ಪಾವಗಡ: ಸಂವಿಧಾನ ಬದಲಿಸಲು ಕಾಂಗ್ರೆಸ್ ಬಿಡುವುದಿಲ್ಲ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಕೆಲ ಬಿಜೆಪಿ ಪ್ರಮುಖರು ಸಂವಿಧಾನ ಬದಲಿಸುವ ಹೇಳಿಕೆಯನ್ನು ಪದೇ ಪದೇ ನೀಡುತ್ತಿದ್ದಾರೆ. ಆದರೆ ಇಂತಹವರ ವಿರುದ್ಧ ಪ್ರಧಾನಿ ಮೋದಿ, ಅಮಿತ್ ಶಾ ಯಾವುದೇ ಕ್ರಮ ಕೈಗೊಂಡಿಲ್ಲ. ಕಾಂಗ್ರೆಸ್ಗೆ ಸಂವಿಧಾನಕ್ಕೆ ಚಿಕ್ಕ ಪುಟ್ಟ ಬದಲಾವಣೆ ತಂದು ಬಲಪಡಿಸುವ ಯೋಜನೆ ಇದೆ. ಆದರೆ ಸಂವಿಧಾನ ಬದಲಾವಣೆ ಮಾಡಲು ಕಾಂಗ್ರೆಸ್ ಬಿಡುವುದಿಲ್ಲ ಎಂದರು.
ಈ ಬಾರಿ ಎನ್ಡಿಎ ಮೈತ್ರಿಕೂಟಕ್ಕೆ ದೇಶದಲ್ಲಿ 200 ಸ್ಥಾನಗಳೂ ಬರುವುದಿಲ್ಲ. ಸಮೀಕ್ಷೆಗಳ ಪ್ರಕಾರ ಕಾಂಗ್ರೆಸ್ ರಾಜ್ಯದಲ್ಲಿ 20 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ದೇಶದಲ್ಲಿ ಇಂಡಿಯಾ ಮೈತ್ರಿಕೂಟ ಅಧಿಕಾರ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಸಚಿವ ವೆಂಕಟರಮಣಪ್ಪ ಮಾತನಾಡಿ, ಕಳೆದ ಚುನಾವಣೆಯಲ್ಲಿಯೂ ದೇವೇಗೌಡ, ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ತಾಲ್ಲೂಕಿಗೆ ಬಂದು ಪ್ರಚಾರ ಮಾಡಿದ್ದರು. ಚುನಾವಣೆ ವೇಳೆ ಬಂದು ಸುಳ್ಳು ಭರವಸೆ ನೀಡಿ ಹೋಗುವುದಷ್ಟೇ ಅವರ ಕೆಲಸ ಎಂದು ಜರಿದರು.
ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ್ ಗೌಡ, ನಿಖಿತ್ ರಾಜ್ ಮೌರ್ಯ, ಮುರಳೀಧರ್ ಹಾಲಪ್ಪ, ನಗರ ಘಟಕದ ಅಧ್ಯಕ್ಷ ಸುದೇಶ್ ಬಾಬು ಮಾತನಾಡಿದರು.
ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷ ರಾಮಾಂಜಿನಪ್ಪ, ಪ್ರಮೋದ್ ಕುಮಾರ್, ಪುರಸಭೆ ಮಾಜಿ ಅಧ್ಯಕ್ಷ ಗುರಪ್ಪ, ಶಂಕರರೆಡ್ಡಿ, ಮೊಹಮದ್ ಫಜ್ಲುಲ್ಲ, ಪುರಸಭೆ ಸದಸ್ಯ ಪಿ.ಎಚ್. ರಾಜೇಶ್, ರವಿ, ಎಂಎಜಿ ಇಮ್ರಾನ್, ಮಣಿ, ನರಸಿಂಹರೆಡ್ಡಿ ಇದ್ದರು.