ಸೊರಬದಿಂದ 7 ಕಿ.ಮೀ ದೂರದಲ್ಲಿರುವ ಸಿದ್ದಾಪುರ ಮಾರ್ಗ ರಸ್ತೆಯಲ್ಲಿ ಸಿಗುವ ಕಕ್ಕರಸಿ ಗ್ರಾಮ ಕೆಲವು ಐತಿಹ್ಯಗಳ ತಾಣ.
ಪ್ರಕೃತಿಯ ಮಡಿಲಲ್ಲಿ ಮಿಂದಿರುವ ಕಕ್ಕರಸಿ ಗ್ರಾಮ ಹಲವು ಜಾತಿಗಳ ಸಂಗಮ. ಈ ಗ್ರಾಮ ತಾಲ್ಲೂಕಿನ ಮುಟುಗುಪ್ಪೆ ಗ್ರಾಮ ಪಂಚಾಯ್ತಿಗೆ ಒಳಪಟ್ಟಿದೆ. ಸುಮಾರು 500 ಜನ ವಾಸವಾಗಿರುವ ಈ ಊರಿನಲ್ಲಿ ಸಂಖ್ಯೆಯಲ್ಲಿ ಮಡಿವಾಳ ಜನಾಂಗ ಹೆಚ್ಚಾಗಿದ್ದು, ಈಡಿಗ, ಲಿಂಗಾಯತ, ಬಿಲ್ಲವ, ಒಕ್ಕಲಿಗರು, ವಿಶ್ವಕರ್ಮ, ಪೂಜಾರಿ ಸೇರಿದಂತೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು ಇದ್ದಾರೆ.
ಗ್ರಾಮದ ಹೆಸರಿನ ಹಿನ್ನಲೆ: ಪುರಾತನ ಕಾಲದಲ್ಲಿ ಕಕ್ಕಯ್ಯ ಎಂಬ ಋಷಿ ಮುನಿ ವಾಸವಾಗಿದ್ದು, ಅವರು ಶಿವೈಕ್ಯ ಆದ ಕಾಲಾಂತರದಲ್ಲಿ ಕಕ್ಕಯ್ಯ ಮುನಿಯ ಹೆಸರು ಗ್ರಾಮ್ಯ ಭಾಷೆಯಲ್ಲಿ ಕಕ್ಕರಸಿ ಎಂದು ಬದಲಾವಣೆ ಹೊಂದಿದೆ ಎನ್ನುತ್ತಾರೆ ಗ್ರಾಮದ ಹಿರಿಯರಾದ ಸದಾಶಿವಪ್ಪ ಗೌಡ್ರು.
ಕಕ್ಕಯ್ಯ ಮುನಿಗಳು ಕ್ರಿ.ಶ. 2ನೇ ಶತಮಾನದಲ್ಲಿ ವಾಸವಾಗಿದ್ದರು ಎನ್ನುವುದಕ್ಕೆ ಆ ಕಾಲದ ಶಿವಲಿಂಗದ ಕಲ್ಲುಗಳು, ವೀರಭದ್ರ ಮೂರ್ತಿವುಳ್ಳ ಕಲ್ಲುಗಳು ಅವರು ವಾಸವಾಗಿದ್ದರು ಎನ್ನುವುದಕ್ಕೆ ಸಾಕ್ಷಿಯನ್ನು ಪುಷ್ಟೀಕರಿಸುತ್ತವೆ.
ಗ್ರಾಮದಲ್ಲಿ 100ರಿಂದ 110 ಕುಟುಂಬಗಳು ಇದ್ದು, ಯಾವುದೇ ಭೇದ ಭಾವವಿಲ್ಲದೇ ಒಂದೇ ತಾಯಿಯ ಮಕ್ಕಳಂತೆ ಪರಸ್ಪರ ಪ್ರೀತಿಯಿಂದ ಸಹ ಜೀವನ ನಡೆಸುತ್ತಿದ್ದಾರೆ. ಗ್ರಾಮದಲ್ಲಿ ಹಬ್ಬ–ಹರಿದಿನಗಳನ್ನು ಎಲ್ಲರೂ ಸೇರಿ ಒಟ್ಟಾಗಿ ಆಚರಿಸುತ್ತಾರೆ.
ಮೂಲ ಕಸುಬು ಕೃಷಿಯಾಗಿದ್ದು, ಕೆಲವು ಯುವಕರು ಈಚೆಗೆ ಬೆಂಗಳೂರು ಮತ್ತಿತರ ನಗರಗಳಿಗೆ ಉದ್ಯೋಗಕ್ಕಾಗಿ ವಲಸೆ ಹೋಗಿರುವುದು ಬಿಟ್ಟರೆ ಅತಿಯಾದ ಆದಾಯವನ್ನು ಹೊಂದಿರುವ ಕೃಷಿ ಕುಟುಂಬಗಳು ಕಡಿಮೆ. ಕೃಷಿಯನ್ನೇ ಅವಲಂಬಿಸಿ ಬದುಕುವ ಕುಟುಂಬಗಳಿಗೆ ಬೇರೆ ಆದಾಯವಿಲ್ಲ.
ಭತ್ತ, ಅಡಿಕೆ, ರಬ್ಬರ್, ಶುಂಠಿ, ಜೋಳ ಬೆಳೆಗಳನ್ನು ಬೆಳೆಯುತ್ತಾರೆ.
ಗ್ರಾಮಕ್ಕೆ ಬೇಕಾಗಿರುವ ಸೌಲಭ್ಯಗಳು: ಅಭಿವೃದ್ಧಿ ಸಾಕಷ್ಟು ಬೇಕಾಗಿದೆ. ಗ್ರಾಮದ ಬಸ್ ನಿಲ್ದಾಣದಿಂದ ಊರಿನವರೆಗೆ ರಸ್ತೆ ಹಾಗೂ ಗ್ರಾಮದ ಮುಖ್ಯ ರಸ್ತೆ ಮಳೆಗಾಲದಲ್ಲಿ ಕೆಸರು ಗದ್ದೆಯಾಗಿ ಸಂಚರಿಸಲು ತೊಂದರೆಯಾಗುವುದರಿಂದ ತಕ್ಷಣವೇ ಡಾಂಬರೀಕರಣ ಆಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸುತ್ತಾರೆ.
ಗ್ರಾಮದಲ್ಲಿ ಸ್ವಚ್ಛತೆ ಕಾಪಾಡಲು ಬಾಕ್ಸ್ ಚರಂಡಿ ನಿರ್ಮಾಣ ಮಾಡಬೇಕೆಂದು ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಆಂಜನೇಯಪ್ಪ ಹೇಳುತ್ತಾರೆ.
ಏನೇನು ಬೇಕಿದೆ ?
ರಸ್ತೆಗಳಿಗೆ ಡಾಂಬರೀಕರಣ
ಚರಂಡಿ ನಿರ್ಮಾಣ
ದೇವಸ್ಥಾನ ಜೀರ್ಣೋದ್ಧಾರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.