ಇದು ಸಿದ್ಧಸೂತ್ರದ ಸಿನಿಮಾವಲ್ಲ. ಕಿರುಚಿತ್ರವೊಂದು ಸಿನಿಮಾವಾಗಿರುವುದರ ಎಲ್ಲ ಲಕ್ಷಣಗಳೂ ಇಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಮೌನ ಅಗತ್ಯಕ್ಕಿಂತ ಅಧಿಕವಾಗಿದೆ. ಕೆಲ ದೃಶ್ಯಗಳ ಬಳಿಕ ಬರುವ ಫೇಡ್ಔಟ್ಗಳು, ಪ್ರತಿ ದೃಶ್ಯ ಕೊನೆಯಾದ ಬಳಿಕ ಚಲಿಸದೇ ಉಳಿಯುವ ಕ್ಯಾಮೆರಾ..ಹೀಗೆ ಚಿತ್ರಕಥೆಯಲ್ಲಿ ಹಲವು ಪ್ರಯೋಗಗಳನ್ನು ನಿರ್ದೇಶಕರು ಮಾಡಿದ್ದಾರೆ. ‘ಫೋಟೋ’ದಂತೆ ಇವುಗಳು ಭಾಸವಾಗುತ್ತದೆ. ರೂಪಕಗಳನ್ನು ಬಳಸಿಕೊಂಡು ಚಿತ್ರಕಥೆ ಹೆಣೆಯಲಾಗಿದೆ. ಕೆಲವೊಂದು ದೃಶ್ಯಗಳನ್ನು ಸೆರೆಹಿಡಿದಿರುವ ರೀತಿ ಅದ್ಭುತವಾಗಿದೆ. ತಂದೆ–ಮಗ ನಡೆದು ಹೋಗುತ್ತಿರುವ ದೃಶ್ಯ, ಕ್ಲೈಮ್ಯಾಕ್ಸ್ನಲ್ಲಿ ಮಗನನ್ನು ಹೆಗಲ ಮೇಲೆ ಹೊತ್ತು ಅಪ್ಪ ಓಡುವ ಡ್ರೋನ್ ದೃಶ್ಯ ಚಿತ್ರದ ಮೂಲಕಥೆಯನ್ನು ಗಾಢವಾಗಿ ಹೇಳುತ್ತವೆ. ಹಿನ್ನೆಲೆ ಸಂಗೀತವಿಲ್ಲದೆ ದೃಶ್ಯಗಳು ಸಾಗುವುದು ನೋಡುಗನನ್ನು ಚಿತ್ರದೊಳಗೆ ತಲ್ಲೀನವಾಗಿಸುತ್ತದೆ. ಲಾಕ್ಡೌನ್ ಸಂದರ್ಭದಲ್ಲಿ ಜನರ ಕೃತಕ, ಅಮಾನವೀಯ ನಡವಳಿಕೆಗಳನ್ನು ನಿರ್ದೇಶಕರು ಸಂಕ್ಷಿಪ್ತವಾಗಿ ತೋರಿಸಿದ್ದಾರೆ. ಉತ್ತರ ಕರ್ನಾಟಕದ ಜನರಿಗೆ ಮಾತೂ ಒಂದು ಸಂಪತ್ತು. ಹಿಂಗಿದ್ದೂ, ಚಿತ್ರದ ಪಯಣದುದ್ದಕ್ಕೂ ಪಾತ್ರಗಳು ಸಂಪೂರ್ಣ ಮೌನವಹಿಸಿರುವುದು ದೃಶ್ಯಗಳನ್ನು ಕೃತಕವಾಗಿಸಿವೆ. ಆದರೂ ಇರುವ ಕೆಲ ಸಂಭಾಷಣೆಗಳು ದಟ್ಟವಾದ ಪ್ರಭಾವ ಬೀರುವಂತಿದೆ.