ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಿವು ಮೊದಲ ಚಿಕಿತ್ಸೆ

Last Updated 6 ನವೆಂಬರ್ 2015, 19:30 IST
ಅಕ್ಷರ ಗಾತ್ರ

ಭಾರತದಲ್ಲಿ ಸದ್ಯ ಮಧುಮೇಹ, ಅಧಿಕರಕ್ತದೊತ್ತಡ ಸಾಮಾನ್ಯವಾಗಿ ಕಂಡುಬರುವ ಸಮಸ್ಯೆಗಳು. ಇವುಗಳ ಸಾಲಿಗೆ ಕ್ಯಾನ್ಸರ್‌ನಂತಹ ಕಾಯಿಲೆಗಳು ಸೇರುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಬಹುತೇಕವಾಗಿ ಈ ರೋಗ ಅಂತಿಮ ಹಂತದಲ್ಲಿಯೇ ಪತ್ತೆಯಾಗುತ್ತದೆ. 

ಅಮೆರಿಕದಂತಹ ಮುಂದುವರಿದ ದೇಶಗಳಲ್ಲಿ ಕ್ಯಾನ್ಸರ್‌ ಪೀಡಿತರು1-2 ನೇ ಹಂತದಲ್ಲಿಯೇ ಜಾಗೃತರಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಾರೆ ಆದರೆ ಭಾರತದಲ್ಲಿ ಶೇ.80 ರಷ್ಟು ರೋಗಿಗಳು 3-4ನೇ ಹಂತದಲ್ಲಿದ್ದಾಗ ವೈದ್ಯರ ಬಳಿ ಬರುವರು. ಈ ಹಂತದಲ್ಲಿ ರೋಗ ಗುಣಮುಖವಾಗುವ ಸಾಧ್ಯತೆ ಅತೀ ಕಡಿಮೆ. ಭಾರತದಲ್ಲಿ ಈ ಬಗ್ಗೆ ಇನ್ನೂ ಹೆಚ್ಚಿನ ಜಾಗೃತಿ ಮೂಡಬೇಕಿದೆ.

ವಿಶ್ವದ ಕ್ಯಾನ್ಸರ್ ಬಾಧಿತ ದೇಶಗಳಲ್ಲಿ ಭಾರತ 5ನೇ ಸ್ಥಾನ ಪಡೆದಿದೆ. ಭಾರತದಲ್ಲಿ ಪ್ರತಿ ವರ್ಷ 10 ಲಕ್ಷ ಜನರಲ್ಲಿ ಕ್ಯಾನ್ಸರ್ ರೋಗ ಪತ್ತೆಯಾಗುತ್ತದೆ. ಇವರಲ್ಲಿ ಶೇ. 95 ರಷ್ಟು ಜನರಲ್ಲಿ ಕಂಡುಬರುವ ಕ್ಯಾನ್ಸರ್ ಗೆ ತಂಬಾಕು ಸೇವನೆಯೇ ಕಾರಣ ಎನ್ನುವುದು ಎಲ್ಲರಿಗೂ ತಿಳಿದ ವಿಷಯ. ತಂಬಾಕಿನಿಂದ ಮುಖ್ಯವಾಗಿ ಬಾಯಿ, ಗಂಟಲು, ಶ್ವಾಸಕೋಶ, ಅನ್ನನಾಳ, ಕರುಳು, ಮೂತ್ರಪಿಂಡ ಮುಂತಾದ ಅಂಗಗಳು ಕ್ಯಾನ್ಸರ್‌ನಿಂದ ಪೀಡಿತವಾಗುತ್ತವೆ. ಇನ್ನು ಧೂಮಪಾನದಿಂದ ಹೆಚ್ಚಾಗಿ ಶ್ವಾಸಕೋಶದ ಕ್ಯಾನ್ಸರ್ ಬರುತ್ತದೆ.

