ತುಮಕೂರು: ಎಸ್ಸೆಸ್ಸೆಲ್ಸಿ ಪರೀಕ್ಷೆಯ ಮೌಲ್ಯಮಾಪನ ಕಾರ್ಯವು ಸೋಮವಾರದಿಂದ ಆರಂಭವಾಗಿದ್ದು, ಜಿಲ್ಲಾ ಕೇಂದ್ರಗಳಿಗೆ ಯಾವ ಜಿಲ್ಲೆಗಳಿಂದ ಉತ್ತರ ಪತ್ರಿಕೆಗಳು ಬಂದಿವೆ ಎಂಬ ಗೌಪ್ಯತೆಯನ್ನು ಮೌಲ್ಯಮಾಪಕರು ಕಾಪಾಡುತ್ತಿಲ್ಲ.
‘ತುಮಕೂರು ಜಿಲ್ಲೆಯ ಮೌಲ್ಯಮಾಪನ ಕೇಂದ್ರಗಳಿಗೆ ಇಂತಹ ಜಿಲ್ಲೆಗಳಿಂದ ಉತ್ತರ ಪತ್ರಿಕೆಗಳು ಬಂದಿವೆ’ ಎಂದು ಬಿಆರ್ಸಿ ಒಬ್ಬರು ಎರಡು ಜಿಲ್ಲೆಗಳ ಹೆಸರನ್ನು ಹಂಚಿಕೊಂಡಿದ್ದಾರೆ. ಉತ್ತರ ಪತ್ರಿಕೆಗಳನ್ನು ಪರಿಶೀಲಿಸುತ್ತಿರುವ ಚಿತ್ರವೂ ಇದರ ಜತೆಗೆ ಇದೆ. ಈ ಚಿತ್ರಗಳು ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿವೆ.
ಪಾರದರ್ಶಕವಾಗಿ ಮೌಲ್ಯಮಾಪನ ನಡೆಸುವ ಉದ್ದೇಶದಿಂದ ಒಂದು ಜಿಲ್ಲೆಯ ಉತ್ತರ ಪತ್ರಿಕೆಗಳನ್ನು ಮತ್ತೊಂದು ಜಿಲ್ಲೆಗೆ ಕಳುಹಿಸಲಾಗುತ್ತದೆ. ಮೌಲ್ಯಮಾಪನಕ್ಕೆ ಹಾಜರಾದವರು ಯಾವ ಜಿಲ್ಲೆಯ ಪತ್ರಿಕೆಗಳು ಬಂದಿವೆ ಎಂಬುವುದನ್ನು ಬಹಿರಂಗ ಪಡಿಸುವಂತಿಲ್ಲ. ಕೋಡ್ ನಂಬರ್ ಆಧಾರದ ಮೇಲೆ ಮೌಲ್ಯಮಾಪನ ಪೂರ್ಣಗೊಳಿಸಬೇಕು. ಆದರೆ ಸಿಬ್ಬಂದಿಯೇ ತಮ್ಮ ಮೊಬೈಲ್ನಲ್ಲಿ ಮೌಲ್ಯಮಾಪನ ಕೇಂದ್ರದ ಚಿತ್ರ ತೆಗೆದು, ವಿವರಗಳನ್ನು ಹಂಚಿಕೊಂಡಿದ್ದಾರೆ.
ಮಕ್ಕಳು, ಶಿಕ್ಷಕರಿಗೆ ನಿಯಮ, ಆದೇಶಗಳ ಬಗ್ಗೆ ಪಾಠ ಹೇಳುವ ಅಧಿಕಾರಿಗಳೇ ಸರಿಯಾಗಿ ನಿಯಮ ಪಾಲಿಸುತ್ತಿಲ್ಲ. ಸರ್ಕಾರದ ನಿಯಮ ಉಲ್ಲಂಘಿಸಿದ್ದಾರೆ. ಅಧಿಕಾರಿಗಳೇ ಹೀಗಾದರೆ ಮೌಲ್ಯಮಾಪನ ಕಾರ್ಯ ಪಾರದರ್ಶಕವಾಗಿ ನಡೆಯುತ್ತದೆ ಎಂಬುದಕ್ಕೆ ಏನು ಗ್ಯಾರಂಟಿ? ಎಂಬುವುದು ಮಕ್ಕಳು, ಪೋಷಕರ ಪ್ರಶ್ನೆಯಾಗಿದೆ.