– ರಾಮು ಅರಕೇರಿ
ಸಂಡೂರು: ಪಟ್ಟಣದ ಉದ್ಯಾನಗಳು ನಿರ್ವಹಣೆ ಇಲ್ಲದೆ ಸೊರಗುತ್ತಿವೆ . ಈ ಬಗ್ಗೆ ವಿಚಾರಿಸಿದರೆ ಉದ್ಯಾನಗಳು ಇನ್ನೂ ವಿಜಯನಗರ ನಗರಾಭಿವೃದ್ಧಿ ಪ್ರಾಧಿಕಾರ(ವಾಡಾ)ದಿಂದ ಪುರಸಭೆಗೆ ಹಸ್ತಾಂತರವಾಗಿಲ್ಲ ಎಂಬ ಉತ್ತರ ನೀಡುತ್ತಾರೆ ಅಧಿಕಾರಿಗಳು.
ಪುರಸಭೆ ವ್ಯಾಪ್ತಿಯಲ್ಲಿ ಒಟ್ಟು 34 ಉದ್ಯಾನಗಳಿವೆ. ಅನೇಕ ಉದ್ಯಾನಗಳು ಸ್ಥಳೀಯರಿಂದ ಒತ್ತುವರಿಯಾಗಿವೆ ಎಂಬ ಆರೋಪಗಳು ಕೇಳಿ ಬಂದಿವೆ. ಕೆಲ ಉದ್ಯಾನಗಳನ್ನು ದನ–ಕರುಗಳನ್ನು ಕಟ್ಟಲು ಬಳಸಲಾಗುತ್ತಿದೆ. ಕಾರು, ಟ್ರ್ಯಾಕ್ಟರ್ ನಿಲ್ಲಿಸುವ ಪಾರ್ಕಿಂಗ್ ತಾಣಗಳೂ ಆಗಿವೆ.
ಆಟಿಕೆಗಳು, ಕನಿಷ್ಠ ನಾಲ್ಕು ಗಿಡಗಳೂ ಇಲ್ಲದೆ ಬೋಳಾದ ಉದ್ಯಾನಗಳೇ ಹೆಚ್ಚಾಗಿ ಕಾಣಸಿಗುತ್ತವೆ. ಎಲ್ಲೆಡೆ ಕಸ ರಾಶಿ ಇದೆ. ಉದ್ಯಾನಗಳ ನಿರ್ವಹಣೆ, ರಕ್ಷಣೆಗೆ ಅಧಿಕಾರಿಗಳು ಮುಂದಾಗುತ್ತಿಲ್ಲ ಎಂಬುದು ನಾಗರಿಕರ ಆರೋಪ.
ಹಸ್ತಾಂತರವಾಗಲಿ: ‘ವಿಜಯನಗರ ನಗರಾಭಿವೃದ್ಧಿ ಪ್ರಾಧಿಕಾರ(ವಾಡಾ)ದಿಂದ ಉದ್ಯಾನಗಳನ್ನು ಪುರಸಭೆಗೆ ಹಸ್ತಾಂತರ ಮಾಡಬೇಕಿದೆ. ಈವರೆಗೆ ಹಸ್ತಾಂತರವಾಗಿಲ್ಲ. ಹಸ್ತಾಂತರ ಮಾಡಲು ವಾಡಾದವು ಈಚೆಗೆ ಮುಂದೆ ಬಂದರೂ, ಉದ್ಯಾನಗಳ ಒತ್ತುವರಿ ತೆರವು ಮತ್ತು ಅಭಿವೃದ್ಧಿ ಪೂರ್ಣಗೊಳಿಸಿ ಒಪ್ಪಿಸುವಂತೆ ಕೋರಿ ಪುರಸಭೆ ಕಂದಾಯ ವಿಭಾಗದಿಂದ ಪತ್ರ ಬರೆಯಲಾಗಿದೆ’ ಎಂದು ಪುರಸಭೆ ಮುಖ್ಯಾಧಿಕಾರಿ ಕೆ. ಜಯಣ್ಣ ಹೇಳಿದರು.
ಬಡಾವಣೆಗೆ ವಾಡಾದಿಂದ ಅನುಮತಿ ನೀಡಿದ ನಂತರ ಉದ್ಯಾನಗಳನ್ನು ಹಸ್ತಾಂತರ ಮಾಡಿಕೊಳ್ಳಬೇಕು. ಹಸ್ತಾಂತರಗೊಂಡರೆ ಪುರಸಭೆ ಸಾಮಾನ್ಯ ನಿಧಿಯಲ್ಲಿ ಅಭಿವೃದ್ಧಿ ಮಾಡಲಾಗುವುದುಕೆ.ಜಯಣ್ಣ ,ಪುರಸಭೆ ಮುಖ್ಯಾಧಿಕಾರಿ
ಹಲವು ಸಭೆಗಳಲ್ಲಿ ಪ್ರಸ್ತಾಪ, ಅನುಷ್ಠಾನ ಶೂನ್ಯ: ಪುರಸಭೆಯ ಚುನಾಯಿತ ಪ್ರತಿನಿಧಿಗಳು ಅನೇಕ ಸಾಮಾನ್ಯ ಸಭೆಗಳಲ್ಲಿ ಉದ್ಯಾನಗಳ ಅವ್ಯವಸ್ಥೆ ಕುರಿತು ಚರ್ಚೆ ನಡೆಸಿದ್ದಾರೆ. ಸ್ಥಳೀಯ ಮೈನಿಂಗ್ ಕಂಪನಿಗಳಿಗೆ ನಿರ್ವಹಣೆ ವಹಿಸಲು ನಿರ್ಧಾರವನ್ನು ಮಾಡಲಾಗಿದೆ. ಆದರೂ, ಇದು ಅನುಷ್ಠಾನವಾಗಿಲ್ಲ.
ಪುರಸಭೆಯ 13 ,14, 15ನೇ ಹಣಕಾಸಿನಲ್ಲಿ ಅನುದಾನ ಮೀಸಲಿರಿಸಿ, ಉದ್ಯಾನಗಳ ಅಭಿವೃದ್ಧಿ ಮಾಡುವ ಅವಕಾಶವಿತ್ತು. ಆದರೆ, ವಾಡಾದಿಂದ ಹಸ್ತಾಂತರವಾಗಿಲ್ಲ ಎಂಬ ಕಾರಣಕ್ಕೆ ಎಲ್ಲವೂ ನನಗುದಿಗೆ ಬಿದ್ದಿವೆ. ಈಚೆಗೆ ಸಂಡೂರು ಶಾಸಕ ಈ. ತುಕಾರಾಂ ಅವರು ಕಾರ್ಯಕ್ರಮವೊಂದರಲ್ಲಿ ಮಾತನಾಡಿ, ಉದ್ಯಾನಗಳ ಅಭಿವೃದ್ಧಿಯನ್ನು ಅರಣ್ಯ ಇಲಾಖೆಗೆ ವಹಿಸುವ ಇಂಗಿತ ವ್ಯಕ್ತಪಡಿಸಿದ್ದರು. ಶಾಸಕರ ಇಚ್ಛಾಶಕ್ತಿಯಿಂದಲಾದರೂ ಉದ್ಯಾನಗಳ ಅಭಿವೃದ್ಧಿಯಾದರೆ ಸಾಕು ಎನ್ನುತ್ತಾರೆ ಸಂಡೂರಿನ ಜನ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.