ಬೆಂಗಳೂರು: ‘ತಿರುಮೇನಹಳ್ಳಿಯಲ್ಲಿರುವ ಹಜ್ ಭವನದಲ್ಲಿ ಶನಿವಾರ ಸಂಭವಿಸಿದ ಬೆಂಕಿ ಅವಘಡದಿಂದ ₹ 3 ಕೋಟಿ ನಷ್ಟ ಆಗಿದೆ’ ಎಂದು ರಾಜ್ಯ ಹಜ್ ಸಮಿತಿಯ ಕಾರ್ಯನಿರ್ವಹಣಾಧಿಕಾರಿ ಸರ್ಫರಾಜ್ ಖಾನ್ ಅವರು ಕೊತ್ತನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
‘ಹಜ್ ಯಾತ್ರಿಗಳು ತಾತ್ಕಾಲಿಕವಾಗಿ ಉಳಿದುಕೊಳ್ಳಲು ಭವನ ನಿರ್ಮಿಸಲಾಗಿದೆ. ವಸತಿ, ನೀರು, ಶೌಚಾಲಯ, ಕಾಗದ ಪತ್ರಗಳ ಹಂಚಿಕೆ, ಸಾರಿಗೆ ಸೇರಿದಂತೆ ಹಲವು ಸೌಲಭ್ಯಗಳು ಭವನದಲ್ಲಿವೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.
‘ಅ. 28ರಂದು ಸಂಜೆ 5 ಗಂಟೆಗೆ ಹಜ್ ಭವನದ ಎರಡನೇ ಹಾಗೂ ಮೂರನೇ ಮಹಡಿಯಲ್ಲಿದ್ದ ಸಮ್ಮೇಳನ ಸಭಾಂಗಣದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿತ್ತು. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸಿದ್ದಾರೆ. ಅವಘಡದಿಂದಾಗಿ ಸಭಾಂಗಣದಲ್ಲಿದ್ದ ಪೀಠೋಪಕರಣ ಹಾಗೂ ಇತರೆ ಸಲಕರಣಿಗಳು ಸುಟ್ಟಿವೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದ ಕೆ.ಆರ್.ಡಿ.ಎಲ್ ಅಧಿಕಾರಿಗಳು, ಸುಮಾರು ₹ 3 ಕೋಟಿ ನಷ್ಟ ಆಗಿರುವುದಾಗಿ ಹೇಳಿದ್ದಾರೆ. ಅವಘಡದ ಬಗ್ಗೆ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಿ ಹಜ್ ಸಮಿತಿ ತ್ವರಿತವಾಗಿ ವರದಿ ನೀಡಲು ಕ್ರಮ ಕೈಗೊಳ್ಳಿ’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪೊಲೀಸರು, ‘ದೂರು ಪರಿಶೀಲಿಸಲಾಗುತ್ತಿದೆ’ ಎಂದರು.
ಸಚಿವ ಭೇಟಿ: ಅಲ್ಪಸಂಖ್ಯಾತ ಮತ್ತು ಹಜ್ ಸಚಿವ ಜಮೀರ್ ಅಹಮ್ಮದ್ ಖಾನ್ ಅವರು ಹಜ್ ಭವನಕ್ಕೆ ಭಾನುವಾರ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಬೆಂಕಿ ಅವಘಡದ ಬಗ್ಗೆ ತನಿಖೆ ನಡೆಸಲಾಗುವುದು. ಹಾನಿಗೀಡಾಗಿರುವ ಸಭಾಂಗಣದ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು’ ಎಂದರು.