ಕಪ್ಪುಬಿಂದು ಅಥವಾ ಮೇಣದ ಬತ್ತಿಯ ಜ್ವಾಲೆಯಂತಹ ಒಂಟಿ ಬಿಂದುವನ್ನು ಎವೆಯಿಕ್ಕದೆ ನೋಡುವುದನ್ನು ಒಳಗೊಂಡ ಧ್ಯಾನದ ಒಂದು ವಿಧಾನವೇ ‘ತ್ರಾಟಕ’. ಇದು ಅತೀಂದ್ರಿಯ ಸಾಮರ್ಥ್ಯಗಳನ್ನು ವೃದ್ಧಿಗೊಳಿಸುತ್ತದೆ ಎಂದು ಹೇಳಲಾಗುತ್ತದೆ. ಇದೇ ಹೆಸರಿನ ಸಿನಿಮಾವೊಂದು ಶುಕ್ರವಾರ ಕಾಣುತ್ತಿದೆ.
‘ಜಿಗರ್ಥಂಡ’ ಚಿತ್ರ ನಿರ್ದೇಶಿಸಿದ್ದ ಶಿವಗಣೇಶ್ ಈ ಚಿತ್ರದ ಮೂಲಕ ಮರ್ಡರ್ ಮಿಸ್ಟರಿ ಕಥೆ ಹೇಳಲು ಹೊರಟಿದ್ದಾರೆ. ಚಿತ್ರದಲ್ಲಿ ನಾಯಕ ತನಿಖಾಧಿಕಾರಿಯಂತೆ. ತನಿಖೆಯ ಬೆನ್ನುಹತ್ತಿ ಹೋದ ಆತ ಮಾನಸಿಕ ಕಾಯಿಲೆಯಿಂದ ಬಳಲುತ್ತಿರುತ್ತಾನೆ. ತ್ರಾಟಕದ ಮೂಲಕ ಆತ ಹೇಗೆ ಹೊರಬಂದು ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿಕೊಂಡು ಚಮತ್ಕಾರದಿಂದ ಅಪರಾಧಿಗಳನ್ನು ಬಂಧಿಸುತ್ತಾನೆ ಎನ್ನುವುದೇ ಕಥಾಹಂದರ.
‘ಇದು ನೈಜ ಘಟನೆ ಆಧಾರಿತ ಚಿತ್ರವಲ್ಲ. ಪತ್ರಿಕೆಯೊಂದರಲ್ಲಿ ಸೈಕೊ ಕಿಲ್ಲರ್ಗಳನ್ನು ಕುರಿತ ಲೇಖನವೊಂದು ಬಂದಿತ್ತು. ಅದರಲ್ಲಿ ನೂರಾಮುವತ್ತೈದು ಮಂದಿ ಕಿಲ್ಲರ್ಗಳು ಕೊಲೆ ಮಾಡಿದ್ದಕ್ಕೆ ಒಂದೇ ಕಾರಣ ಹೇಳಿದ್ದರು. ಅದರ ಸುತ್ತವೇ ಕಥೆ ಹೆಣೆಯಲಾಗಿದೆ’ ಎಂದು ವಿವರಿಸಿದರು ಶಿವಗಣೇಶ್.
‘ಯೋಗದಲ್ಲಿ ಏಕಾಗ್ರತೆಯಿಂದ ಧ್ಯಾನ ಮಾಡಬೇಕು. ಆಗ ಮಾತ್ರ ಮನಸ್ಸು ಹತೋಟಿಗೆ ಬರುತ್ತದೆ. ಇದನ್ನು ನಾವು ಮೂರನೇ ಕಣ್ಣು ಎನ್ನುತ್ತೇವೆ’ ಎಂದರು.
ರಾಹುಲ್ ಐನಾಪುರ ಈ ಚಿತ್ರದ ನಾಯಕ. ಈ ಚಿತ್ರಕ್ಕಾಗಿ ಅವರು ಸಾಕಷ್ಟು ತಯಾರಿ ನಡೆಸಿದ್ದಾರಂತೆ. ಅವರು ರಂಗಭೂಮಿಯ ಹಿನ್ನೆಲೆಯಿಂದ ಬಂದಿದ್ದಾರೆ. ‘ತಾಂತ್ರಿಕವಾಗಿ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಚಿತ್ರಮಂದಿರಕ್ಕೆ ಬರುವ ಜನರಿಗೆ ರಂಜನೆಗೆ ಕೊರತೆಯಿಲ್ಲ’ ಎಂದರು.
‘ಒರಟ ಐ ಲವ್ ಯು’ ಚಿತ್ರದಲ್ಲಿ ನಟಿಸಿದ್ದ ಹೃದಯ ಈ ಚಿತ್ರದ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
ಅರುಣ್ ಸುರಧಾ ಅವರ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ಛಾಯಾಗ್ರಹಣ ವಿನೋದ್ ಭಾರತಿ ಅವರದ್ದು. ಭವಾನಿ ಪ್ರಕಾಶ್, ಅಜಿತ್ ಜಯರಾಮ್, ಅಕ್ಷತಾ ತಾರಾಗಣದಲ್ಲಿದ್ದಾರೆ.