ಮಹಾರಾಷ್ಟ್ರದ ಸಾತಾರ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಘಟಾನುಘಟಿಗಳ ಹಣಾಹಣಿಗೆ ವೇದಿಕೆ ಸಿದ್ಧವಾಗಿದೆ. ಬಿಜೆಪಿಯು ಛತ್ರಪತಿ ಶಿವಾಜಿ ಮಹಾರಾಜರ ವಂಶಸ್ಥ ಉದಯನ್ ರಾಜೆ ಭೋಸ್ಲೆ ಅವರನ್ನು ಅಖಾಡಕ್ಕಿಳಿಸಿದರೆ, ಎನ್ಸಿಪಿ ಶರದ್ ಪವಾರ್ ಬಣವು ಶಶಿಕಾಂತ ಶಿಂದೆ ಅವರನ್ನು ಅಭ್ಯರ್ಥಿಯನ್ನಾಗಿಸಿದೆ. 2019ರ ಚುನಾವಣೆಯಲ್ಲಿ ಎನ್ಸಿಪಿಯಿಂದ ಸ್ಪರ್ಧಿಸಿದ್ದ ಭೋಸ್ಲೆ ಅವರು 1,26,528 ಮತಗಳ ಅಂತರದಿಂದ ಶಿವಸೇನಾದ ನರೇಂದ್ರ ಅಣ್ಣಾ ಸಾಹೇಬ್ ಪಾಟೀಲ್ ಅವರನ್ನು ಸೋಲಿಸಿದ್ದರು. ಬಳಿಕ ಇವರು ಎನ್ಸಿಪಿ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಈ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಭೋಸ್ಲೆ ಅವರನ್ನು ಎನ್ಸಿಪಿಯ ಶ್ರೀನಿವಾಸ ಪಾಟೀಲ್ ಅವರು 87,717 ಮತಗಳ ಅಂತರದಿಂದ ಪರಾಭವಗೊಳಿಸಿದ್ದರು. ಅನಂತರ ಭೋಸ್ಲೆ ಅವರು ರಾಜ್ಯಸಭೆ ಸದಸ್ಯರಾಗಿ ಆಯ್ಕೆಯಾಗಿದ್ದರು. ಬಿಜೆಪಿಯು ಮಹಾರಾಷ್ಟ್ರದಲ್ಲಿ ‘ಮುಹಾಯುತಿ’ ಮೈತ್ರಿಕೂಟದ ಜೊತೆಗಿರುವುದರಿಂದ ಆ ಪಕ್ಷದ ಅಭ್ಯರ್ಥಿ ಗೆಲ್ಲುವ ಸಾಧ್ಯತೆ ಹೆಚ್ಚಿದೆ ಎಂದು ಚುನಾವಣಾ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಬೋಸ್ಲೆ ಮತ್ತು ಶಿಂದೆ ಅವರು ಈ ಹಿಂದೆ ರಾಜ್ಯ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದು, ಸ್ಥಳೀಯವಾಗಿಯೂ ಪ್ರಭಾವಿ ಮುಖಂಡರಾಗಿದ್ದಾರೆ. ಈ ಕ್ಷೇತ್ರವು ಎನ್ಸಿಪಿಯ ಭದ್ರಕೋಟೆಯಾದರೂ ಪಕ್ಷವು ಎರಡು ಬಣಗಳಾಗಿ ವಿಭಜನೆಯಾಗಿರುವುದರಿಂದ ಈ ಬಾರಿ ಮತದಾರರು ಯಾರ ಕೈಹಿಡಿಯುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.