ಮೊಳಕಾಲ್ಮುರು (ಚಿತ್ರದುರ್ಗ): ಅನುಮಾನಾಸ್ಪದವಾಗಿ ಸಾಗಿಸುತ್ತಿದ್ದ ₹ 6.39 ಕೋಟಿ ಮೌಲ್ಯದ ಚಿನ್ನ, ವಜ್ರಾಭರಣವನ್ನು ಆಂಧ್ರದ ಗಡಿಯಲ್ಲಿರುವ ಕಣಕುಪ್ಪೆ ಚೆಕ್ಪೋಸ್ಟ್ನಲ್ಲಿ ಚುನಾವಣಾ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.
‘ಬಳ್ಳಾರಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ವಾಹನವನ್ನು ಪರಿಶೀಲಿಸಿದಾಗ ಆಭರಣ ಪತ್ತೆಯಾಗಿವೆ. ಇವು ಪ್ರತಿಷ್ಠಿತ ಚಿನ್ನಾಭರಣ ಮಳಿಗೆಗೆ ಸೇರಿದ್ದಾಗಿ ಸಾಗಣೆದಾರರು ಮಾಹಿತಿ ನೀಡಿದ್ದಾರೆ. ದಾಖಲೆ ಹಾಜರುಪಡಿಸದ ಕಾರಣಕ್ಕೆ ವಶಕ್ಕೆ ಪಡೆದು ಪರಿಶೀಲಿಸಲಾಗಿದೆ’ ಎಂದು ಜಿಲ್ಲಾ ಚುನಾವಣಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ತಿಳಿಸಿದ್ದಾರೆ.
₹ 4.4 ಲಕ್ಷ ವಶ: ಬೆಂಗಳೂರಿನಿಂದ ಹುಳಿಯಾರು ಪಟ್ಟಣಕ್ಕೆ ಸಾಗಿಸುತ್ತಿದ್ದ ದಾಖಲೆ ಇಲ್ಲದ ₹ 4.4 ಲಕ್ಷವನ್ನು ಹಿರಿಯೂರಿನಲ್ಲಿ ಮಂಗಳವಾರ ವಶಕ್ಕೆ ಪಡೆಯಲಾಗಿದೆ.
‘ದಾಖಲೆ ಹಾಜರುಪಡಿಸದ ಕಾರಣಕ್ಕೆ ವಶಕ್ಕೆ ಪಡೆಯಲಾಗಿದೆ. ಯಾರೊಬ್ಬರನ್ನೂ ಬಂಧಿಸಿಲ್ಲ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ತಿಳಿಸಿದ್ದಾರೆ.