ಬೆಳಗಾವಿ: ಕಳೆದ ವಾರ ಇಬ್ಬರು ಯುವತಿಯರು ರೈಲು ನಿಲ್ದಾಣಕ್ಕೆ ಹೊರಟಿದ್ದಾಗ ಬೀದಿನಾಯಿಗಳ ಹಿಂಡು ಬೆನ್ನಟ್ಟಿ ಬಂತು. ಅವುಗಳಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಇಬ್ಬರೂ ಯುವತಿಯರು ಬಿದ್ದು ಗಾಯ ಮಾಡಿಕೊಂಡರು.
* ಫೆ.26ರಂದು 12 ಬೀದಿನಾಯಿಗಳ ಹಿಂಡು ಮಕ್ಕಳ ಗುಂಪಿನ ಮೇಲೆ ದಾಳಿ ಮಾಡಿತು. ನಾಲ್ವರು ಕಂದಮ್ಮಗಳು ತೀವ್ರ ಗಾಯಗೊಂಡರು.
* ಶಾಹೂನಗರದ ಹಿರಿಯರೊಬ್ಬರು ವಾಯುವಿಹಾರಕ್ಕೆ ಹೊರಟಾಗ ನಾಯಿಗಳ ಹಿಂಡು ಅಟ್ಟಾಡಿಸಿ ಕಚ್ಚಿತು. ಪರಿಣಾಮ ಮಹಿಳೆ ಕೆಎಲ್ಇ ಆಸ್ಪತ್ರೆಯಲ್ಲಿ ದಾಖಲಾಗಬೇಕಾಯಿತು.
* ಆಜಮ್ನಗರದಲ್ಲಿ ತರಕಾರಿ ತೆಗೆದುಕೊಂಡು ಹೊರಟಿದ್ದ ವ್ಯಕ್ತಿಯ ಬೈಕ್ ಬೆನ್ನಟ್ಟಿದ ನಾಯಿಗಳ ಹಿಂಡು ಅವರನ್ನು ಬೀಳಿಸಿ ಗಾಯಗೊಳ್ಳುವಂತೆ ಮಾಡಿದವು.
* ಎಂ.ಕೆ.ಹುಬ್ಬಳ್ಳಿ, ಚನ್ನಮ್ಮನ ಕಿತ್ತೂರು, ಚಿಕ್ಕೋಡಿ, ಮುಗಳಖೋಡ, ಕಾಕತಿ, ಹುಕ್ಕೇರಿ... ಹೀಗೆ ಒಂದಿಲ್ಲೊಂದು ಕಡೆ ನಾಯಿ ದಾಳಿಗೆ ಒಳಗಾದವರ ದೊಡ್ಡ ಪಟ್ಟಿಯೇ ಸಿಗುತ್ತದೆ. ಇವೆಲ್ಲ ಒಂದೇ ವರ್ಷದಲ್ಲಿ ಸಂಭವಿಸಿದ ಘಟನೆಗಳು. ಮಾಧ್ಯಮಗಳಿಗೆ ತಿಳಿಯದೇ ಉಳಿದ ಪ್ರಕರಣಗಳು ಲೆಕ್ಕಕ್ಕೇ ಇಲ್ಲ.
ಬೀದಿನಾಯಿಗಳು ಇಷ್ಟೆಲ್ಲ ಕಷ್ಟ ತಂದೊಡ್ಡಿದರೂ ಮಹಾನಗರ ಪಾಲಿಕೆ ಮಾತ್ರ ಇವುಗಳ ನಿಯಂತ್ರಣಕ್ಕೆ ಪರಿಣಾಮಕಾರಿ ಕ್ರಮ ತೆಗೆದುಕೊಳ್ಳುತ್ತಿಲ್ಲ. ಜನರ ಆಕ್ರೋಶಗೊಂಡಾಗ ಮಾತ್ರ ‘ಆಪರೇಷನ್ ಡಾಗ್’ ಹೆಸರಲ್ಲಿ ಕೆಲವು ನಾಯಿಗಳನ್ನು ಹಿಡಿಯುತ್ತಾರೆ. ಕೆಲವೇ ದಿನಗಳಲ್ಲಿ ಈ ಆಪರೇಷನ್ ಕೂಡ ವಿಫಲವಾಗಿ ಮತ್ತೆ ನಾಯಿಗಳ ಉಪಟಳ ಹೆಚ್ಚಾಗುತ್ತದೆ.
