ಬೀದರ್: ಜಿಲ್ಲೆಯಲ್ಲಿ ದಿನೇ ದಿನೇ ಬಿಸಿಲೇರುತ್ತಿದ್ದಂತೆ ಕುಡಿಯುವ ನೀರಿಗೂ ಸಮಸ್ಯೆ ಹೆಚ್ಚಾಗುತ್ತಿದೆ.
ಜಿಲ್ಲಾಡಳಿತದ ಪ್ರಕಾರ, ಜಿಲ್ಲೆಯ 304 ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಇದೆ. ಈ ಪೈಕಿ 42 ಕಡೆ ಖಾಸಗಿ ಬೋರ್ವೆಲ್ಗಳನ್ನು ಬಾಡಿಗೆಗೆ ಪಡೆದು ನೀರು ಪೂರೈಸಲಾಗುತ್ತಿದೆ. ಇನ್ನು, 65 ಗ್ರಾಮಗಳಲ್ಲಿ ಬಾಡಿಗೆಗೆ ಪಡೆಯಲು ಉದ್ದೇಶಿಸಲಾಗಿದೆ.
77 ಕಡೆಗಳಲ್ಲಿ ಇನ್ನಷ್ಟು ಆಳಕ್ಕೆ ಕೊಳವೆಬಾವಿ ಕೊರೆಸಲಾಗಿದೆ. ಬರುವ ದಿನಗಳಲ್ಲಿ 161 ಕಡೆ ಕೊರೆಸಲು ಉದ್ದೇಶಿಸಲಾಗಿದೆ. 17 ಕಡೆಗಳಲ್ಲಿ ಕೆಟ್ಟು ಹೋಗಿದ್ದ ಮೋಟಾರ್ಗಳನ್ನು ಈಗಾಗಲೇ ದುರಸ್ತಿಪಡಿಸಲಾಗಿದೆ. ಇನ್ನು, 58 ದುರಸ್ತಿಗೊಳಿಸಬೇಕಿದೆ. ಈಗಾಗಲೇ ಎಂಟು ಕಡೆಗಳಲ್ಲಿ ಪೈಪ್ಲೈನ್ ದುರಸ್ತಿಗೊಳಿಸಲಾಗಿದ್ದು, ಇನ್ನೂ 66 ದುರಸ್ತಿಗೊಳಿಸುವ ಕೆಲಸ ಆಗಬೇಕಿದೆ.
ಮಾರ್ಚ್ ಅಂತ್ಯದವರೆಗೆ ಜಿಲ್ಲೆಯಲ್ಲಿ ಹೇಳಿಕೊಳ್ಳುವಂತಹ ಪ್ರಮಾಣದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಎದುರಾಗುವುದಿಲ್ಲ ಎಂದು ಜಿಲ್ಲಾಡಳಿತ ಹೇಳಿತ್ತು. ಆದರೆ, ಮಾರ್ಚ್ ಕೊನೆಯ ವಾರದಿಂದ ಕೆಂಡದಂತಹ ಬಿಸಿಲಿನಿಂದ ಇರುವ ಜಲಮೂಲಗಳೆಲ್ಲ ಬತ್ತಲು ಆರಂಭಿಸಿವೆ. ಅಂತರ್ಜಲ ಕುಸಿದಿದೆ.
ಇನ್ನು, ಬಾವಿ ಹಾಗೂ ಕೊಳವೆಬಾವಿಗಳಲ್ಲಿ ನೀರು ನೆಲ ಕಂಡಿದೆ. ಚುನಾವಣೆಯ ಜವಾಬ್ದಾರಿಯಲ್ಲಿ ಅಧಿಕಾರಿಗಳು, ಸಿಬ್ಬಂದಿ ವರ್ಗ ತೊಡಗಿಕೊಂಡಿದ್ದರೂ ಕುಡಿಯುವ ನೀರಿಗೆ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಲು ಕಟ್ಟುನಿಟ್ಟಿನ ಸೂಚನೆ ಕೊಡಲಾಗಿದೆ. ಹೀಗಿದ್ದರೂ ಪರಿಸ್ಥಿತಿ ದಿನೇ ದಿನೇ ವಿಕೋಪಕ್ಕೆ ಹೋಗುತ್ತಿದೆ. ಇದೇ ರೀತಿ ಕೆಂಡದಂತಹ ಬಿಸಿಲು ಮುಂದುವರಿದರೆ ಗಂಭೀರ ಪರಿಸ್ಥಿತಿ ಉದ್ಭವವಾಗುವ ಸಾಧ್ಯತೆ ಇದೆ.
