ಬೀದರ್: 2023–24ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ರಾಜ್ಯಮಟ್ಟದಲ್ಲಿ ಬೀದರ್ ಜಿಲ್ಲೆಯ ಸ್ಥಾನ ಕುಸಿದರೂ ಒಟ್ಟಾರೆ ಫಲಿತಾಂಶ ಹೆಚ್ಚಳವಾಗಿರುವುದು ವಿಶೇಷ.
ಬೀದರ್ ಜಿಲ್ಲೆಗೆ ಒಟ್ಟಾರೆ ಶೇ 81.69ರಷ್ಟು ಫಲಿತಾಂಶ ಬಂದಿದೆ. ಹೋದ ವರ್ಷಕ್ಕೆ ಹೋಲಿಸಿದಲ್ಲಿ ಶೇ 3.69ರಷ್ಟು ಹೆಚ್ಚಿಗೆ ಫಲಿತಾಂಶ ಬಂದಿದೆ. ರಾಜ್ಯದ ಜಿಲ್ಲೆಗಳ ಪಟ್ಟಿಯಲ್ಲಿ ಬೀದರ್ ಜಿಲ್ಲೆ 19ನೇ ಸ್ಥಾನ ಪಡೆದಿದೆ. ಹೋದ ವರ್ಷಕ್ಕಿಂತ ಒಂದು ಸ್ಥಾನ ಕೆಳಗೆ ಕುಸಿದಿದೆ.
2023ನೇ ಸಾಲಿನಲ್ಲಿ ಜಿಲ್ಲೆಯ ಒಟ್ಟಾರೆ ಫಲಿತಾಂಶ ಶೇ 78ರಷ್ಟು ಬಂದಿತ್ತು. ಆಗ 18ನೇ ಸ್ಥಾನ ಪಡೆದಿತ್ತು. ಈ ವರ್ಷ ಶೇ 3.69ರಷ್ಟು ಫಲಿತಾಂಶ ಹೆಚ್ಚಿಗೆ ಬಂದಿದೆ.
ಪರೀಕ್ಷೆಗೆ ಒಟ್ಟು 19,227 ಫ್ರೆಶರ್ ವಿದ್ಯಾರ್ಥಿಗಳು ಹಾಜರಾಗಿದ್ದರು. ಈ ಪೈಕಿ 15,707 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಇನ್ನು, ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಹೋಲಿಸಿದರೆ ಗ್ರಾಮೀಣರು ಹೆಚ್ಚಿನ ಸಂಖ್ಯೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಶೇ 87.76ರಷ್ಟು ಗ್ರಾಮೀಣ ಪ್ರದೇಶದವರು ಉತ್ತೀರ್ಣರಾಗಿದ್ದಾರೆ. ಶೇ 80.17ರಷ್ಟು ನಗರ ಪ್ರದೇಶದ ವಿದ್ಯಾರ್ಥಿಗಳು ಪಾಸಾಗಿದ್ದಾರೆ.
ಇನ್ನು, ವಿಜ್ಞಾನ ವಿಭಾಗದಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಶೇ 89.76ರಷ್ಟು ವಿಜ್ಞಾನ ವಿಭಾಗಕ್ಕೆ ಫಲಿತಾಂಶ ಬಂದಿದೆ. ಒಟ್ಟು 12,680 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 11,382 ವಿದ್ಯಾರ್ಥಿಗಳು ಪಾಸಾಗಿದ್ದಾರೆ.
ವಾಣಿಜ್ಯ ವಿಭಾಗ ನಂತರದ ಸ್ಥಾನದಲ್ಲಿದೆ. ಪರೀಕ್ಷೆ ಬರೆದ 2,278 ವಿದ್ಯಾರ್ಥಿಗಳ ಪೈಕಿ 1,655 ಜನ ಪಾಸಾಗಿದ್ದಾರೆ. ಇನ್ನು, ಕಲಾ ವಿಭಾಗಕ್ಕೆ ಶೇ 62.54 ಫಲಿತಾಂಶ ಬಂದಿದೆ. ಒಟ್ಟು 4,269 ವಿದ್ಯಾರ್ಥಿಗಳಲ್ಲಿ 2,670 ಮಂದಿ ಉತ್ತೀರ್ಣರಾಗಿದ್ದಾರೆ.