2022ರಿಂದ ಮಹಾನಗರ ಪಾಲಿಕೆ ‘ಆಪರೇಷ್ ಡಾಗ್’ ಮುಂದುವರಿಸಿದೆ. ಈಗಲೂ ಪ್ರತಿವಾರ 200 ನಾಯಿಗಳ ಆಪರೇಷನ್ ಮಾಡಲಾಗುತ್ತಿದೆ ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡುತ್ತಲೇ ಇದ್ದಾರೆ. ಇದು ಯಶಸ್ವಿಯಾಗಿದ್ದರೆ ನಾಯಿಗಳ ಸಂಖ್ಯೆ ಕಡಿಮೆ ಆಗಬೇಕಿತ್ತು. ಅದಕ್ಕೆ ವಿರುದ್ಧವಾಗಿ ಹೆಚ್ಚುತ್ತಲೇ ಆಗಿದೆ. ಇಲ್ಲಿನ ಜಿಲ್ಲಾಸ್ಪತ್ರೆ, ಕೆೆಎಲ್ಇ ಆಸ್ಪತ್ರೆಗಳಲ್ಲಿ ನಾಯಿ ನಂಜು ನಿವಾರಕ ಇಂಜೆಕ್ಷನ್ ಪಡೆದವರ ಸಂಖ್ಯೆಯೇ ಇದನ್ನು ದೃಢೀಕರಿಸುತ್ತದೆ.
2024ರ ಜನವರಿಯಿಂದಲೇ ಲೆಕ್ಕ ಹಾಕಿದರೆ ಬರೋಬ್ಬರಿ 22 ಸಾವಿರಕ್ಕೂ ಅಧಿಕ ಬೀದಿನಾಯಿಗಳು ನಗರದಲ್ಲಿ ಮಾತ್ರ ಇವೆ ಎನ್ನುವುದು ಪಾಲಿಕೆ ಅಧಿಕಾರಿಗಳೇ ನೀಡುವ ಮಾಹಿತಿ.
ಕಳೆದ ವರ್ಷ ಇದಕ್ಕಾಗಿ ಐದು ತಂಡಗಳನ್ನು ಸಿದ್ಧ ಮಾಡಲಾಗಿತ್ತು. ಒಂದು ವಾರ ಕಾರ್ಯಾಚರಣೆ ನಡೆಸಿದ ತಂಡಗಳು ಮಾಯವಾದವು. ಬೆಂಗಳೂರಿನ ಗುತ್ತಿಗೆದಾರರೊಬ್ಬರಿಗೆ ಇದರ ಟೆಂಡರ್ ನೀಡಲಾಗಿತ್ತು. ‘ಪೆಟ್ ಟ್ರ್ಯಾಕರ್’ ಬಳಸಿ ನಾಯಿಗಳನ್ನು ಹಿಡಿಯಲಾಗುತ್ತು. ಸದ್ಯ ಈಗಲಾದರೂ ನಾಯಿ ಉಪಟಳ ತಪ್ಪಿತು ಎಂದು ಜನ ನಿಟ್ಟುಸಿರು ಬಿಟ್ಟಿದ್ದರು. ಆದರೆ, ಆ ನೆಮ್ಮದಿ ಬಹಳ ದಿನ ಉಳಿಯಲಿಲ್ಲ.
ಬೆಳಗಾವಿ ನಗರದ ಬೀದಿಬೀದಿಯಲ್ಲೂ ಈಗ ನಾಯಿಗಳ ದೊಡ್ಡ ದಂಡೇ ಇದೆ. ಪಾದಚಾರಿ ಆಗಿದ್ದರೂ ಸರಿ ವಾಹನ ಸವಾರರಾಗಿದ್ದರೂ ಸರಿ; ಎಲ್ಲೆಂದರಲ್ಲಿ ಬೀಡುಬಿಟ್ಟ ನಾಯಿಗಳು ಬೆನ್ನಟ್ಟದೇ ಬಿಡಲಾರವು. ನಗರದ ಪ್ರತಿ ಗಲ್ಲಿಯಲ್ಲೂ ಈಗ ‘ಬೌಬೌ ಸಂಘಗಳು’ ಹೆಚ್ಚು ಕ್ರಿಯಾಶೀಲವಾಗಿವೆ.