ಜಿಲ್ಲೆಯ ಬಸವಕಲ್ಯಾಣ, ಔರಾದ್, ಭಾಲ್ಕಿ ಹಾಗೂ ಕಮಲನಗರದಲ್ಲಿ ಪರಿಸ್ಥಿತಿ ಇತರೆಡೆಗಳಿಗಿಂತ ಗಂಭೀರವಾಗಿದೆ. ಈ ನಾಲ್ಕು ತಾಲ್ಲೂಕುಗಳ ವ್ಯಾಪ್ತಿಯ ಹೆಚ್ಚಿನ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಸೃಷ್ಟಿಯಾಗಿದೆ.
ಇದು, ಜಿಲ್ಲಾ ಕೇಂದ್ರದಿಂದ ದೂರದ ಗ್ರಾಮಗಳ ಪರಿಸ್ಥಿತಿಯಾದರೆ, ಸಮೀಪದಲ್ಲೇ ಇರುವ ಬೀದರ್ ತಾಲ್ಲೂಕಿನ ಗ್ರಾಮಗಳ ಪರಿಸ್ಥಿತಿಯೂ ಭಿನ್ನವಾಗಿಲ್ಲ. ಬೀದರ್ ನಗರಕ್ಕೆ ಹೊಂದಿಕೊಂಡಿರುವ ಮೀರಾಗಂಜ್ನಲ್ಲಿ ಸಮರ್ಪಕವಾಗಿ ನೀರು ಪೂರೈಸುತ್ತಿಲ್ಲ. ಬೈಸಿಕಲ್, ಬೈಕ್ಗಳಲ್ಲಿ ಕೊಡಗಳಲ್ಲಿ ಬೇರೆ ಕಡೆಗಳಿಂದ ಗ್ರಾಮಸ್ಥರು ನೀರು ಕೊಂಡೊಯ್ಯುತ್ತಿದ್ದಾರೆ. ಇನ್ನು, ಬೀದರ್ ತಾಲ್ಲೂಕಿನ ಹಮೀಲಾಪುರ ಗ್ರಾಮದಲ್ಲಿ ಮೂರ್ನಾಲ್ಕು ದಿನಗಳಿಗೊಮ್ಮೆ ನೀರು ಬಿಡಲಾಗುತ್ತಿದೆ. ಬಿಸಿಲು ಹೆಚ್ಚಾಗಿದ್ದರಿಂದ ಪರಿಸ್ಥಿತಿ ಬಿಗಡಾಯಿಸಿದೆ. ಗ್ರಾಮದ ಕೊಳವೆಬಾವಿ, ಟ್ಯಾಂಕರ್ ಹಾಳಾಗಿದ್ದು, ದುರಸ್ತಿಗೊಳಿಸುವ ಗೋಜಿಗೆ ಹೋಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಮೂರ್ನಾಲ್ಕು ದಿನಕ್ಕೊಮ್ಮೆ ನೀರು ಬಿಡ್ತಾರ. ನೆತ್ತಿ ಸುಡುವ ಬಿಸಿಲಲ್ಲಿ ನೀರಿಗಾಗಿ ಹೆಣಗಾಟ ಮಾಡುವಾಂಗ ಆಗ್ಯಾದ.–ಚಂದ್ರಮ್ಮ ಹಮೀಲಾಪುರ ಗ್ರಾಮಸ್ಥೆ
ಗ್ರಾಮದಲ್ಲಿ ಸರಿಯಾಗಿ ನೀರು ಬಿಡುವುದಿಲ್ಲ. ಬೇರೆ ಕಡೆ ಹೋಗಿ ನೀರು ತರುವ ಪರಿಸ್ಥಿತಿ ಇದೆ. ಅನೇಕ ಸಲ ಹೇಳಿದರೂ ಸಮಸ್ಯೆ ಬಗೆಹರಿದಿಲ್ಲ.–ಪ್ರವೀಣ್ ಹಮೀಲಾಪುರ ಗ್ರಾಮದ ಯುವಕ
ಬ್ಯಾಸಗಿ ಶುರುವಾದ ನಂತ್ರ ನೀರಿಗ ಭಾಳ್ ಸಮಸ್ಯಾ ಆಗ್ಯಾದ. ಬೈಕಿಗ ಕೊಡ ಕಟ್ಟಕೊಂಡು ನೀರು ತರ್ತಾ ಇದ್ದೀವಿ.–ರಾಜಶೇಖರ ಹಮೀಲಾಪುರ ಗ್ರಾಮದ ಯುವಕ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.