ಚಳ್ಳಕೆರೆ: ಸಕಾಲಕ್ಕೆ ದೊರೆಯದ ಚಿಕಿತ್ಸೆ, ವೈದ್ಯರ ಕೊರತೆ, ಶುಶ್ರೂಷಕಿಯರಿಲ್ಲದೆ ಪರದಾಡುವ ರೋಗಿಗಳು, ಮಧು ಮೇಹದಿಂದ ನರಳುತ್ತಿರುವ ಗ್ರಾಮಸ್ಥರಿಗೆ ಸಿಗದ ಆರೋಗ್ಯ ಸೇವೆ...
ತಾಲ್ಲೂಕಿನ ಗಡಿ ಗ್ರಾಮ ಕಲಮರಹಳ್ಳಿಯಲ್ಲಿರುವ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲದಂತಾಗಿದ್ದು, ರೋಗಿಗಳಿಗೆ ಸಕಾಲಕ್ಕೆ ಚಿಕಿತ್ಸೆ ದೊರಕುತ್ತಿಲ್ಲ.ತಾಲ್ಲೂಕಿನ ಸಿದ್ದೇಶಪುರ, ಗೊರ್ಲತ್ತು, ನಾರಾಯಣಪುರ, ರಂಗನಾಥಪುರ, ಬೆಳಗೆರೆ ಸೇರಿದಂತೆ ಸುತ್ತಲಿನ ಹತ್ತಕ್ಕೂ ಹೆಚ್ಚು ಹಳ್ಳಿಗಳಿಗೆ ಚಿಕಿತ್ಸೆ ನೀಡಬೇಕಾದ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆ ಯಿಂದ ರೋಗಿಗಳು ನರಳುವಂತಾಗಿದೆ.
ಈ ಆಸ್ಪತ್ರೆಯ ಸಮೀಪದ 15ಕ್ಕೂ ಹೆಚ್ಚಿನ ಹಳ್ಳಿಗಳಲ್ಲಿ ಸುಮಾರು 10 ಸಾವಿರದಷ್ಟು ಜನಸಂಖ್ಯೆಯಿದೆ. ಅಪಘಾತ, ಹೆರಿಗೆ, ವಿಷಜಂತುಗಳ ಕಡಿತದ ಸಂದರ್ಭದಲ್ಲಿ ಆಸ್ಪತ್ರೆಗೆ ಬರುವವರಿಗೆ ಚಿಕಿತ್ಸೆ ದೊರೆಯದೆ ತೊಂದರೆ ಅನುಭವಿಸಬೇಕಾಗಿದೆ ಎನ್ನುತ್ತಾರೆ ಗ್ರಾಮದ ಮುಖಂಡ ನಾಗರಾಜ ಅರಸು.
ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸುಸಜ್ಜಿತವಾಗಿ ನಿರ್ಮಿಸಲಾಗಿದೆ. ಆದರೆ ಆರೋಗ್ಯ ಸೇವೆ ಮಾತ್ರ ಮರೀಚಿಕೆಯಾಗಿದೆ. ಮಧುಮೇಹದಿಂದ ನರಳುತ್ತಿರುವ ಗ್ರಾಮಸ್ಥರಿಗೆ ನಿತ್ಯ ಅಗತ್ಯವಿರುವ ಇನ್ಸುಲಿನ್ ಚುಚ್ಚುಮದ್ದು ಸಹ ಸಿಗುತ್ತಿಲ್ಲ. ಗ್ರಾಮದಲ್ಲಿ ವಿಷಜಂತುಗಳು ಕಚ್ಚಿದ ಸಂದರ್ಭದಲ್ಲಿ ತುರ್ತು ಚಿಕಿತ್ಸೆ ದೊರೆಯದೆ ತಾಲ್ಲೂಕು ಕೇಂದ್ರಕ್ಕೆ ಅಥವಾ ಜಿಲ್ಲಾ ಕೇಂದ್ರಕ್ಕೆ ಹೋಗುವಂತಾಗಿದೆ ಎಂದು ಗ್ರಾಮದ ವೈ.ರಂಗಸ್ವಾಮಿ ವಿಷಾದಿಸುತ್ತಾರೆ.
ತಾಲ್ಲೂಕು ಕೇಂದ್ರದ ಸಾರ್ವಜನಿಕ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಲಾಗದ ಗ್ರಾಮಸ್ಥರು ಅನಿವಾರ್ಯವಾಗಿ ಇಲ್ಲಿನ ಆಸ್ಪತ್ರೆ ಸಿಬ್ಬಂದಿ ಬಳಿ ಔಷಧಿ ಪಡೆದು ಹೋಗುತ್ತಿದ್ದಾರೆ.
ಆಸ್ಪತ್ರೆಯಲ ಔಷಧ ವಿತರಣೆ ಕೇಂದ್ರದಲ್ಲಿಯೇ ರೋಗಿಗಳನ್ನು ಪರೀಕ್ಷಿಸಿ ಗುಳಿಗೆ ನೀಡುವ ಪದ್ಧತಿ ಜಾರಿಗೆ ಬಂದಿದೆ. ಇದರಿಂದ ರೋಗಿಗಳ ಕಾಯಿಲೆಗಳು ವಾಸಿಯಾಗದೆ ತೊಂದರೆ ಅನುಭವಿಸುವಂತಾಗಿದೆ. ರೋಗಿಗಳನ್ನು ವೈದ್ಯರು ರೋಗಿಗಳ ಪರೀಕ್ಷೆ ನಡೆಸದೇ ಔಷಧಿ ವಿತರಿಸಲಾಗುತ್ತಿದೆ. ಇದರಿಂದ ರೋಗಿಗಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಗ್ರಾಮಸ್ಥರಾದ ಪ್ರಕಾಶ್ ಕಳವಳ ವ್ಯಕ್ತಪಡಿಸುತ್ತಾರೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಜನರೇ ಹೆಚ್ಚಾಗಿ ವಾಸಿಸುವ ಗಡಿ ಪ್ರದೇಶಗಳ ಜನ ಸಾಮಾನ್ಯರ ಸಮಸ್ಯೆಗಳನ್ನು ಕೇಳು ವವರೇ ಇಲ್ಲದಂತಾಗಿದೆ. ಗ್ರಾಮಗಳಲ್ಲಿ ಹೆಚ್ಚಾಗಿ ಕೃಷಿ, ಕೂಲಿಯನ್ನು ಅವಲಂಬಿಸಿದ ಹೆಚ್ಚಿನ ಕುಟುಂಬಗಳು ಜೀವನ ಸಾಗಿಸುತ್ತಿವೆ. ಸರಿಯಾಗಿ ಮಳೆ, ಬೆಳೆ ಇಲ್ಲದೇ ಬರಗಾಲ ಆವರಿಸಿ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಗ್ರಾಮೀಣ ಭಾಗಗಳಲ್ಲಿ ವೈದ್ಯಕೀಯ ಸೇವೆಯೂ ಇಲ್ಲದೇ ಪರಿತಪಿಸುವಂತಾಗಿದೆ ಎನ್ನುತ್ತಾರೆ ಗ್ರಾಮದ ಚಂದ್ರಪ್ಪ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.