ಹೊಸನಗರ: ‘ಗುಣಮಟ್ಟದ ಆಹಾರ ಸೇವನೆಯಿಂದ ತಾಯಿ, ಮಗುವಿನ ಆರೋಗ್ಯ ಉತ್ತಮವಾಗಿರುತ್ತದೆ’ ಎಂದು ಹರಿದ್ರಾವತಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ವಾಟಗೋಡು ಸುರೇಶ್ ತಿಳಿಸಿದರು. ಹರಿದ್ರಾವತಿ ಗ್ರಾಮ ಪಂಚಾಯ್ತಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಕೇಂದ್ರ ಸೋಮವಾರ ಆಯೋಜಿಸಿದ್ದ ವಿಶ್ವ ಸ್ತನ್ಯಪಾನ ಸಪ್ತಾಹದ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
‘ಆರೋಗ್ಯವಂತ ಶಿಶುವನ್ನು ಬೆಳೆಸಿ ಸಮಾಜಕ್ಕೆ ಕೊಡುವಲ್ಲಿ ತಾಯಿಯ ಪಾತ್ರ ಹಿರಿದು. ಸ್ತನ್ಯಪಾನ ಮಾಡಿಸುವುದರಿಂದ ತಾಯಿ ಸೌಂದರ್ಯ ಹಾಳಾಗುವುದಿಲ್ಲ. ಬೆಳೆಗಳಲ್ಲಿ ಅತಿಯಾದ ರಾಸಾಯನಿಕ ಬಳಸುವುದು ತಾಯಿ ಹಾಗೂ ಶಿಶುವಿನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ’ ಎಂದರು.
ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಸಿ.ಸದಾಶಿವಪ್ಪ ಮಾತನಾಡಿ, ‘ತಾಯಿ ಹಾಲಿನಲ್ಲಿ ಎಲ್ಲಾ ಪೌಷ್ಟಿಕಾಂಶಗಳಿದ್ದು ಮಗುವಿನ ಬೆಳವಣಿಗೆಗೆ ಸಹಕಾರಿಯಾಗಿವೆ. ನಿಯಮಿತವಾಗಿ ಶಿಶುವಿಗೆ ಹಾಲು ಉಣಿಸುವುದರಿಂದ ಶೇ 22ರಷ್ಟು ಶಿಶುಮರಣ ತಪ್ಪಿಸಬಹುದು’ ಎಂದರು.
‘ಶಿಶುವಿಗೆ ಹಾಲುಣಿಸುವುದರಿಂದ ತಾಯಿಗೆ ರಕ್ತಸ್ರಾವ ಕಡಿಮೆಯಾಗಿ ಗರ್ಭಕೋಶ ಸಹಜ ಸ್ಥಿತಿಗೆ ಬರುತ್ತದೆ. ಅಲ್ಲದೇ ಸ್ತನ ಕ್ಯಾನ್ಸರ್ ಆಗುವ ಸಾಧ್ಯತೆಗಳನ್ನು ಕಡಿಮೆ ಮಾಡಬಹುದು’ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಸುವರ್ಣಾ ಗುರುವ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ತಾಲ್ಲೂಕು ಪಂಚಾಯ್ತಿ ಸದಸ್ಯರಾದ ರುಕ್ಮಿಣಿರಾಜು, ಗ್ರಾಮ ಪಂಚಾಯ್ತಿ ಉಪಾಧ್ಯಕ್ಷರಾದ ವೀಣಾ ಗೋಪಾಲ್, ಸದಸ್ಯರಾದ ಮಂಜುನಾಥ ಎಸ್.ಬ್ಯಾಣದ್, ಮಂಜುನಾಥ, ಶ್ರೀಜಯ ಸುಬ್ಬರಾವ್, ವಿದ್ಯಾಧರ ಭಟ್, ಲತಾ ಮಂಜಪ್ಪ, ಸುವರ್ಣಾ, ಕಾರ್ಯದರ್ಶಿ ಲೋಕೇಶ್ ಕುಮಾರ್, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ತಾಯಂದಿರು ಭಾಗವಹಿಸಿದ್ದರು.
ಸರಸಾ ಪ್ರಾರ್ಥಿಸಿದರು. ರಜತಾ ಸ್ವಾಗತಿಸಿದರು. ಶಕುಂತಲಾ ಕಾರ್ಯಕ್ರಮ ನಿರೂಪಿಸಿದರು. ಪುಷ್ಪಾ ವಂದಿಸಿದರು.