ನಗರ ಮಾತ್ರವಲ್ಲ; ಜಿಲ್ಲೆಯ ಬಹುಪಾಲು ಪಟ್ಟಣಗಳಲ್ಲೂ ಜನ ಬೀದಿ ನಾಯಿಗಳ ಕಾರಣ ಸಂಕಷ್ಟ ಎದುರಿಸುವಂತಾಗಿದೆ. ಹಗಲಿನಲ್ಲಿ ಬೆನ್ನಟ್ಟಿ ಕಾಡುವ ನಾಯಿಗಳಿಂದ ಹೇಗೋ ತಪ್ಪಿಸಿಕೊಳ್ಳಬಹುದು. ಆದರೆ, ತಡರಾತ್ರಿಯಲ್ಲೂ ಎಡೆಬಿಡದೇ ಬೌಗುಡುವ ಆ ಹಿಂಡಿನ ಹಿಂಸೆ ತಾಳಲು ಸಾಧ್ಯವಿಲ್ಲ.
ನಗರದಲ್ಲಿ ಸಂತಾನಶಕ್ತಿ ನಿಯಂತ್ರಣ ಚಿಕಿತ್ಸೆ ಮಾಡಲು ಅನಿಮಲ್ ಬರ್ಥ್ ಕಂಟ್ರೋಲ್ ಸೆಂಟರ್ (ಎಬಿಸಿ) ಇದೆ. ಆದರೆ, ಪಾಲಿಕೆ ಆಚೆಗೆ ಇರುವ ನಾಯಿಗಳು ಹೇಳುವವರು, ಕೇಳುವವರೇ ಇಲ್ಲ. ಆಡಿದ್ದೇ ಆಟ– ಬೊಗಳಿದ್ದೇ ನಾದ ಎನ್ನುವಂತಾಗಿದೆ.
2023ನೇ ಸಾಲಿನಲ್ಲಿ 1900ಕ್ಕೂ ಹೆಚ್ಚು ನಾಯಿ ಕಚ್ಚಿದ ಪ್ರಕರಣಗಳು ಪತ್ತೆಯಾಗಿವೆ. 2017ರಿಂದ ಇಲ್ಲಿಯವರೆಗೆ ಪಂತ ಬಾಳೇಕುಂದ್ರಿ, ಚಿಕ್ಕೋಡಿ ಸೇರಿ ಎರಡು ಸಾವು ಸಂಭವಿಸಿವೆ.
ಪಾಲಿಕೆ ವ್ಯಾಪ್ತಿಯಲ್ಲಿ 2022ರ ಜುಲೈನಿಂದ 2024ರ ಫೆಬ್ರುವರಿ ಅವಧಿಯಲ್ಲಿ 3795 ಬೀದಿನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಈ ಚಿಕಿತ್ಸೆ ಮುಂದುವರಿದಿದೆಡಾ.ಸಂಜೀವ ನಾಂದ್ರೆ ಆರೋಗ್ಯಾಧಿಕಾರಿ ಮಹಾನಗರ ಪಾಲಿಕೆ
ಈಚೆಗೆ ರೈಲು ನಿಲ್ದಾಣದ ಕಡೆಗೆ ಹೊರಟಿದ್ದೆ. ಬೆಳಿಗ್ಗೆ 6ರ ಸುಮಾರಿಗೆ ಕಾಂಗ್ರೆಸ್ ಬಾವಿಯ ಬಳಿ ಬೀದಿನಾಯಿಗಳು ಅಟ್ಟಿಸಿಕೊಂಡು ಬಂದವು. ಓಡುವ ಭರದಲ್ಲಿ ಬಿದ್ದು ಕಾಲು ಮುರಿದುಕೊಂಡಿದ್ದೇನೆಮನಸ್ವಿ ಬಸ್ತವಾಡಕರ ಕಾಲೇಜು ವಿದ್ಯಾರ್ಥಿನಿ
ಶಾಹೂನಗರ ಉದ್ಯಾನದಲ್ಲಿ ಹೂವು ಕೀಳುತ್ತಿದ್ದ ವೇಳೆ ಏಕಾಏಕಿ ನಾಯಿಗಳು ದಾಳಿ ಮಾಡಿ ಕಾಲಿಗೆ ಕಚ್ಚಿದವು. ನಾನು 7 ಇಂಜೆಕ್ಷನ್ ತೆಗೆದುಕೊಳ್ಳವುದು ಅನಿವಾರ್ಯವಾಯಿತುಈರವ್ವ ಶಾಹೂ ನಗರ ನಿವಾಸಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.