ನನ್ನ ಜೊತೆ ಕೆಲಸ ಮಾಡುವ ನಾವು ನಾಲ್ಕು ಜನ ಸಹೋದ್ಯೋಗಿ ಸ್ನೇಹಿತೆಯರು ಮಧ್ಯಾಹ್ನದ ಊಟ ಜೊತೆಗೆ ಮಾಡುವಾಗ ಆ ಹತ್ತು ನಿಮಿಷ ಮನೆ ಸಂಸಾರ ಮಕ್ಕಳ ಬಗ್ಗೆ ಚರ್ಚೆ ನಡೆದಿರುತ್ತದೆ. ಅವತ್ತೊಂದು ದಿನ ನಮ್ಮಲ್ಲೇ ಒಬ್ಬರಾದ ನಮ್ಮ ಸ್ನೇಹಿತೆ ತಮ್ಮ ಯಜಮಾನರ ಹಿಮೊಗ್ಲೋಬಿನ್ ಸಂಖ್ಯೆ ದಿನದಿಂದ ದಿನಕ್ಕೆ ಇಳಿಯುತ್ತಿರುವುದರ ಬಗ್ಗೆ ಆತಂಕ ವ್ಯಕ್ತ ಪಡಿಸಿದರು. ನಾವೆಲ್ಲ ಸಾಮಾನ್ಯವಾಗಿ ಹೇಳುವಂತೆ ಏನೇನೋ ತಲೆಗೊಂದರಂತೆ ಸಲಹೆ ನೀಡಿದೆವು.
ಆದರೆ ಮರುದಿನ ಅಂದು ಡಿಸೆಂಬರ್ 2 ನೇ ತಾರೀಖು 2015ರ ಬೆಳಿಗ್ಗೆ ಅವರು ಬಂದೊಡನೆ ಹೇಳಿದ್ದು ಕೇಳಿ ಅರೆ ಕ್ಷಣ ಆತಂಕವಾಯಿತು. ಅವರ ಯಜಮಾನರ ಸ್ಕ್ಯಾನಿಂಗ್ ಮಾಡಿಸಲಾಗಿ ಆ ರಿಪೋರ್ಟ್ಗಳನ್ನು ಅವರ ಮಗಳು ಓದುತ್ತಿರುವ ಹುಬ್ಬಳ್ಳಿ ಧಾರವಾಡದ ಪ್ರತಿಷ್ಠಿತ ಆಸ್ಪತ್ರೆಗೆ ಮಿಂಚಂಚೆ ಅಂದರೆ ಇಂಗ್ಲೀಷಿನಲ್ಲಿ ಇ- ಮೇಲ್ ಮೂಲಕ ಕಳಿಸಿದರೆ ಅಲ್ಲಿನ ವೈದ್ಯರು ತಕ್ಷಣ ಬಂದು ಭೇಟಿಯಾಗಲು ಹೇಳಿದರು. ಮರುದಿನವೇ ಹೋದಾಗ ಗೊತ್ತಾಗಿದ್ದದ್ದು ಅವರಿಗೆ ಕರುಳಿನ ಕ್ಯಾನ್ಸರ್ ಎರಡನೇ ಹಂತದಲ್ಲಿದೆ ಅಂತ.
ನಮಗೆಲ್ಲ ಭಯವೆನಿಸಿದರೂ ಅವರ ಮುಂದೆ ತೋರ್ಪಡಿಸಲಿಲ್ಲ. ಮುಂದೆ 11 ನೇ ತಾರೀಖಿನವರೆಗೂ ಅವರಿಗೆ ಹಿಮೋಗ್ಲೋಬಿನ್ ಸಂಖ್ಯೆ ಏರಿಸಲು ರಕ್ತ ಕೊಡಲಾಗಿ ಆಪರೇಷನ್ ಮಾಡಿದರು. ಅಲ್ಲಿ ಎರಡು ವಾರಗಳ ವರೆಗೆ ಇದ್ದು ಮುಂದೆ ಇಲ್ಲಿ ಬಂದರು. ಈಗ ಇಬ್ಬರೂ ಸರ್ಕಾರಿ ಸೇವೆಯಲ್ಲಿರುವುದರಿಂದ ಫೆಬ್ರುವರಿಯಲ್ಲಿ ಸೇವೆಗೆ ಹಾಜರಾದರು. ಒಂದು ತಿಂಗಳಿನಲ್ಲಿ ಅವರ ಜೀವನದಲ್ಲಿ ಏನೆಲ್ಲ ನಡೆದು ಹೋಯಿತು. ಎರಡು ವರ್ಷಗಳ ವರೆಗೆ ವೈದ್ಯರಲ್ಲಿಗೆ ಹೋಗಿ ಪರೀಕ್ಷೆ ಮಾಡಿಸಿಕೊಳ್ಳುತ್ತಿರಲೇಬೇಕು ಎಂದು ವೈದ್ಯರು ಸಲಹೆ ಮಾಡಿದ್ದಾರೆ.
ಕ್ಯಾನ್ಸರ್ ಹೆಸರಿನಿಂದಲೇ ಭಯಭೀತರಾಗಿದ್ದ ನಮಗೆ ಈಗಿನ ವೈದ್ಯಕೀಯ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿಯನ್ನು ಕಂಡು ಆಶ್ಚರ್ಯವೆನಿಸಿತು. ಕ್ಯಾನ್ಸರ್ನಂತಹ ಮಹಾಮಾರಿ ರೋಗವನ್ನು ಗೆದ್ದು ಬಂದ ನಮ್ಮ ಸ್ನೇಹಿತೆಯ ಯಜಮಾನರಿಗೂ ಆ ಸಮಯದಲ್ಲಿ ಎಲ್ಲರಿಗಿಂತಲೂ ಹೆಚ್ಚಿನ ಧೈರ್ಯ ತೋರಿಸಿ ಮಕ್ಕಳು ಬಂಧುಗಳು ಎಲ್ಲರನ್ನು ವಿಶೇವಾಗಿ ಅವರ ಯಜಮಾನರನ್ನು ಸಂಭಾಳಿಸಿದ ನಮ್ಮ ಸ್ನೇಹಿತೆಗೂ ಈ ಮೂಲಕ ನನ್ನ ಅಭಿನಂದನೆಗಳು.
ಅವರ ಅನುಭವ ಕಥನ ಕೇಳಿದಾಗ ಚಿಕಿತ್ಸೆ ಸಮಯದಲ್ಲಿ ಚಿಕಿತ್ಸೆ ವೆಚ್ಚ ಭರಿಸಲು ಆರಂಕಿಯಷ್ಟು ಹಣ ಮುಖ್ಯವಾಗಿ ಬೇಕು. ಅದಲ್ಲದೇ ಧೈರ್ಯ ಸಂಯಮ ತೋರಿದರೆ ಹಾಗೂ ವೈದ್ಯರ ಸಲಹೆ ಮೇರೆಗೆ ನಡೆದುಕೊಂಡರೆ ಕ್ಯಾನ್ಸರನ್ನು ಮೆಟ್ಟಿ ನಿಲ್ಲಬಹುದು ಎಂದು ಅನಿಸಿತು. ಒಂದಂತೂ ಸತ್ಯ, ಮೊದಲಿನಂತೆ ಕ್ಯಾನ್ಸರ್ ಮಹಾಮಾರಿ ರೋಗವಲ್ಲ. ಅದನ್ನು ಗುಣಪಡಿಸಲು ಸಾಕಷ್ಟು ಚಿಕಿತ್ಸಾ ಕ್ರಮಗಳಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.