ಸ್ತನ ಕ್ಯಾನ್ಸರ್
ಇನ್ನು ಕ್ಯಾನ್ಸರ್ ಪೀಡಿತರಲ್ಲಿ ಸ್ತನ ಕ್ಯಾನ್ಸರ್ ಎರಡನೇಯ ಸ್ಥಾನ ಹೊಂದಿದೆ. ದಾಖಲಾದ ಕ್ಯಾನ್ಸರ್ ರೋಗಿಗಳ ಸಂಖ್ಯೆಯ ಪ್ರಕಾರ ಪ್ರತಿ ಲಕ್ಷ ಜನರಲ್ಲಿ 36 ಜನ ಸ್ತನ ಕ್ಯಾನ್ಸರ್‌ಗೆ ಗುರಿಯಾದವರಿದ್ದಾರೆ. ಸಾಮಾನ್ಯ ವಾಗಿ 55ವರ್ಷ ದಾಟಿದ ಮಹಿಳೆಯರಲ್ಲಿ ಸ್ತನಕ್ಯಾನ್ಸರ್ ಕಂಡುಬರುತ್ತದೆ. ಆದರೆ ಆತಂಕಕಾರಿ ವಿಷಯವೆಂದರೆ ಹದಿಹರೆಯದ ಯುವತಿಯರೂ  ಕ್ಯಾನ್ಸರ್  ಪೀಡಿತರಾಗಿದ್ದಾರೆ. 

ಕಾರಣಗಳು: ಶೇ. 10-15 ರಷ್ಟು ಆನುವಂಶೀಯತೆ, ಮದುವೆ ವಿಳಂಬವಾಗಿ ಆಗುವುದು, ಎದೆಹಾಲುಣಿಸುವುದು ಕಡಿಮೆಯಾದಾಗ, ಅತೀ ಗರ್ಭನಿರೋಧಕ ಮಾತ್ರೆ ಸೇವನೆ, ಆರಾಮದಾಯಕ ಜೀವನಶೈಲಿ, ಮದ್ಯಪಾನ ಹಾಗೂ ಧೂಮಪಾನ.

ಲಕ್ಷಣಗಳು: ಸ್ತನದ ಗಾತ್ರ, ಬಣ್ಣ, ಸ್ವರೂಪದಲ್ಲಿ ಬದಲಾವಣೆ, ಮೊಲೆತೊಟ್ಟು ಒಳಮುಖವಾಗಿ ಮಡಚಿಕೊಂಡು ಅದರಿಂದ ರಕ್ತ ಅಥವಾ ಕೀವು ಸ್ರವಿಸಬಹುದು. ಆದ್ದರಿಂದ ಮಹಿಳೆಯರು ತಮ್ಮ ಸ್ತನದಲ್ಲಿ ಆಗುತ್ತಿರುವ ಎಲ್ಲ ಬದಲಾವಣೆಗಳನ್ನು ಗಮನಿಸುತ್ತಿದ್ದು ತೊಂದರೆ ಇದ್ದರೆ ಸಂಕೋಚ ಪಡದೇ ವಿಳಂಬ ಮಾಡದೇ ತಜ್ಞವೈದ್ಯರಿಂದ  ವೈದ್ಯಕೀಯ ತಪಾಸಣೆ, ಮ್ಯಾಮೋಗ್ರಫಿ, ಎಂಆರ್‌ಐ, ಅಲ್ಟ್ರಾಸೌಂಡ್ ಮುಂತಾದ ಪರೀಕ್ಷೆಗಳನ್ನೂ ಮಾಡಿಸಿಕೊಳ್ಳಬೇಕು.

ಚಿಕಿತ್ಸೆ: ಆರಂಭಿಕ ಹಂತದಲ್ಲಿ ಸೆಂಟಿನಲ್ ನೋಡ್ ಬೈಯಾಪ್ಸಿ ತಂತ್ರದಿಂದ ಸ್ತನವನ್ನೇ ತೆಗೆದು ಆಂಕೊಪ್ಲಾಸ್ಟಿಯಾ ತಂತ್ರಜ್ಞಾನದಿಂದ ಮತ್ತೆ ಸ್ತನದ ಮರುಜೋಡಣೆಯನ್ನೂ ಮಾಡಬಹುದು. ಇಲ್ಲದಿದ್ದರೆ ರೋಗಿಗೆ ಕೀಮೊಥೆರಪಿ, ರೇಡಿಯೋಥೆರಪಿ, ಹಾರ್ಮೋನ್ ಥೆರಪಿ ಹಾಗು ಟಾರ್ಗೆಟ್ ಥೆರಪಿಯಂತಹ ಚಿಕಿತ್ಸೆಗೆ ಒಳಪಡಿಸಬಹುದು.

