ಬಳ್ಳಾರಿ: ಮುಂಬರುವ ಲೋಕಸಭಾ ಚುನಾವಣೆಗೆ ಬಳ್ಳಾರಿ(ಎಸ್ಟಿ ಮೀಸಲು) ಕ್ಷೇತ್ರ ದಿಂದ ನಿರೀಕ್ಷೆಯಂತೆ ಮಾಜಿ ಸಚಿವ ಬಿ. ಶ್ರೀರಾಮುಲು ಅವರಿಗೆ ಬಿಜೆಪಿ ಟಿಕೆಟ್ ಘೋಷಿಸಿದೆ. 2014ರಲ್ಲಿ ಒಮ್ಮೆ ಲೋಕಸಭೆ ಪ್ರವೇಶಿಸಿದ್ದ ಶ್ರೀರಾಮುಲು ಈ ಬಾರಿ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಟಿಕೆಟ್ ಘೋಷಣೆಗೂ ಮುಂಚೆಯೇ ಶ್ರೀರಾಮುಲು ಅವರು ಕ್ಷೇತ್ರದಾದ್ಯಂತ ಭರ್ಜರಿ ಪ್ರಚಾರ ಆರಂಭಿಸಿದ್ದರು. ಟಿಕೆಟ್ ಘೋಷಣೆಯು ಪ್ರಚಾರ ಕಾರ್ಯಕ್ಕೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಗೆ ಮತ್ತಷ್ಟು ಹುರುಪು ತುಂಬಿದೆ.
ಒಂದು ಹಂತದಲ್ಲಿ ರಾಯಚೂರು (ಎಸ್ಟಿ ಮೀಸಲು) ಕ್ಷೇತ್ರದಲ್ಲೂ ರಾಮುಲು ಅವರ ಹೆಸರು ಕೇಳಿ ಬಂದಿತ್ತು. ಬಳ್ಳಾರಿ ಮತ್ತು ರಾಯಚೂರು ಕ್ಷೇತ್ರಗಳಲ್ಲಿ ಶ್ರೀರಾಮುಲು ಅವರು ಸಮೀಕ್ಷೆ ನಡೆಸಿದ್ದು, ರಾಯಚೂರು ಅವರಿಗೆ ಪೂರಕವಾಗಿದೆ. ಅವರು ಅಲ್ಲಿಂದಲೇ ಸ್ಪರ್ಧಿಸುತ್ತಾರೆ ಎಂಬೆಲ್ಲ ಮಾತುಗಳು ಕೇಳಿ ಬಂದಿದ್ದವು. ಆದರೆ, ಅಂತಿಮವಾಗಿ ಪಕ್ಷದ ವರಿಷ್ಠರು ಶ್ರೀರಾಮುಲು ಅವರನ್ನು ಬಳ್ಳಾರಿಗೇ ನಿಯೋಜಿಸಿದ್ದಾರೆ.
ಕ್ಷೇತ್ರದ ವ್ಯಾಪ್ತಿಗೆ ಬರುವ 8 ವಿಧಾನಸಭಾ ಕ್ಷೇತ್ರಗಳ ಪೈಕಿ (ಬಳ್ಳಾರಿ ನಗರ–ಕಾಂಗ್ರೆಸ್, ಬಳ್ಳಾರಿ ಗ್ರಾಮಾಂತರ –ಕಾಂಗ್ರೆಸ್, ಕಂಪ್ಲಿ–ಕಾಂಗ್ರೆಸ್, ಸಂಡೂರು–ಕಾಂಗ್ರೆಸ್, ಕೂಡ್ಲಿಗಿ–ಕಾಂಗ್ರೆಸ್, ವಿಜಯನಗರ–ಕಾಂಗ್ರೆಸ್, ಹಗರಿಬೊಮ್ಮನಹಳ್ಳಿ–ಜೆಡಿಎಸ್, ಹೂವಿನಹಡಗಲಿ– ಬಿಜೆಪಿ) 6ರಲ್ಲಿ ಕಾಂಗ್ರೆಸ್ ಶಾಸಕರಿದ್ದರೆ, ತಲಾ ಒಂದೊಂದು ಕ್ಷೇತ್ರದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಗೆದ್ದಿವೆ. ಕಳೆದ ಲೋಕಸಭಾ ಚುನಾವಣೆಗೆ ಹೋಲಿಸಿದರೆ, ಕ್ಷೇತ್ರ ವ್ಯಾಪ್ತಿಯಲ್ಲಿ ಕೈ ಬಲ ಹೆಚ್ಚಾಗಿದೆ.
ಇನ್ನು ತಮಗೆ ಟಿಕೆಟ್ ಕೈತಪ್ಪಿದ್ದರ ಬಗ್ಗೆ ಪ್ರತಿಕ್ರಿಯಿಸಿರು ಸಂಸದ ವೈ. ದೇವೇಂದ್ರಪ್ಪ, ಸಹಜವಾಗಿಯೇ ನಾನೂ ಆಕಾಂಕ್ಷಿಯಾಗಿದ್ದೆ. ಪಟ್ಟಿಯಲ್ಲಿ ನನ್ನ ಹೆಸರೂ ಇತ್ತು. ಶ್ರೀರಾಮುಲು ರಾಜ್ಯ ಮಟ್ಟದ ನಾಯಕ. ನಾನೊಬ್ಬ ಜಿಲ್ಲಾ ಮಟ್ಟದ ನಾಯಕ. ಹೀಗಾಗಿಯೇ ಅವರಿಗೆ ಟಿಕೆಟ್ ಕೊಟ್ಟಿರಬಹುದು. ಬಿಜೆಪಿಯನ್ನು ಗೆಲ್ಲಿಸಲು ದುಡಿಯುತ್ತೇನೆ ಎಂದರು.