ಔರಾದ್: ಬಿಸಿಲಿನ ತಾಪ ಹೆಚ್ಚುತ್ತಿದ್ದಂತೆ ಚುನಾವಣಾ ಕಾವೂ ಏರತೊಡಗಿದೆ. ಬೀದರ್ ಲೋಕಸಭಾ ಕ್ಷೇತ್ರಕ್ಕೆ ಈ ಬಾರಿ ಭಾರಿ ಪೈಪೋಟಿ ಏರ್ಪಟ್ಟಿದೆ. ಕೇಂದ್ರ ಸಚಿವ, ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ 3ನೇ ಬಾರಿ ಸಂಸದರಾಗಲು ಇನ್ನಿಲ್ಲದ ಕಸರತು ನಡೆಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಕಾಂಗ್ರೆಸ್ನಿಂದ ತಮ್ಮ ಪುತ್ರ ಸಾಗರ್ ಖಂಡ್ರೆ ಅವರನ್ನು ಕಣಕ್ಕಿಳಿಸಿ ಗೆಲುವಿಗೆ ಪಣ ತೊಟ್ಟಂತೆ ಕೆಲಸ ಮಾಡುತ್ತಿದ್ದಾರೆ.
ಉಭಯ ಪಕ್ಷದ ಕಾರ್ಯಕರ್ತರ ಜತೆ ಅವರ ಕುಟುಂಬಸ್ಥರು ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ. ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಅವರ ಪತ್ನಿ ಶೀಲಾವತಿ ಖೂಬಾ ಅವರು ಶನಿವಾರ ಪಟ್ಟಣದಲ್ಲಿ ಮನೆ ಮನೆಗೆ ಭೇಟಿ ನೀಡಿ ಪ್ರಚಾರ ಮಾಡಿದರು.
‘ಭಗವಂತ ಖೂಬಾ ನಿಮ್ಮ ಊರಿನ ಮಗ. ಅವರು ಕಳೆದ 10 ವರ್ಷಗಳಲ್ಲಿ ಬೀದರ್-ಔರಾದ್ ಹೆದ್ದಾರಿ ಸೇರಿದಂತೆ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಹೀಗಾಗಿ ಮತ್ತೊಮ್ಮೆ ನಿಮ್ಮ ಮಗನಿಗೆ ಆಶೀರ್ವಾದ ಮಾಡುವಂತೆ ಮತದಾರರಲ್ಲಿ ಮನವಿ ಮಾಡಿಕೊಂಡರು. ಅವರ ಜತೆ ಜೈಶ್ರೀ ಖೂಬಾ, ಕಸ್ತೂರಬಾಯಿ, ನೀಲಾಂಬಿಕಾ, ಭಾಗ್ಯಶ್ರೀ ಬುಟ್ಟೆ ಸೇರಿದಂತೆ ಅನೇಕ ಮಹಿಳೆಯರು ಇದ್ದರು.
ಗೀತಾ ಖಂಡ್ರೆ ಪ್ರಚಾರ: ಕಾಂಗ್ರೆಸ್ ಅಭ್ಯರ್ಥಿ ಸಾಗರ್ ಖಂಡ್ರೆ ಅವರ ತಾಯಿ ಗೀತಾ ಖಂಡ್ರೆ ತಾಲ್ಲೂಕಿನ ವಿವಿಧೆಡೆ ಬಿರುಸಿನ ಪ್ರಚಾರ ನಡೆಸಿದರು. ತಾಲ್ಲೂಕಿನ ನಾಗೂರ (ಬಿ) ಗ್ರಾಮಕ್ಕೆ ಭೇಟಿ ನೀಡಿದ ಅವರು, ‘ನಾನು ನಿಮ್ಮ ಊರಿನ ಮೊಮ್ಮಗಳು. ಭಾಲ್ಕಿ ತಾಲ್ಲೂಕಿನಷ್ಟೇ ಪ್ರೀತಿ ಪ್ರೇಮ ಈ ತಾಲ್ಲೂಕಿನ ಜನರ ಮೇಲಿದೆ. ಹೀಗಾಗಿ ಈ ಬಾರಿ ಸಾಗರ್ ಖಂಡ್ರೆ ಅವರನ್ನು ಗೆಲ್ಲಿಸುವಂತೆ’ ಮನವಿ ಮಾಡಿದರು.
ಲೋಕಸಭಾ ಚುನಾವಣೆ ತಾಲ್ಲೂಕು ಉಸ್ತುವಾರಿ ಗೋಪಿಕೃಷ್ಣ ಅವರು ಕಾಂಗ್ರೆಸ್ ಪಂಚ ಗ್ಯಾರಂಟಿ ಕುರಿತು ಜನರಿಗೆ ಮನವರಿಕೆ ಮಾಡಿಕೊಟ್ಟರು. ‘ಕಳೆದ ವರ್ಷ ನಡೆದ ವಿಧಾನಸಭೆ ಚುನಾವಣೆ ವೇಳೆ ನೀಡಿದ ಎಲ್ಲ ಗ್ಯಾರಂಟಿ ಯೋಜನೆ ಜಾರಿಗೆ ತಂದಿದ್ದೇವೆ. ಕೇಂದ್ರದಲ್ಲಿ ನಮ್ಮ ಸರ್ಕಾರ ಬಂದರೆ ಗ್ಯಾರಂಟಿ ಯೋಜನೆ ನಿಮ್ಮ ಮನೆ ಬಾಗಿಲಿಗೆ ತಲುಪುತ್ತವೆ’ ಎಂದು ಹೇಳಿದರು.
ಮಹೇಂದ್ರ ಬಿರಾದಾರ, ಪಂಢರಿ ಪಾಟೀಲ, ಸುಭಾಷ ಪಾಟೀಲ, ಸುಂದರರಾಜ ಕೇಸರಿ, ರಾಜಕುಮಾರ ವಲ್ಲೆಪುರೆ, ಪ್ರಥ್ವಿರಾಜ ಮುಧೋಳಕರ್ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.