ಪಿತ್ತಜನಕಾಂಗ(ಯಕೃತ್) ಕ್ಯಾನ್ಸರ್
ಸಾಮಾನ್ಯವಾಗಿ ಇದು ಯಾವುದೇ ಲಕ್ಷಣಗಳನ್ನು ಹೊರಹಾಕದೇ ಒಳಗೇ ಬೆಳೆದು ಜೀವಕ್ಕೆ ಮಾರಕವಾಗಬಹುದು. ಆದ್ದರಿಂದ ಸಿರೋಸಿಸ್‌ನಿಂದ ಪೀಡಿತರು ಜಾಗೃತರಾಗಿ ಅಗತ್ಯ ಪರೀಕ್ಷೆಗೆ ಒಳಪಡುವುದು ಅತೀಮುಖ್ಯ. ಈ ಅಂಗ ಶರೀರದಲ್ಲಿನ ಕೊಬ್ಬು ಕರಗಿಸಲು ಹಾಗೂ ಚಯಾಪಚಯಕ್ರಿಯೆ ಸುಗಮಗೊಳಿಸಲು ಸಹಕರಿಸುತ್ತದೆ. ಪಿತ್ತಜನಕಾಂಗದಲ್ಲಿ ಹುಟ್ಟುವ ಒಂದು ವಿಧವಾದ ಗಡ್ಡೆಯೇ  ಪಿತ್ತಜನಕಾಂಗದ ಕ್ಯಾನ್ಸರ್.

ಕಾರಣ: ಅತೀ ಮದ್ಯಪಾನ, ವೈರಲ್ ಹೆಪೆಟೈಟಿಸ್, ಹೆಪೆಟೈಟಿಸ್-ಬಿ, ಹೆಪೆಟೈಟಿಸ್-ಸಿ ವೈರಸ್‌ಗಳಂಥ ಗಂಭೀರ ಸೋಂಕುಗಳಿಂದ  ಪಿತ್ತಜನಕಾಂಗದ ಕ್ಯಾನ್ಸರ್‌ನ ಅಪಾಯ ಹೆಚ್ಚುವ ಸಾಧ್ಯತೆ ಇರುತ್ತದೆ. ಆದರೆ ಈ ಸೋಂಕಿನಿಂದ ಎಲ್ಲರೂ ಕ್ಯಾನ್ಸರ್‌ಗೆ ಒಳಗಾಗುತ್ತಾರೆಂದು ಹಾಗೂ ಇಂಥದ್ದೇ ಕಾರಣದಿಂದ ಕ್ಯಾನ್ಸರ್ ಬರುತ್ತದೆಂದು ಹೇಳಲು ಸಾಧ್ಯವಿಲ್ಲ.

