ಬಳ್ಳಾರಿ: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಎಸ್ಯುಸಿಐ ಅಭ್ಯರ್ಥಿಗಳು ಗೆದ್ದರೆ ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಣ, ರೇಷನ್ ಪದ್ಧತಿಯನ್ನು ಬಲಪಡಿಸುವುದು, ಸರ್ಕಾರಿ ಇಲಾಖೆಗಳಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಭರವಸೆ ನೀಡಿದೆ.
ಬಳ್ಳಾರಿಯಲ್ಲಿ ಮಂಗಳವಾರ ಎಸ್ಯುಸಿಐ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಗಿದ್ದು, ಸರ್ಕಾರದ ಮಟ್ಟದಲ್ಲಿ ಭ್ರಷ್ಟಾಚಾರ ಕಡಿವಾಣಕ್ಕೆ ಕಠಿಣ ಕ್ರಮಕೈಗೊಳ್ಳುವುದು, ಗುತ್ತಿಗೆ ಕಾರ್ಮಿಕರನ್ನು ಕಾಯಂಗೊಳಿಸುವುದು, ಕೋಮುವಾದ ತಡೆಗಟ್ಟುವುದು ಹಾಗೂ ಜನರ ನಡುವೆ ಸಾಮರಸ್ಯ ಬೆಳೆಸುವುದಕ್ಕೆ ಆದ್ಯತೆ ನೀಡುವುದಾಗಿ ಪ್ರಣಾಳಿಕೆ ವಾಗ್ದಾನ ನೀಡಿದೆ.
ಪ್ರತಿ ವಾರ್ಡ್ಗಳಲ್ಲಿ ಸುಸಜ್ಜಿತ ‘ಜನ ಚಿಕಿತ್ಸಾಲಯ’ ತೆರೆಯುವುದು, ನಗರದಲ್ಲಿ ರಿಂಗ್ ರೋಡ್ ನಿರ್ಮಿಸುವುದು, ಉದ್ಯೋಗ ಖಾತ್ರಿ ಯೋಜನೆಯನ್ನು ನಗರಕ್ಕೂ ವಿಸ್ತರಿಸುವುದು, ರೈತರ, ಕಾರ್ಮಿಕರ, ಮಹಿಳೆಯರ, ವಿದ್ಯಾರ್ಥಿ-ಯುವಜನರ ಬೇಡಿಕೆಗಳನ್ನು ವಿಧಾನ ಸಭೆಯಲ್ಲಿ ಮೊಳಗಿಸುವುದಾಗಿ ಆಶ್ವಾಸನೆ ನೀಡಿದೆ.
ಪ್ರಣಾಳಿಕೆ ಬಿಡುಗಡೆ ಎಸ್ಯುಸಿಐ ರಾಜ್ಯ ಘಟಕದ ಉಪಾಧ್ಯಕ್ಷ ರಾಧಾಕೃಷ್ಣ ಉಪಾಧ್ಯ, ಬಳ್ಳಾರಿ ನಗರ ಅಭ್ಯರ್ಥಿ ಆರ್.ಸೋಮಶೇಖರ ಗೌಡ, ಕಂಪ್ಲಿ ಕ್ಷೇತ್ರದ ಅಭ್ಯರ್ಥಿ ಎ.ದೇವದಾಸ್, ಜಿಲ್ಲಾ ಸಮಿತಿ ಸದಸ್ಯರಾದ ಮಂಜುಳಾ ಎಂ.ಎನ್.ನಾಗಲಕ್ಷ್ಮಿ.ಡಿ., ಡಾ.ಪ್ರಮೋದ್, ಗೋವಿಂದ್ ಮುಂತಾದವರು ಉಪಸ್ಥಿತರಿದ್ದರು.