ಬಳ್ಳಾರಿ: ಎಸ್ಯುಸಿಐ ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿ ಎ.ದೇವದಾಸ್ ಅವರ ಪರ ಪಕ್ಷದ ಕಾರ್ಯಕರ್ತರು ಬಳ್ಳಾರಿ ನಗರದಲ್ಲಿ ಬೀದಿಬದಿ ಸಭೆ ಆಯೋಜಿಸಿ ಮತಯಾಚನೆ ಮಾಡಿದರು.
ಈ ವೇಳೆ ಮಾತನಾಡಿದ ಪಕ್ಷದ ಜಿಲ್ಲಾ ಸಮಿತಿ ಸದಸ್ಯ ಎನ್.ಪ್ರಮೋದ್, ‘ಹಿಂದಿನ ಹಲವು ಚುನಾವಣೆಗಳಂತೆ ಈ ಚುನಾವಣೆಯಲ್ಲೂ ಎಲ್ಲಾ ಪಕ್ಷಗಳು ಭರವಸೆಗಳನ್ನು ಕೊಡುತ್ತಿವೆ. ಮೋದಿಯವರು ನೀಡಿದ ಭರವಸೆಗಳು ಕೇವಲ ಸುಳ್ಳುಗಳು ಎಂಬುದು ಜನರಿಗೂ ಅರ್ಥವಾಗಿದೆ’ ಎಂದರು.
‘ಈ ಹತ್ತು ವರ್ಷಗಳಲ್ಲಿ ಅಂಬಾನಿ, ಅದಾನಿ ಆಸ್ತಿ ಏರುತ್ತಲೇ ಹೋಯಿತು. ಇನ್ನೊಂದು ಕಡೆ ಬಡ ಜನಗಳ ಜೀವನ ಪಾತಾಳಕ್ಕೆ ಹೋಯಿತು. 2023ರಲ್ಲಿ ಬಿಡುಗಡೆಯಾದ ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತವು 125 ದೇಶಗಳ ಪೈಕಿ 111ನೇ ಸ್ಥಾನದಲ್ಲಿದೆ. ಇದು ಮೋದಿ ಅವರ ವಿಕಸಿತ ಭಾರತದ ಇನ್ನೊಂದು ಮುಖ’ ಎಂದು ಆರೋಪಿಸಿದರು.
ಎಸ್ಯುಸಿಐ ಪಕ್ಷ ಈ ಸತ್ಯವನ್ನು ಜನರ ಮುಂದಿಟ್ಟು, ಅವರನ್ನು ಹೋರಾಟದ ದಿಕ್ಕಿಗೆ ಕರೆದುಕೊಂಡು ಹೋಗುತ್ತಿದೆ. ಚುನಾವಣೆಯನ್ನು ಹೋರಾಟದ ಭಾಗವಾಗಿ ಪರಿಗಣಿಸಿರುವ ಎಸ್ಯುಸಿಐ ಪಕ್ಷವನ್ನು ಜನ ಬೆಂಬಲಿಸಬೇಕು. ನಮ್ಮ ಪಕ್ಷದ ಅಭ್ಯರ್ಥಿ ಎ. ದೇವದಾಸ್ ಅವರಿಗೆ ಮತ ನೀಡಬೇಕು ಎಂದು ಅವರು ಮನವಿ ಮಾಡಿದರು.
ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾದ ಡಿ. ನಾಗಲಕ್ಷ್ಮಿ, ಸೋಮಶೇಖರ್ ಗೌಡ, ಎ. ಶಾಂತಾ ಮತ್ತು ಸದಸ್ಯರಾದ ನಾಗರತ್ನ, ಜಗದೀಶ್, ರವಿಕಿರಣ್ ಇದ್ದರು.