ಲಕ್ಷಣ: ಹಸಿವು-ತೂಕ ಕಡಿಮೆಯಾಗುವುದು, ಹೊಟ್ಟೆ ಭಾಗದಲ್ಲಿ ನೋವು, ಜ್ವರ, ಕಾಮಾಲೆ ರೋಗ ಇತ್ಯಾದಿಗಳಿರಬಹುದು ಅಥವಾ ಯಾವುದೇ ಲಕ್ಷಣಗಳು ಕಾಣದೆಯೂ ಇರಬಹುದು. ಸಾಮಾನ್ಯವಾಗಿ ಅಲ್ಟ್ರಾಸೌಂಡ್ ಸ್ಕ್ಯಾನ್, ಸಿಟಿ ಸ್ಕ್ಯಾನ್, ಎಂಆರ್‌ಐ ಗಳಿಂದ ಕ್ಯಾನ್ಸರ್‌ಅನ್ನು ಪತ್ತೆಹಚ್ಚಬಹುದು. ಚಿಕಿತ್ಸೆ-ಗಡ್ಡೆಯನ್ನು ಸಾನ್ಯವಾಗಿ ಪಿತ್ತಜನಕಾಂಗ ಅಂಗಾಂಗಗಳೊಂದಿಗೆ ತೆಗೆದುಹಾಕುವುದು ಅತ್ಯುತ್ತಮ, ಆದರೆ ಗಡ್ಡೆ ಪಿತ್ತಜನಕಾಂಗಕ್ಕೆ ರಕ್ತಪೂರೈಸುವ ರಕ್ತನಾಳಗಳಲ್ಲಿ ಹರಡಿದ್ದರೆ ಇದು ಸಾಧ್ಯವಿಲ್ಲ. ಇದಲ್ಲದೇ ರೇಡಿಯೋ ಫ್ರಿಕ್ವೆನ್ಸಿ ವೇವ್ ನ ತಾಪದಿಂದಲೂ ಗಡ್ಡೆಯನ್ನು ಕತ್ತರಿಸಿ ತೆಗೆಯಬಹುದು. ಪಿತ್ತಜನಕಾಂಗದ ಆರೋಗ್ಯಕ್ಕೆ ಸಮತೋಲಿತ ಆಹಾರ ಸೇವನೆ, ನಿತ್ಯ ವ್ಯಾಯಾಮ, ಮದ್ಯಪಾನ, ಧೂಮಪಾನ ತ್ಯಜಿಸುವುದು ಅತೀ ಮುಖ್ಯ.

ಪ್ರಾಸ್ಟೇಟ್ ಕ್ಯಾನ್ಸರ್
ಪುರುಷರಲ್ಲಿ ವಯಸ್ಸಾಗುತ್ತಿದ್ದಂತೆ ಬದಲಾದ ಜೀವನಶೈಲಿ, ಆನುವಂಶಿಕ ಕಾರಣದಿಂದ ಇಂದು ಭಾರತದಲ್ಲಿ 15 ಮಂದಿಯಲ್ಲಿ ಒಬ್ಬರಿಗೆ ಪ್ರಾಸ್ಟೇಟ್ (ಮೂತ್ರಕೋಶದ ಕಂಠ) ಕ್ಯಾನ್ಸರ್ ಕಾಣಿಸುಕೊಳ್ಳುತ್ತಿರುವುದು ಆತಂಕಕಾರಿ ವಿಷಯ. ಪ್ರಾಸ್ಟೇಟ್ ಪುರುಷರಿಗೆ ಮುಖ್ಯವಾದ ಗ್ರಂಥಿಯಾಗಿದೆ. ಇದರಿಂದ ಉತ್ಪತ್ತಿಯಾಗುವ ದ್ರವಕ್ಕೆ ವೀರ್ಯಾಣುಗಳನ್ನು ಸಂರಕ್ಷಿಸುವ ಗುಣವಿದೆ.

ವ್ಯಾಯಾಮವಿಲ್ಲದ ಜೀವನ, ಆನುವಂಶಿಕವಾಗಿ ಹಾಗೂ ಅತಿಯಾದ ಮಾಂಸಾಹಾರ ಸೇವನೆಯಿಂದ ಪ್ರಾಸ್ಟೇಟ್ ಕ್ಯಾನ್ಸರ್ ಬರುವ ಸಾಧ್ಯತೆಗಳು ಹೆಚ್ಚು. ಲಕ್ಷಣಗಳು- ಪದೇ ಪದೇ ಮೂತ್ರ ವಿಸರ್ಜನೆ, ಮೂತ್ರದಲ್ಲಿ ರಕ್ತ ಕಾಣಿಸಿಕೊಳ್ಳು ವುದು ಹಾಗೂ ಕಾಲುಗಳಲ್ಲಿ ನೋವು ಬರಬಹುದು. ಪ್ರಾಸ್ಟೇಟ್ ಕ್ಯಾನ್ಸರ್ ತಡೆಗಟ್ಟಲು-ಆಹಾರದಲ್ಲಿ ಅರಿಶಿಣದ ಬಳಕೆ, ವ್ಯಾಯಾಮ, ಮಾಂಸಾಹಾರ ಕಡಿಮೆ ಸೇವಿಸುವುದು ಹಾಗೂ ಧೂಮಪಾನ ತ್ಯಜಿಸಬೇಕು.

