ರಾಣೆಬೆನ್ನೂರು: ಬರೀ ಸುಳ್ಳು ಗ್ಯಾರಂಟಿಗಳನ್ನು ಮುಂದಿಟ್ಟುಕೊಂಡು ದೇಶದ ಜನರ ದಿಕ್ಕು ತಪ್ಪಿಸುತ್ತಿರುವ ಕಾಂಗ್ರೆಸ್ ಯಾವ ಕಾಲಕ್ಕೂ ಕೇಂದ್ರದಲ್ಲಿ ಅಧಿಕಾರಿಕೆ ಬರುವುದು ಗ್ಯಾರಂಟಿನೇ ಇಲ್ಲ. ಸುಳ್ಳಿನ ಸರಮಾಲೆಯಲ್ಲಿಯೇ ಕಾಲ ಹರಣ ಮಾಡುತ್ತಾ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುವ ಕಾಂಗ್ರೆಸ್ ಸರ್ಕಾರದ್ದು ಕೊಟ್ಟು ಕಿತ್ತು ಕೊಳ್ಳುವ ಪ್ರವೃತ್ತಿ ಎಂದು ಶಾಸಕ ಬೈರತಿ ಬಸವರಾಜ್ ಹೇಳಿದರು.
ನಗರದ ಸೊಪ್ಪಿನಪೇಟೆಯಲ್ಲಿ ಶನಿವಾರ ಹಾವೇರಿ–ಗದಗ ಲೋಕಸಭೆ ಚುನಾವಣೆಯ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಪರ ಏರ್ಪಡಿಸಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿ, ರಾಜ್ಯದ 28 ಕ್ಷೇತ್ರದಲ್ಲೂ ಬಿಜೆಪಿ ಅಭ್ಯರ್ಥಿಗಳು ಜಯಭೇರಿ ಬಾರಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಸವರಾಜ ಬೊಮ್ಮಾಯಿ ಅವರು ಹಿಂದುಳಿದ ವರ್ಗಗಳ ಏಳಿಗೆಗೆ ಶ್ರಮಿಸಿದ್ದಾರೆ. ನಾನು ನಗರಾಭಿವೃದ್ಧಿ ಸಚಿವನಾಗಿದ್ದಾಗ ಮುಖ್ಯಮಂತ್ರಿ ಬೊಮ್ಮಾಯಿ ಅವರು ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರಕ್ಕೆ ಹಿಂದಿನ ಶಾಸಕ ಅರುಣ್ ಕುಮಾರ್ ಪೂಜಾರ್ ಶ್ರಮಪಟ್ಟು ಕುಡಿಯುವ ನೀರಿಗಾಗಿ ₹ 124 ಕೋಟಿ ಬಿಡುಗಡೆ ಮಾಡಿ, ನಾಗರಿಕರಿಗೆ ನಿರಂತರ ನೀರು ಪೂರೈಕೆ ಮಾಡಲಾಗಿದೆ ಎಂದರು.
ನಾವು ಸುರಕ್ಷಿತವಾಗಿ ಇರಬೇಕೆಂದರೆ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾದಾಗ ಮಾತ್ರ ಸಾಧ್ಯ. ಇಡೀ ವಿಶ್ವವೇ ಭಾರತದತ್ತ ನೋಡುವ ರೀತಿ ಮಾಡಿದ್ದು ಮೋದಿಯವರು. ಹಾವೇರಿ –ಗದಗ ಲೋಕಸಭಾ ಚುನಾವಣೆ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರಿಗೆ ಹೆಚ್ಚಿನ ಮತ ನೀಡಿ, ಮೋದಿಜಿ ಅವರ ಕೈ ಬಲಪಡಿಸಬೇಕು ಎಂದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಅರುಣಕುಮಾರ ಪೂಜಾರ ಮಾತನಾಡಿ, ಬೊಮ್ಮಾಯಿಯವರನ್ನು ಆಯ್ಕೆ ಮಾಡಿ ಕಳಿಸಿದರೆ, ಅವರು ಕೇಂದ್ರದಲ್ಲಿ ಮಂತ್ರಿಯಾಗುವುದು ಗ್ಯಾರಂಟಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ ಮಾತನಾಡಿ, ದೇಶದ ಸುಭದ್ರತೆಗೆ, ಮಕ್ಕಳ ಉಜ್ವಲ ಭವಿಷ್ಯಕ್ಕೆ, ದೇಶದ ರಕ್ಷಣೆ ಮಾಡಲು ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯಾಗಿ ಮಾಡಬೇಕಾದ ಗುರುತರ ಹೊಣೆಗಾರಿಕೆ ಎಲ್ಲರದ್ದು ಎಂದರು.
ಗ್ರಾಮೀಣ ಘಟಕದ ಅಧ್ಯಕ್ಷ ಪರಮೇಶಪ್ಪ ಗೂಳಣ್ಣನವರ, ನಗರ ಘಟಕದ ರಮೇಶ ಗುತ್ತಲ, ಸಂತೋಷಕುಮಾರ ಪಾಟೀಲ, ಕರಬಸಪ್ಪ ಮಾಕನೂರ, ಮಂಜುನಾಥ ಓಲೇಕಾರ, ಬಸವರಾಜ ಕೇಲಗಾರ, ರತ್ನವ್ವ ಕಾಟಿ, ಪ್ರಕಾಶ ಪೂಜಾರ, ಜಿ.ಜಿ.ಹೊಟ್ಟಿಗೌಡ್ರ, ಮಾಳಪ್ಪ ಪೂಜಾರ, ಅಭಿಮಾನಿಗಳು ಭಾಗವಹಿಸಿದ್ದರು.