ಸುಂಟಿಕೊಪ್ಪ: ಸಮೀಪದ ಕೊಡಗರಹಳ್ಳಿ ಗ್ರಾಮದಲ್ಲಿ ನೆಲೆ ನಿಂತಿರುವ ಬೈತೂರಪ್ಪ, ಪೊವ್ವದಿ, ಬಸವೇಶ್ವರ ದೇವಾಲಯದ ವಾರ್ಷಿಕ ಹಬ್ಬವು ವಿವಿಧ ಪೂಜಾ, ವೈದಿಕ ಪೂಜಾ ಕೈಂಕರ್ಯಗಳೊಂದಿಗೆ ನೂರಾರು ಭಕ್ತರ ಸಮ್ಮುಖದಲ್ಲಿ ಶ್ರದ್ಧಾ ಭಕ್ತಿಯಿಂದ ಸೋಮವಾರ ನಡೆಯಿತು.
ದೇವಾಲಯದಲ್ಲಿ ನಡೆದ ಗಣಹೋಮದೊಂದಿಗೆ ವಾರ್ಷಿಕ ಪೂಜೋತ್ಸವಕ್ಕೆ ಚಾಲನೆ ದೊರಕಿತು. ನಂತರ ದೇವಾಲಯದ ಅರ್ಚಕರಾದ ನರಸಿಂಹ ಭಟ್, ಚಂದ್ರಶೇಖರ್ ಭಟ್, ರವಿಶಂಕರ್ ಭಟ್, ಮಂಜುನಾಥ್ ಭಟ್, ಕೃಷ್ಣ ಭಟ್ ಅವರ ನೇತೃತ್ವದಲ್ಲಿ ಬೈತೂರಪ್ಪ, ಪೊವ್ವದಿ ಹಾಗೂ ಪರಿವಾರ ದೇವರುಗಳಿಗೆ ವಿಶೇಷ ಪೂಜೆ ಮತ್ರು ರುದ್ರಾಭಿಷೇಕ ನಡೆಯಿತು.
ದೇವತಕ್ಕರಾದ ಜಗ್ಗರಂಡ ಹ್ಯಾರಿ ಕಾರ್ಯಪ್ಪ ಅವರ ಮನೆಯಿಂದ ದೇವರ ಭಂಡಾರವನ್ನು ಅರ್ಚಕರಾದ ನರಸಿಂಹ ಭಟ್ ಅವರ ನೇತೃತ್ವದಲ್ಲಿ ಪೂಜೆ, ಪ್ರಾರ್ಥನೆ ನಡೆದ ನಂತರ ದುಡಿಕೊಟ್ ಪಾಟ್ ಜೊತೆಗೆ ಸಾಂಪ್ರಾದಾಯಿಕ ಕೊಡವ ಓಲಗ ಮೂಲಕ ಮೆರವಣಿಗೆ ಮೂಲಕ ದೇವಾಲಯಕ್ಕೆ ತಂದು ಪೂಜೆ ಸಲ್ಲಿಸಲಾಯಿತು.
ದೇವಾಲಯದ ವಾರ್ಷಿಕ ಹಬ್ಬದ ಅಂಗವಾಗಿ ದೇವಾಲಯಕ್ಕೆ ಒಳಪಟ್ಟ ಕುಟುಂಬಗಳು ಸಾಂಪ್ರದಾಯಿಕ ಉಡುಗೆಯೊಂದಿಗೆ ದೇವಾಲಯದ ಆವರಣದಲ್ಲಿ ಸೇರಿ ಸಾಂಪ್ರದಾಯಿಕ ಬೊಳಕಾಟ್ ನೃತ್ಯ ಸೇವೆ ಸಲ್ಲಿಸಿದವು. ಹಬ್ಬದ ಅಂಗವಾಗಿ ವೃತ್ತದಲ್ಲಿರುವ ಗ್ರಾಮಸ್ಥರು ಕಳೆದ 11 ದಿನಗಳಿಂದ ಮುಂಜಾನೆ ವೇಳೆ ದೀಪದ ಬೆಳಕಿನಲ್ಲಿ ದೇವರಿಗೆ ಬೊಳಕಾಟ್ ನೃತ್ಯ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದಾರೆ.
ಏ.16 ರಂದು ಗ್ರಾಮ ದೇವತೆಗೆ ಪೂಜೆ ಸಲ್ಲಿಸುವ ಮೂಲಕ ಏ.18 ರಂದು ಗ್ರಾಮಕ್ಕೆ ದೇವರ ಕಟ್ಟನ್ನು ಹಾಕಲಾಯಿತು. ನಂತರ ಪ್ರತಿದಿನ ಬೆಳಿಗ್ಗೆ ದೇವರಿಗೆ ಪೂಜೆ ಸಲ್ಲಿಸಿ ಸಾಂಪ್ರದಾಯಿಕ ಉಡುಗೆಯೊಂದಿಗೆ ಬೊಳಕಾಟ್ ನೃತ್ಯ ಸೇವೆ ಸಲ್ಲಿಸಿದರು. ಏ.26ರ ಶುಕ್ರವಾರ ಬಸವೇಶ್ವರ ದೇವರ ಎತ್ತುಪೋರಾಟದೊಂದಿಗೆ ಹಬ್ಬಕ್ಕೆ ಚಾಲನೆ ನೀಡಲಾಗಿತ್ತು. ಕೊನೆಗ ದಿನವಾದ ಸೋಮವಾರ ಎತ್ತುಪೊರಾಟ್ ನಡೆಯತೋಡು,
ಮಧ್ಯಾಹ್ನ ಮಹಾಪೂಜೆ, ವಿಶೇಷ ಪೂಜೆ, ದೀಪಾರಾಧನೆ, ಮಹಾಮಂಗಳಾರತಿ ಪ್ರಸಾದ ವಿನಿಯೋಗ ನಡೆದು, ನೆರೆದಿದ್ದ ಭಕ್ತರಿಗೆ ಸಮಿತಿ ವತಿಯಿಂದ ಅನ್ನಸಂತರ್ಪಣೆ ನಡೆಯಿತು.
ವಾರ್ಷಿಕ ಹಬ್ಬವನ್ನು ದೇವಾಲಯದ ಟ್ರಸ್ಟ್ ಮೇಲುಸ್ತವಾರಿಯಲ್ಲಿ ದೇವತಕ್ಕರಾದ ಮುಕ್ಕಾಟೀರ ಮನೆಯವರ ನೇತೃತ್ವದಲ್ಲಿ ಗ್ರಾಮಸ್ಥರೊಡಗೂಡಿ ಆಚರಿಸಲಾಯಿತು. ಕೊಡಗರಹಳ್ಳಿ, ಕಂಬಿಬಾಣೆ, ಉಪ್ಪು ತೋಡು, ಸುಂಟಿಕೊಪ್ಪ, ಏಳನೇ ಹೊಸಕೋಟೆ, ನಾಕೂರು, ಮಾರುತಿ ನಗರ ಸೇರಿದ ಸುತ್ತಮುತ್ತಲಿನ ಭಕ್ತರು ಆಗಮಿಸಿ ವಾರ್ಷಿಕ ಹಬ್ಬ ಆಚರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.