ಕ್ಯಾನ್ಸರ್‌ಗೆ ತುತ್ತಾದ ಅಂಗಸಂರಕ್ಷಣೆ: ಈ ಮೊದಲು ಲಭ್ಯವಿದ್ದ ತಂತ್ರಜ್ಞಾನದ ಮೂಲಕ ಕ್ಯಾನ್ಸರ್‌ನ ಭಾಗವನ್ನು ತಲುಪುವುದು ಕಷ್ಟಸಾಧ್ಯವಾಗಿತ್ತು ಆದರೆ ರೇಡಿಯೋ ಥೆರಪಿಯಂತಹ ಚಿಕಿತ್ಸೆಗಳು ಕ್ಯಾನ್ಸರ್ ಪೀಡಿತ ಪ್ರದೇಶವನ್ನಷ್ಟೇ ಚಿಕಿತ್ಸೆಗೆ ಒಳಪಡಿಸುತ್ತವೆ. ಹಾಗಾಗಿ ಕ್ಯಾನ್ಸರ್ ಪೀಡಿತ ಪ್ರದೇಶದ ಸುತ್ತಮುತ್ತ ಹೆಚ್ಚು ಹಾನಿಯಾಗದು.

ಕ್ಯಾನ್ಸರ್‌ ಅನ್ನು ಆರಂಭಿಕ ಹಂತದಲ್ಲಿಯೇ ಗುರುತಿಸಿದರೆ ಗುಣಪಡಿಸಲು ಸುಲಭ ಎನ್ನುವುದು ಎಲ್ಲರಿಗೂ ಅರಿವಾಗಬೇಕು. ಮಹಿಳೆಯರು ತಮ್ಮ ಕುಟುಂಬದಲ್ಲಿ ಯಾರಾದರೂ ಕ್ಯಾನ್ಸರ್‌ನಿಂದ ಬಳಲಿರುವ ಹಿನ್ನೆಲೆ ಇದ್ದಲ್ಲಿ 10ರಲ್ಲಿ ಒಬ್ಬರಿಗಾದರೂ ಈ ಕ್ಯಾನ್ಸರ್‌ ಕಾಡುವ ಸಾಧ್ಯತೆ ಇದ್ದೇ ಇರುತ್ತದೆ. ಎಲ್ಲ ಮಹಿಳೆಯರು ನಿಯಮಿತವಾಗಿ ತಜ್ಞವೈದ್ಯರಿಂದ ತಪಾಸಣೆಗೆ ಒಳಗಾಗಬೇಕು. ಇನ್ನು 50 ವರ್ಷ ದಾಟಿದ ಪ್ರತಿಯೊಬ್ಬ ಪುರುಷರು ತಜ್ಞರಿಂದ ಪ್ರಾಸ್ಟೇಟ್ ಕ್ಯಾನ್ಸರ್‌ನ ಪರೀಕ್ಷೆ ಮಾಡಿಸಿಕೊಳ್ಳಬೇಕು.

ಸಮತೋಲಿತ ಆಹಾರ ಸೇವನೆ, ನಿತ್ಯ ವ್ಯಾಯಾಮ, ತಂಬಾಕು-ಮದ್ಯಪಾನ-ಧೂಮಪಾನ ತ್ಯಜಿಸುವುದರಿಂದ ಕ್ಯಾನ್ಸರ್‌ನಿಂದ ಬಹುಪಾಲು ದೂರವಿರಬಹುದು. ಇಂದಿನ ರೇಡಿಯೋ ಥೆರಪಿ ಹಾಗೂ ಲೇಸರ್ ಚಿಕಿತ್ಸೆಯಿಂದ ಕಡಿಮೆ ಸಮಯದಲ್ಲಿ, ಹೆಚ್ಚಿನ ಆರೈಕೆಯೂ ಇಲ್ಲದೇ ರೋಗಿ ಗುಣಮುಖರಾಗಬಹುದು. ಒಟ್ಟಾರೆ ಸಮಯೋಚಿತ ಅರಿವಿನಿಂದ ಕ್ಯಾನ್ಸರ್‌ಗೆ ಚಿಕಿತ್ಸೆ ಸಾಧ್ಯ ಎನ್ನುವುದೇ ಸಂತಸದ ಸಂಗತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT