದರು. ನಂತರ ಗ್ರಾಮಸ್ಥರು ಕಳಸಕ್ಕೆ ದಿಂಡ ನಮಸ್ಕಾರ ಹಾಕುವ ಮೂಲಕ ಭಕ್ತಿಯನ್ನು ತೋರ್ಪಡಿಸಿದರು.

ಪಾದಯಾತ್ರೆಯ ಮೂಲಕ ಕೂಡಲಸಂಗಮಕ್ಕೆ ತರತ್ತಿರುವ ಭಕ್ತರು
ಪಾದಯಾತ್ರೆಯ ಮೂಲಕ ಕೂಡಲಸಂಗಮಕ್ಕೆ ತರತ್ತಿರುವ ಭಕ್ತರು

ಸಂಗಮೇಶ್ವರ ಜಾತ್ರೆಯಂದು ಮಾತ್ರ ಕೂಡಲಸಂಗಮಕ್ಕೆ ಬರುವ ಬಂಗಾರದ ಕಳಸವನ್ನು ನೋಡುವುದು ಬಾಗ್ಯ ನಮ್ಮ ಬಯಕೆಗಳು ಇಡೇರಿರುವುದಕ್ಕಾಗಿ ನಾವು ಕಳಸದ ಜೊತೆ ಪಾದಯಾತ್ರೆಯ ಮೂಲಕ ಬರುತ್ತೆವೆ ಎಂದು ಪಾದಯಾತ್ರೆಯಲ್ಲಿ ಇದ್ದ ಭಕ್ತರು ಹೇಳಿದರು. ಹಿಂದೂ, ಮುಸ್ಲಿಂ, ಬೌದ್ಧರು ಕೂಡ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಕೃಷ್ಣಾ ನದಿಯಲ್ಲಿ ಬೇಸಿಗೆ ಬೀಸಿಲಿನ ತಾಪ ತಣಿಸಿಕೊಳ್ಳುತ್ತಿರುವ ಭಕ್ತರು ಪ್ರವಾಸಿಗರು
ಕೃಷ್ಣಾ ನದಿಯಲ್ಲಿ ಬೇಸಿಗೆ ಬೀಸಿಲಿನ ತಾಪ ತಣಿಸಿಕೊಳ್ಳುತ್ತಿರುವ ಭಕ್ತರು ಪ್ರವಾಸಿಗರು
ಪಾದಯಾತ್ರಿಗಳಿಂದ ಪುಣ್ಯಸ್ನಾನ
ಬಾಗಲಕೋಟೆಯಿಂದ ಕೂಡಲಸಂಗಮಕ್ಕೆ ಕಳಸದ ಜೊತೆಗೆ ಪಾದಯಾತ್ರೆ ಮೂಲಕ ಬಂದ ಬಹುತೇಕ ಭಕ್ತರು, ಪ್ರವಾಸಿಗರು ಮೊನಕಾಲು ಮಟ್ಟದ ಕೃಷ್ಣಾ ನದಿಯಲ್ಲಿ ಮಿಂದು ಬೇಸಿಗೆ ಬೀಸಿಲಿನ ತಾಪ ತಣಿಸಿಕೊಂಡರು, ವಿಸ್ತಾರವಾಗಿ ಹರಡಿದ್ದರು ನೀರು ಮಾತ್ರ ಮೊನಕಾಲು ಮಟ್ಟದಲ್ಲಿ ಇದೆ.ಇನ್ನೂ ಕೆಲವರು ದೇವಾಲಯ ಹೊರ ಆವರಣದ ಉದ್ಯಾನವನ ಗಿಡದ ನೆರಳನ ತೆಳಗೆ ವಿಶ್ರಾಂತಿ ಪಡೆದರು. ಸಂಚಾರಕ್ಕೆ ತೊಂದರೆ: ಬಸವೇಶ್ವರ ವೃತ್ತದಿಂದ ಸಂಗಮೇಶ್ವರ ದೇವಾಲಯದವರೆಗೆ ಇರುವ ರಸ್ತೆಗೆ ವ್ಯಾಪಾರಿಗಳು ನುಗ್ಗಿದ್ದರಿಂದ ಭಕ್ತರು ಸಂಚರಿಸಲು ತೊಂದರೆ ಅನುಭವಿಸಿದರು. ಮಾಹಿತಿ ಕೇಂದ್ರದ ಮುಂಭಾಗದಲ್ಲಿಯೇ ಅಧಿಕ ದ್ವಿಚಕ್ರವಾಹನಗಳು ನಿಂತಿರುವುದು ಸಂಚಾರಕ್ಕೆ ತೊಂದರೆ ಉಂಟುಮಾಡಿತು. ವಾಹನಗಳಲ್ಲಿ, ಬಸ್‌ಗಳಲ್ಲಿ ಬಂದ ಭಕ್ತರನ್ನು ಪೊಲೀಸ್ ಸಿಬ್ಬಂದಿ +ಸಂಗಮೇಶ್ವರ ಪ್ರೌಢಶಾಲಾ ಪ್ರವೇಶ ದ್ವಾರಕ್ಕೆ ತಡೆದಿದ್ದರಿಂದ ಭಕ್ತರು 600 ರಿಂದ 800 ಮೀಟರ್ ಬೀಸಿಲಿನಲ್ಲಿಯೇ ನಡೆದು ಸಂಗಮನಾಥನ ದರ್ಶನ ಪಡೆದು ಜಾತ್ರೆಯಲ್ಲಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT