ಚನ್ನಪಟ್ಟಣ: ತಾಲ್ಲೂಕಿನ ಹುಲುವಾಡಿ ಗ್ರಾಮದಲ್ಲಿ ರೈತರೊಬ್ಬರ ತೋಟದಲ್ಲಿ ಮಂಗಳವಾರ ಚಿರತೆಯೊಂದರ ಕಳೇಬರ ಪತ್ತೆಯಾಗಿದೆ.
ಗ್ರಾಮದ ರೈತ ಶ್ರೀಧರ್ ಅವರಿಗೆ ಸೇರಿದ ತೋಟದಲ್ಲಿ ಸೀಮೆಹುಲ್ಲಿನ ನಡುವೆ ಚಿರತೆ ಕಳೇಬರ ದೊರೆತಿದೆ. ಶ್ರೀಧರ್ ಅವರು ಬೆಳಿಗ್ಗೆ ತಮ್ಮ ಹಸುಗಳಿಗೆ ಹುಲ್ಲು ಕೊಯ್ಯಲು ತೆರಳಿದ್ದ ವೇಳೆ ಚಿರತೆ ಕಳೇಬರ ನೋಡಿ ತಕ್ಷಣ ಅರಣ್ಯಾಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದಾರೆ.
ನಂತರ ಸ್ಥಳಕ್ಕೆ ಭೇಟಿ ನೀಡಿದ ಅರಣ್ಯಾಧಿಕಾರಿಗಳು ಚಿರತೆ ಕಳೇಬರವನ್ನು ವಶಕ್ಕೆ ಪಡೆದು, ಸ್ಥಳ ಪರಿಶೀಲನೆ ನಡೆಸಿದರು.
ಚಿರತೆಯು ಮೂರು ದಿನಗಳ ಹಿಂದೆ ಅನಾರೋಗ್ಯದಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕಾರಣ ತಿಳಿಯಲಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.