ಚಂಡೀಗಢದಲ್ಲಿ ಕಾಂಗ್ರೆಸ್ನ ಪ್ರಬಲ ಅಭ್ಯರ್ಥಿ ಮನೀಷ್ ತಿವಾರಿ ಅವರನ್ನು ಮಣಿಸಲು ಬಿಜೆಪಿಯು ಸಂಜಯ್ ಟಂಡನ್ ಅವರನ್ನು ಅಖಾಡಕ್ಕಿಳಿಸಿದೆ. ಬಿಜೆಪಿಯ ಚಂಡೀಗಢ ಘಟಕದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿರುವ ಸಂಜಯ್ ಅವರು ಪಕ್ಷ ಸಂಘಟನೆಗಾಗಿ ದುಡಿದವರು. ಇವರು ಇದೇ ಮೊದಲ ಬಾರಿ ಲೋಕಸಭಾ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. 2019ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕಿರಣ್ ಖೇರ್ ಅವರು ಇಲ್ಲಿಂದ ಸ್ಪರ್ಧಿಸಿ, 46,970 ಮತಗಳ ಅಂತರದಿಂದ ಕಾಂಗ್ರೆಸ್ನ ಪವನ್ ಕುಮಾರ್ ಬನ್ಸಲ್ ಅವರನ್ನು ಪರಾಭವಗೊಳಿಸಿದ್ದರು. ಕಿರಣ್ ಖೇರ್ ಅವರು ಇಲ್ಲಿಂದ ಎರಡು ಬಾರಿ ಗೆದ್ದಿದ್ದರು. ಕ್ಷೇತ್ರದಲ್ಲಿ ಈ ಬಾರಿಯೂ ಪಕ್ಷಕ್ಕೆ ಅನುಕೂಲಕರ ವಾತಾರಣವಿದ್ದು, ಸಂಜಯ್ ಅವರು ಜಯ ಗಳಿಸುತ್ತಾರೆಂಬುದು ಬಿಜೆಪಿ ನಾಯಕರ ವಿಶ್ವಾಸ. ಲೇಖಕರೂ ಆಗಿರುವ ಸಂಜಯ್ ಅವರು ಹಲವು ಕೃತಿಗಳನ್ನು ರಚಿಸಿದ್ದಾರೆ.