ಸಿದ್ದಾಪುರ: ಬಹುತೇಕ ಕಟ್ಟಡಗಳ ಚಾವಣಿಗಳು ಕುಸಿದಿವೆ. ನಡೆದಾಡುವ ದಾರಿಗಳು ಸಿಮೆಂಟ್ ಕಳಚಿಕೊಂಡು ಮಣ್ಣು ಪಾಲಾಗಿದೆ. ಶೌಚಾಲಯಗಳು ನಾರುತ್ತಿವೆ, ಸಂತೆ ಮಾರುಕಟ್ಟೆ ಪ್ರದೇಶವೇ ದನಕರುಗಳ ಹಾಗೂ ಕುರಿ ಮೇಯಿಸುವವರ ಆಶ್ರಯ ತಾಣವಾಗಿ ಮಾರ್ಪಟ್ಟಿದೆ ಇದು ಸಿದ್ದಾಪುರ ಸಂತೇ ಮಾರುಕಟ್ಟೆಯ ಸ್ಥಿತಿ.
ಮಾಲ್ದಾರೆ, ನೆಲ್ಯಹುದಿಕೇರಿ, ವಾಲ್ನೂರು ತ್ಯಾಗತ್ತೂರು, ಇಂಜಿಲಗೆರೆ, ಗುಯ್ಯ, ಮಾರ್ಗೊಲ್ಲಿ, ಬಜೆಕೊಲ್ಲಿ, ಮೇಕೂರು ಸೇರಿದಂತೆ ಸಿದ್ದಾಪುರ ಸುತ್ತಮುತ್ತಲ ಗ್ರಾಮಗಳ ನಿವಾಸಿಗಳಿಗೆ ದಿನಸಿ, ಮಣ್ಣಿನ ಕುಡಿಕೆ, ಒಣಗಿದ ಮೀನು, ಮೀನು ಹಿಡಿಯುವ ಗಾಣಗಳು, ಮಂಡಕ್ಕಿ, ತರಕಾರಿ ಬೀಜಗಳು, ಚಿಮಣಿ ದೀಪ, ತಂಬಾಕು ಪುಡಿ, ಬಸ್ಮ, ಕುಂಕುಮ ಸೇರಿದಂತೆ ಅಂಗಡಿಯಲ್ಲಿ ದೊರಕದ ಹಲವಾರು ಸಾಮಗ್ರಿಗಳ ಮಾರಾಟ ಕೇಂದ್ರವಾಗಿದ್ದ ಸಿದ್ದಾಪುರ ಸಂತೆಮಾಳ ಸೂಕ್ತ ಸೌಲಭ್ಯ ಹಾಗೂ ವ್ಯವಸ್ಥಿತ ವಿನ್ಯಾಸದ ಕೊರತೆಯಿಂದ ಗ್ರಾಮಸ್ಥರಿಂದ ದೂರ ಉಳಿದಿದೆ.
ಅಭಿವೃದ್ಧಿಗೆ ಹಣದ ಕೊರತೆ: ಸಂತೆ ಮಾರುಕಟ್ಟೆ ಪ್ರದೇಶವನ್ನು ಅಭಿವೃದ್ಧಿಪಡಿಸಿದರೆ ಗ್ರಾಮ ಪಂಚಾಯಿತಿಗೆ ಬಾಡಿಗೆ ರೂಪದಲ್ಲಿ ಉತ್ತಮ ವರಮಾನ ದೊರಕಲಿದೆ ಎಂಬುವುದು ಸ್ಥಳಿಯರ ಅಭಿಪ್ರಾಯ. ಮಾರುಕಟ್ಟೆ ಅಭಿವೃದ್ಧಿಗೆ ಹೆಚ್ಚಿನ ಹಣಕಾಸು ಅಗತ್ಯವಿದ್ದು ಗ್ರಾಮ ಪಂಚಾಯಿತಿಗೆ ಲಭ್ಯವಿರುವ ಅನುದಾನದಲ್ಲಿ ಮಾರುಕಟ್ಟೆ ಅಭಿವೃದ್ಧಿ ಅಸಾಧ್ಯ, ಸ್ಥಳೀಯ ಶಾಸಕರ ಹಾಗೂ ಸಂಸದರ ಸಹಕಾರ ಅಗತ್ಯ ಎಂಬುವುದು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯ ಅಭಿಪ್ರಾಯ.
ರಾಜ್ಯ ಸರ್ಕಾರದ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ಯೋಜನೆಯಡಿ ಅನುದಾನ ಲಭ್ಯವಾದರೆ ಸಮಗ್ರ ಅಭಿವೃದ್ಧಿಗೆ ಸಾಧ್ಯತೆಗಳಿವೆ ಎನ್ನುವುದು ಸಿದ್ದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಕೆ. ಮಣಿ ಅವರ ಅಭಿಪ್ರಾಯವಾಗಿದೆ. ಸಹಕಾರ ಸಂಘದೊಂದಿಗೆ ಸಮಾಲೋಚನೆ: ಸಿದ್ದಾಪುರ ಮಾರುಕಟ್ಟೆ ಪ್ರದೇಶದಲ್ಲಿ ಸ್ಥಳೀಯ ಸಹಕಾರ ಸಂಘ 15 ಸೆಂಟ್ ಭೂಮಿ ಹೊಂದಿಕೊಂಡಿದ್ದು ಗ್ರಾಮ ಪಂಚಾಯಿತಿ ಹಾಗೂ ಸಹಕಾರ ಸಂಘದ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ.
ಸಹಕಾರ ಸಂಘ ತಮ್ಮ ಅರಿವಿಗೆ ಬಾರದೆ ದಾಖಲಾತಿಗಳನ್ನು ಸೃಷ್ಟಿಸಿದ್ದಾರೆ ಎಂಬುವುದು ಗ್ರಾಮ ಪಂಚಾಯಿತಿಯ ಆರೋಪವಾಗಿದೆ. ಸಹಕಾರ ಸಂಘ ನಿಯಮಾನುಸಾರ ತಮ್ಮಗೆ ಭೂಮಿ ಮಂಜೂರಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಸಹಕಾರ ಸಂಘದ ನಿರ್ದೇಶಕ ಮಂಡಳಿಯೊಂದಿಗೆ ಸಮಾಲೋಚಿಸಿ ಶೀಘ್ರದಲ್ಲಿಯೇ ಸಮಸ್ಯೆಯ ಬಗೆಹರಿಸಲು ಯತ್ನಿಸುವುದ್ದಾಗಿ ಗ್ರಾ. ಪಂ. ಅಧ್ಯಕ್ಷ ಎಂ.ಕೆ. ಮಣಿ ತಿಳಿಸಿದ್ದಾರೆ.