ಪ್ರತಿ ವರ್ಷ ಪಿಯು ಫಲಿತಾಂಶ ಬಂದಾಗ ಬೀದರ್ ಸೇರಿದಂತೆ ಕಲ್ಯಾಣ ಕರ್ನಾಟಕದ ಯಾವುದಾದರೂ ಒಂದು ಜಿಲ್ಲೆ ಫಲಿತಾಂಶದಲ್ಲಿ ಕೊನೆಯ ಸ್ಥಾನದಲ್ಲಿ ಇರುತ್ತಿತ್ತು. ಈ ಸಲ ಹಾಗೆ ಆಗಿಲ್ಲ. ಬೀದರ್ ಸೇರಿದಂತೆ ಕಲ್ಯಾಣ ಕರ್ನಾಟಕದ ಇತರೆ ಜಿಲ್ಲೆಗಳು ಉತ್ತಮ ಸಾಧನೆ ತೋರಿವೆ.
ಹೋದ ವರ್ಷ ಬೀದರ್ ಜಿಲ್ಲೆ 18ನೇ ಸ್ಥಾನದಲ್ಲಿತ್ತು. ಈ ವರ್ಷ 19ನೇ ಸ್ಥಾನಕ್ಕೆ ಕುಸಿದಿದೆ. ಆದರೆ, ಫಲಿತಾಂಶ ಮಾತ್ರ ಏರಿಕೆ ಕಂಡಿದೆ. ಫಲಿತಾಂಶ ಸುಧಾರಣೆಗೆ ಡಿಡಿಪಿಯು ಕಚೇರಿ ವಾರ್ಷಿಕ ಪರೀಕ್ಷೆಯ ಆರು ತಿಂಗಳ ಮುಂಚಿನಿಂದಲೇ ಸಿದ್ಧತೆ ನಡೆಸಿದ್ದು ಪ್ರಮುಖ ಕಾರಣ.
ಜಿಲ್ಲೆಯ ಪ್ರಾಂಶುಪಾಲರು, ಉಪನ್ಯಾಸಕರ ಸಂಘಗಳ ಸಭೆ ಕರೆದು, ಓದಿನಲ್ಲಿ ಯಾವ ವಿದ್ಯಾರ್ಥಿಗಳು ಹಿಂದಿದ್ದಾರೆ. ಅಂತಹ ವಿದ್ಯಾರ್ಥಿಗಳನ್ನು ಗುರುತಿಸಲಾಯಿತು. ನಂತರ ಸಂಪನ್ಮೂಲ ವ್ಯಕ್ತಿಗಳಿಂದ ಅವರಿಗೆ ವಿಶೇಷ ತರಗತಿಗಳನ್ನು ನಡೆಸಿದ ಪರಿಣಾಮ ಒಟ್ಟಾರೆ ಫಲಿತಾಂಶ ಸುಧಾರಣೆ ಕಂಡಿದೆ.
ಜಿಲ್ಲಾ ಪ್ರಾಂಶುಪಾಲರ ಸಂಘ ಉಪನ್ಯಾಸಕರ ಸಂಘಗಳ 2–3 ಸಭೆ ನಡೆಸಿ ಓದಿನಲ್ಲಿ ಹಿಂದೆಯಿದ್ದ ಮಕ್ಕಳಿಗೆ ಜಿಲ್ಲಾಮಟ್ಟದಲ್ಲಿ ವಿಶೇಷ ಕಾರ್ಯಾಗಾರ ತರಗತಿಗಳನ್ನು ನಡೆಸಿದ್ದರಿಂದ ಜಿಲ್ಲೆಯ ಒಟ್ಟಾರೆ ಫಲಿತಾಂಶ ಸುಧಾರಣೆ ಕಂಡಿದೆ. ಇದರಲ್ಲಿ ಎಲ್ಲರ ಶ್ರಮ ಇದೆ.ಚಂದ್ರಕಾಂತ ಶಹಾಬಾದಕರ್ ಡಿಡಿಪಿಯು ಬೀದರ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.