ಬೆಂಗಳೂರು: ‘ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ, ಬಿಜೆಪಿಯ ಎಂ. ಕೃಷ್ಣಪ್ಪ ಅವರು ಶಾಸಕ ಸ್ಥಾನದಲ್ಲಿ ಮುಂದುವರಿಯಬಾರದು’ ಎಂದು ಲೋಕಾಯುಕ್ತ ನ್ಯಾಯಮೂರ್ತಿ ವೈ. ಭಾಸ್ಕರ ರಾವ್ ಹೇಳಿದ್ದಾರೆ.
‘ಕೃಷ್ಣಪ್ಪ ವಿರುದ್ಧದ ಆರೋಪಗಳು ದೃಢಪಟ್ಟಿವೆ’ ಎಂದು ಅವರು ರಾಜ್ಯಪಾಲರಿಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಉತ್ತರಹಳ್ಳಿ ಗ್ರಾಮದ ಸರ್ವೆ ಸಂಖ್ಯೆ 103/2ರಲ್ಲಿನ 39 ಗುಂಟೆ ಮತ್ತು ಸರ್ವೆ ಸಂಖ್ಯೆ 103/1ರಲ್ಲಿ 36 ಗುಂಟೆ ಜಮೀನನ್ನು ಸ್ವಾಧೀನ ಪ್ರಕ್ರಿಯೆಯಿಂದ ಅಕ್ರಮವಾಗಿ ಕೈಬಿಟ್ಟ ಆರೋಪ ಕೃಷ್ಣಪ್ಪ ಅವರ ವಿರುದ್ಧ ಇತ್ತು.
ಡಿನೋಟಿಫಿಕೇಷನ್ ನಂತರ ಕೃಷ್ಣಪ್ಪ ಅವರು ತಮ್ಮ ಪುತ್ರಿ ರೇಶ್ಮಾ ಸುಪ್ರೀತ್ ಮತ್ತು ಅಳಿಯ ಸುಪ್ರೀತ್ ಸುರೇಶ್ ಒಡೆತನದ ರೇನ್ಬೋ ಪ್ರಾಪರ್ಟಿಸ್ ಎಂಬ ಕಂಪೆನಿ ಜೊತೆ 2009ರಲ್ಲಿ ಜಂಟಿ ಒಪ್ಪಂದ ಮಾಡಿಕೊಂಡರು. ಈ ಜಮೀನಿನಲ್ಲಿ ಅವರು ಅಕ್ರಮವಾಗಿ ಬಹುಮಹಡಿ ವಸತಿ ಸಂಕೀರ್ಣ ನಿರ್ಮಿಸಿದ್ದಾರೆ ಎಂದು ಆರೋಪಿಸಲಾಗಿತ್ತು.
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ಕೃಷ್ಣಪ್ಪ ಅವರು, ‘ನನ್ನ ವಿರುದ್ಧದ ಪ್ರಕರಣವನ್ನು ಲೋಕಾಯುಕ್ತರು ಕೈಬಿಟ್ಟಿದ್ದಾರೆ. ನಾನು ನಿರ್ದೋಷಿ ಎಂದು ಹೇಳಿದ್ದಾರೆ’ ಎಂದು ತಿಳಿಸಿದರು.