ಸಂತೇಮರಹಳ್ಳಿ: ಇಲ್ಲಿನ ಗ್ರಾಮದ ಹೊಸ ಬಡಾವಣೆಯಲ್ಲಿ ಸ್ವಚ್ಛತೆ ಕಣ್ಮರೆಯಾಗಿದೆ. ಎಲ್ಲೆಂದರಲ್ಲಿ ಕಸದ ರಾಶಿಯಾಗಿದೆ. ಚರಂಡಿಯ ಉದ್ದಕ್ಕೂ ಕಳೆಗಿಡಗಳು ಬೆಳೆದು ಬಡಾವಣೆಯ ಅನೈರ್ಮಲ್ಯಕ್ಕೆ ಕಾರಣವಾಗಿದೆ.
ಬಡಾವಣೆಯ ರಸ್ತೆಯ 2 ಬದಿಗಳಲ್ಲೂ ಸಮರ್ಪಕವಾಗಿ ಚರಂಡಿ ವ್ಯವಸ್ಥೆ ನಿರ್ಮಿಸಿಲ್ಲ. ನಿರ್ಮಾಣವಾಗಿರುವ ಒಂದು ಕಡೆಯಲ್ಲಿ ಹೂಳು ತೆಗೆದಿಲ್ಲ. ಕಸ ಕಡ್ಡಿಗಳು ತುಂಬಿಕೊಂಡು ಕೊಳೆತು ನಾರುತ್ತಿವೆ. ಜತೆಗೆ ಕಳೆಗಿಡಗಳು ಬೆಳೆದು ತ್ಯಾಜ್ಯ ನೀರು ಸರಾಗವಾಗಿ ಹರಿದುಹೋಗುವಂತಹ ವ್ಯವಸ್ಥೆ ಇಲ್ಲದಂತಾಗಿದೆ. ಇದರ ದುರ್ವಾಸನೆ ಮತ್ತು ಅಶುಚಿತ್ವದಿಂದ ನಿವಾಸಿಗಳು ಬೇಸತ್ತಿದ್ದಾರೆ. ಚರಂಡಿ ಸ್ವಚ್ಛಗೊಳಿಸಿ ಬಡಾವಣೆಯ ನೈರ್ಮಲ್ಯ ಕಾಪಾಡಿ ಎಂಬ ನಿವಾಸಿಗಳ ಕೂಗಿಗೆ ಯಾವ ಜನಪ್ರತಿನಿಧಿಯೂ ಗಮನ ಹರಿಸಿಲ್ಲ ಎಂಬುದು ಇಲ್ಲಿನ ನಿವಾಸಿಗಳ ದೂರು.
ಚರಂಡಿಯಲ್ಲಿ ನಿಂತ ತ್ಯಾಜ್ಯ ನೀರಿನಿಂದ ಹುಳ ಹುಪ್ಪಟ್ಟೆಗಳು, ಸೊಳ್ಳೆಗಳು ಆವಾಸ ಸ್ಥಾನ ಮಾಡಿಕೊಂಡಿವೆ. ರಾತ್ರಿ ಸಮಯವಾಗುತ್ತಿದ್ದಂತೇ ನಿವಾಸಿಗಳು ಸೊಳ್ಳೆಗಳ ಕಾಟವನ್ನು ತಾಳಲಾರದೇ ಸಂಬಂಧಪಟ್ಟವರಿಗೆ ಹಿಡಿ ಶಾಪ ಹಾಕುತ್ತಿದ್ದಾರೆ. ಸೊಳ್ಳೆಗಳಿಂದ ರೋಗ ರುಜಿನಗಳ ಭೀತಿಯನ್ನು ನಿವಾಸಿಗಳು ಎದುರಿಸುವಂತಾಗಿದೆ.
ಬಡಾವಣೆಯಲ್ಲಿ ರಸ್ತೆಯೂ ಹದಗೆಟ್ಟಿದೆ. ಹಳ್ಳ, ದಿಣ್ಣೆಗಳು ನಿರ್ಮಾಣವಾಗಿವೆ. ಬಡಾವಣೆಯ 2 ಕಡೆಗಳಲ್ಲೂ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆಗಾಲದ ಸಮಯದಲ್ಲಿ ಕೊಚ್ಚೆ ಗುಂಡಿಗಳು ನಿರ್ಮಾಣವಾಗುತ್ತದೆ. ಇದನ್ನೇ ತುಳಿದುಕೊಂಡು ಮನೆಯ ಹೊಸ್ತಿಲು ದಾಟಬೇಕಾಗಿದೆ. ರಸ್ತೆ ದುರಸ್ತಿ ಪಡಿಸಿ ಜನಸಂಚಾರಕ್ಕೆ ಅನುಕೂಲ ಮಾಡಿಕೊಡಿ ಎಂದು ಮನವಿ ಮಾಡಿದರೂ ಪ್ರಯೋಜನವಿಲ್ಲ ಎಂಬಂತಾಗಿದೆ ಎಂದು ನಿವಾಸಿಗಳು ಹೇಳುತ್ತಾರೆ.
ಕಿರುನೀರು ಸರಬರಾಜು ಘಟಕದ ವತಿಯಿಂದ ಬಡಾವಣೆಗೆ ನಿರ್ಮಿಸಿರುವ 3 ತೊಂಬೆಗಳಲ್ಲಿ ಯಾವುದಕ್ಕೂ ನೀರು ಸರಬರಾಜಾಗುತ್ತಿಲ್ಲ. ಪರಿಣಾಮವಾಗಿ ತೊಂಬೆಗಳು ನೀರು ಕಾಣದೇ ಅನಾಥವಾಗಿ ನಿಂತಿವೆ. ತೊಂಬೆಯ ಸುತ್ತಲೂ ಕಳೆಗಿಡಗಳು ಬೆಳೆದು ಅನೈರ್ಮಲ್ಯ ಉಂಟಾಗಿದೆ.
ನಾವು ಜನರಿಗೆ ಶುಚಿತ್ವದ ಬಗ್ಗೆ ಅರಿವು ಮೂಡಿಸುತ್ತಿದ್ದೇವೆ. ನಮ್ಮ ಬಡಾವಣೆಯಲ್ಲಿ ಅನೈರ್ಮಲ್ಯ ಉಂಟಾಗಿದೆ. ಇದಕ್ಕೆ ಗ್ರಾಮ ಪಂಚಾಯಿತಿಯವರು ಸ್ಪಂದಿಸುತ್ತಿಲ್ಲ ಎಂದು ಆಶಾ ಕಾರ್ಯಕರ್ತೆ ಮಂಜುಳಾ ದೂರುತ್ತಾರೆ. ಬಡಾವಣೆಯ ರಸ್ತೆ ದುರಸ್ತಿ ಪಡಿಸಬೇಕು. ಬೀದಿ ದೀಪಗಳಿಂದ ವಂಚಿತವಾಗಿರುವ ಕಡೆಗಳಿಗೆ ಬೀದಿ ದೀಪ ಅಳವಡಿಸಬೇಕು. ಚರಂಡಿಯ ಹೂಳು ತೆಗೆಸಿ ಶುಚಿತ್ವ ಕಾಪಾಡಬೇಕು ಎಂದು ನಿವಾಸಿ ಚಾಮಶೆಟ್ಟಿ ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.