ಸಿದ್ದಾಪುರ: ಇಲ್ಲಿ ಮಳೆ ಸುರಿದರೆ ಸಾಕು ಪ್ರಮುಖ ರಸ್ತೆಗಳು ಚರಂಡಿ ನೀರಿನಿಂದ ನೀರು ತುಂಬಿ ಎಲ್ಲೆಂದರಲ್ಲಿ ಹರಿಯುತ್ತದೆ, ಗಾಳಿ ಬೀಸಿದರೆ ಪಟ್ಟಣದಲ್ಲಿ ಕಸದ ರಾಶಿಯೇ ಹರಿದಾಡುತವೆ, ಇದಕ್ಕೂ ಮಿಗಿಲಾದ ಸಮಸ್ಯೆಯೆಂದರೆ ತ್ಯಾಜ ವಿಲೇವಾರಿ ಮತ್ತು ವ್ಯವಸ್ಥಿತ ಚರಂಡಿಗಳು ಇಲ್ಲದಿರುವುದು...
ಹೌದು. ಪಟ್ಟಣ ಮಾದರಿಯಲ್ಲಿ ಬೆಳೆದ ಸಿದ್ದಾಪುರದ ಸ್ಥಿತಿ ಇದು. ಬಸ್ ನಿಲ್ದಾಣದ ಸಮೀಪವಿರುವ ಪ್ರಮುಖ ಚರಂಡಿಗಳು ವ್ಯಾಪಾರಿಗಳು ಒತ್ತುವರಿ ಮಾಡಿಕೊಂಡಿದ್ದರೆ, ಉಳಿದ ಚರಂಡಿಗಳು ಕಸ– ಕಡ್ಡಿಗಳು ಮತ್ತು ಹೂಳು ತುಂಬಿ ಚರಂಡಿಗಳು ಇಲ್ಲವೇನೂ ಎಂಬಂತಾಗಿವೆ. ಚರಂಡಿಗಳನ್ನು ವ್ಯವಸ್ಥಿತವಾಗಿ ನಿರ್ವಹಿಸ ದಿರುವುದು ಒಂದು ಕಾರಣವಾದರೆ, ಸ್ಥಳೀಯ ಗ್ರಾಮ ಪಂಚಾುತಿಯ ಕೆಲ ಸದಸ್ಯರು ಉದ್ಯೋಗ ಖಾತ್ರಿ ಕಾಮಗಾರಿಗೆ ತೋರಿದ ಕನಿಷ್ಠ ಆಸಕ್ತಿಯನ್ನೂ ಚರಂಡಿಗಳ ನಿರ್ವಹಣೆಗೆ ತೋರಿಲ್ಲ.
ಚರಂಡಿ ನೀರು ಹರಿಯದ ಪ್ರದೇಶಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಗಳ ಮುಖಾಂತರ ಕಾಂಕ್ರೀಟ್ ಚರಂಡಿಗಳನ್ನು ನಿರ್ಮಿಸಿದ್ದಾರೆ. ಆದರೆ, ಚರಂಡಿ ನೀರು ತುಂಬಿ ಹರಿಯುವ ಮೈಸೂರು ರಸ್ತೆ ಮತ್ತು ವಿರಾಜಪೇಟೆ ರಸ್ತೆಗಳಲ್ಲಿ ಚರಂಡಿಗಳ ದುರಸ್ತಿ ನಿರ್ವಹಿಸಿ ವರ್ಷಗಳೇ ಉರಳಿದೆ ಎಂದು ಸ್ಥಳೀಯ ನಿವಾಸಿಗಳಾದ ನಾಸರ್ ಮತ್ತು ಅಂಥೋಣಿ ಆರೋಪಿಸಿದ್ದಾರೆ.
ಪಟ್ಟಣ ಪ್ರದೇಶದ ಚರಂಡಿಗಳನ್ನು ಸ್ವಚ್ಛಗೊಳಿಸುವಂತೆ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿದರೆ ತಿಂಗಳಾದರೂ ಯಾರೂ ಇತ್ತ ಬರುವುದಿಲ್ಲ. ಆದರೆ, ಯಾರೂ ವಾಸವಿಲ್ಲದ ಪ್ರದೇಶದಲ್ಲಿ ತಡೆಗೋಡೆ ಕಾಂಕ್ರೀಟ್ ರಸ್ತೆಗಳನ್ನು ಮಾಡಿ ಕೊಡಿ ಎಂದು ಫೋನ್ ಮಾಡಿದರೂ ಸಾಕು ಗ್ರಾಮ ಪಂಚಾಯಿತಿ ಸದಸ್ಯರು ಉದ್ಯೋಗ ಖಾತ್ರಿ ಯೋಜೆನೆಯಡಿಯಲ್ಲಿ ಅವುಗಳನ್ನು ಸೇರ್ಪಡೆಗೊಳಿಸಿ ದಿನಬೆಳಗಾಗುತ್ತಿದ್ದಂತೆ ಕಾಮಗಾರಿಗಳು ಪೂರ್ಣವಾಗಿರುತದೆ.
ಕೇವಲ ಲಾಭದಾಯಕ ಕಾಮಗಾರಿಗಳಿಗೆ ಶೀಘ್ರದಲ್ಲಿ ಚಾಲನೆ ನೀಡುವಂತೆ ಕೆಲ ಸದಸ್ಯರು ಒತ್ತಾಯ ಮಾಡುತಿದ್ದರು ಎಂದು ಸಿದ್ದಾಪುರ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ಮಾಹಿತಿ ನೀಡಿದ್ದಾರೆ.
ಗ್ರಾಮ ಪಂಚಾಯಿತಿ ಮುಂದೆ ಚರಂಡಿ ಇತ್ತೇ ಎಂದು ಅನುಮಾನ ಬರುವಷ್ಟು ನೆಸಮವಾಗಿದೆ. ಮಾರುಕಟ್ಟೆ ಪ್ರದೇಶದ ಚರಂಡಿ, ಮಡಿಕೇರಿ ರಸ್ತೆಯ ಚರಂಡಿ ಹಾಗೂ ಎಂ.ಜಿ. ರಸ್ತೆಯ ಚರಂಡಿಗಳದ್ದೂ ಇದೇ ಸ್ಥಿತಿ. ಚರಂಡಿಗಳಲ್ಲಿ ಸ್ವಚ್ಛಂದವಾಗಿ ನೀರು ಹರಿಯಲು ಮಳೆಯನ್ನೇ ಆಶ್ರುಸಬೇಕಾಗಿದೆ ಎಂದು ಗ್ರಾಮಸ್ಥರು ಲೇವಡಿ ಮಾಡುವುದರಲ್ಲಿ ತಪ್ಪೇನು ಇಲ್ಲ.