ಕಮಲನಗರ: ಔರಾದ್ ತಾಲ್ಲೂಕಿನ ಅನೇಕ ಬಸ್ ನಿಲ್ದಾಣಗಳ ಮೇಲೆ ಕನ್ನಡವನ್ನು ಸಂಪೂರ್ಣ ನಿರ್ಲಕ್ಷಿಸಿ, ಅನ್ಯ ಭಾಷೆಗೆ ಆದ್ಯತೆ ನೀಡಿರುವುದಾಗಿ ವಿವಿಧ ಕನ್ನಡ ಪರ ಸಂಘಟನೆಗಳು, ಸಾಹಿತಿಗಳು ಆರೋಪಿಸಿದ್ದಾರೆ.
ತಾಲ್ಲೂಕಿನ ಏಕಂಬಾ, ದುಡಕನಾಳ್ ಹಾಗೂ ಸಾವಳಿ ಗ್ರಾಮದ ಬಸ್ ನಿಲ್ದಾಣಗಳ ನಾಮಫಲಕಗಳಲ್ಲಿ ಕನ್ನಡವನ್ನು ನಿರ್ಲಕ್ಷಿಸಲಾಗಿದೆ.
ರಾಜ್ಯದಲ್ಲಿ ತ್ರಿಭಾಷಾ ಸೂತ್ರದನ್ವಯ ಎಲ್ಲ ಸರ್ಕಾರಿ ಕಚೇರಿಗಳು, ಕಟ್ಟಡಗಳ ನಾಮಫಲಕಗಳಲ್ಲಿ ಕನ್ನಡ ಭಾಷೆಗೆ ಪ್ರಥಮ ಆದ್ಯತೆ ನೀಡಬೇಕೆಂಬ ನಿಯಮವಿದೆ. ಆದರೆ ಸಾವಳಿ ಗ್ರಾಮದ ಬಸ್ ನಿಲ್ದಾಣದ ಮೇಲೆ ಅಳವಡಿಸಿರುವ ನಾಮಫಲಕದಲ್ಲಿ ಮರಾಠಿ ಭಾಷೆಗೆ ಆದ್ಯತೆ ಕೊಟ್ಟು, ಕನ್ನಡವನ್ನು ಕೆಳಗೆ ಬರೆದು ಅವಮಾನಿಸಲಾಗಿದೆ ಎಂದು ಸಾಹಿತಿ ಎಸ್.ಬಿ.ಜಾಂತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಲ್ಲೂಕಿನಲ್ಲಿರುವ ಎಲ್ಲ ಎಲ್ಲ ಅಂಗಡಿ ಮುಂಗಟ್ಟುಗಳು, ಶಾಲಾ ಕಾಲೇಜುಗಳ, ಸರ್ಕಾರಿ ಕಚೇರಿಗಳ ನಾಮಫಲಕಗಳಲ್ಲಿ ಕನ್ನಡಕ್ಕೆ ಪ್ರಥಮ ಆದ್ಯತೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸಂಬಂಧಪಟ್ಟವರ ಗಮನಕ್ಕೆ ಅನೇಕ ಸಲ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಕನ್ನಡ ಪರ ಹೋರಾಟಗಾರರಾದ ಸಂತೋಷ ಸುಲಾಕೆ, ಧನರಾಜ ಭವರಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಸ್ವಾಗತ ಕಮಾನು ನಿರ್ಮಿಸಿ: ಬೀದರ್–ನಾಂದೇಡ್ ಅಂತರರಾಜ್ಯ ಹೆದ್ದಾರಿಯ ಕಮಲನಗರದ ಗಡಿಯಲ್ಲಿ ಕರ್ನಾಟಕ ಸರ್ಕಾರದ ಸ್ವಾಗತ ಕಮಾನು ನಿರ್ಮಿಸಲು ಜನಪ್ರತಿನಿಧಿಗಳು ಕ್ರಮ ಕೈಗೊಳ್ಳಬೇಕು ಎಂದು ಕನ್ನಡ ಅಭಿಮಾನಿಗಳು ಆಗ್ರಹಿಸಿದ್ದಾರೆ.
ಗಡಿಯಲ್ಲಿ ಮಹಾರಾಷ್ಟ್ರ ಸರ್ಕಾರ ದೊಡ್ಡ ಸ್ವಾಗತ ಕಮಾನನ್ನು ಅಳವಡಿಸಿದೆ. ಆದರೆ ನಮ್ಮ ಸರ್ಕಾರದಿಂದ ಕರ್ನಾಟಕಕ್ಕೆ ಸ್ವಾಗತ ಎಂದು ಕೋರುವ ಕಮಾನು ನಿರ್ಮಿಸುವುದು ಅವಶ್ಯಕವಾಗಿದೆ ಎಂದು ಸಾಹಿತಿ ಬಾ.ನಾ. ಸೋಲ್ಲಾಪುರೆ ಆಗ್ರಹಿಸಿದ್ದಾರೆ.
ಕರ್ನಾಟಕದ ಗಡಿಭಾಗವಾದ ಔರಾದ್ ತಾಲ್ಲೂಕಿನಲ್ಲಿ ಕನ್ನಡಮಯ ವಾತಾವರಣ ಸೃಷ್ಟಿಸಲು, ಕನ್ನಡವನ್ನು ಆಡಳಿತದಲ್ಲಿ ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಲು ತಾಲ್ಲೂಕು ಆಡಳಿತ ಮುಂದಾಗಬೇಕು. ಇಲ್ಲದಿದ್ದರೆ ಹೋರಾಟ ಮಾಡುವುದಾಗಿ ಕನ್ನಡಪರ ಸಂಘಟನೆಗಳು ಎಚ್ಚರಿಕೆ ನೀಡಿವೆ. ರಾಜ್ಯೋತ್ಸವದ ಶುಭ ಸಂದರ್ಭದಲ್ಲಾದರೂ ತಾಲ್ಲೂಕು ಆಡಳಿತ ಬಸ್ ನಿಲ್ದಾಣಗಳ ನಾಮಫಲಕಗಳ ಮೇಲೆ ಕನ್ನಡ ಬರೆಸಲು ಮುಂದಾಗುವುದೇ ಎಂದು ಜನರು ಪ್ರಶ್ನಿಸುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.