ಬೆಂಗಳೂರು: ‘ಕನ್ನಡಕ್ಕಾಗಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆ (ಎಫ್ಕೆಸಿಸಿಐ) ವತಿಯಿಂದ ಒಂದು ಪ್ರಶಸ್ತಿಯನ್ನು ಸ್ಥಾಪಿಸಬೇಕು. ಇದರ ಮೂಲಕ ಕನ್ನಡ ಭಾಷೆಗೆ ಮೆರಗು ತರಬೇಕು’ ಎಂದು ಕಂದಾಯ ಸಚಿವ ಆರ್.ಅಶೋಕ ಸಲಹೆ ನೀಡಿದರು.
ಎಫ್ಕೆಸಿಸಿಐ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ 66 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ದಿವಂಗತ ಪುನೀತ್ ರಾಜಕುಮಾರ್ ಅವರ ಸಮಾಜಮುಖಿ ಕೆಲಸಗಳಿಂದ ಪ್ರೇರಣೆ ಪಡೆದು ಕನ್ನಡಕ್ಕಾಗಿ ಇನ್ನಷ್ಟು ಹೆಚ್ಚು ಕೆಲಸ ಮಾಡುವಂತಾಗಬೇಕು’ ಎಂದರು.
ಗಡಿನಾಡು ಪ್ರಾಧಿಕಾರದ ಅಧ್ಯಕ್ಷ ಸಿ.ಸೋಮಶೇಖರ್, ‘ಕನ್ನಡ ನಾಡು ನುಡಿಯ ಸೇವೆಗೆ ಎಲ್ಲರೂ ಮುಂದಾಗಬೇಕು. ಈ ಕೈಂಕರ್ಯ ನವೆಂಬರ್ ತಿಂಗಳಿಗೆ ಸೀಮಿತವಾಗಬಾರದು. ಪ್ರತಿ ದಿನವೂ ಮನೆ ಮನಗಳಲ್ಲಿ ಕನ್ನಡ ಭಾಷೆ ಹಾಸು ಹೊಕ್ಕಾಗಬೇಕು’ ಎಂದರು.
ಕೋವಿಡ್ ನಿಯಂತ್ರಣಕ್ಕಾಗಿ ಜೀವದ ಹಂಗು ತೊರೆದು ಶ್ರಮಿಸಿದ ವೈದ್ಯರು, ಶುಶ್ರೂಷಕರು ಹಾಗೂ ಆಶಾ ಕಾರ್ಯಕರ್ತೆಯರನ್ನು ಗೌರವಿಸಲಾಯಿತು.
ವಿದ್ವಾಂಸ ಮಲ್ಲೇಪುರಂ ಜಿ.ವೆಂಕಟೇಶ್, ಉದ್ಯಮಿ ಪೆರಿಕಲ್ ಸುಂದರ್, ಎಫ್ಕೆಸಿಸಿಐ ಅಧ್ಯಕ್ಷ ಡಾ.ಐ.ಎಸ್ ಪ್ರಸಾದ್, ಹಿರಿಯ ಉಪಾಧ್ಯಕ್ಷ ಜಿ.ವಿ.ಗೋಪಾಲ ರೆಡ್ಡಿ, ಉಪಾಧ್ಯಕ್ಷ ರಮೇಶಚಂದ್ರ ಲಹೋಟಿ ಮತ್ತಿತರರು ಉಪಸ್ಥಿತರಿದ್ದರು.