ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇರುಗಳಿಗೆ ನೀರು ಹನಿಸಿ

Last Updated 25 ಏಪ್ರಿಲ್ 2016, 19:46 IST
ಅಕ್ಷರ ಗಾತ್ರ

ದಕ್ಷಿಣ ಭಾರತದ ಕಲೆ, ಸಂಸ್ಕೃತಿ, ಪರಂಪರೆಯ ಮಾಹಿತಿಗಳನ್ನು ಕಲೆ ಹಾಕುವ, ದಾಖಲಿಸುವ ಹಾಗೂ ಅವನ್ನು ಜನರ ಹತ್ತಿರ ಕೊಂಡೊಯ್ಯುವ ಕೆಲಸ ಮಾಡುತ್ತಿದೆ ದಕ್ಷಿಣ ವಿಭಾಗದ ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರ.

ಸಂಶೋಧನೆ, ಅಧ್ಯಯನಗಳಿಗೆ ಅವಕಾಶ ನೀಡುವುದರೊಂದಿಗೆ ಮುಂದಿನ ಪೀಳಿಗೆಗೆ ಮಹತ್ವದ ಮಾಹಿತಿಗಳನ್ನು ಕೊಡುಗೆ ನೀಡುವ ಕಾರ್ಯ ನಡೆಯುತ್ತಿದೆ. ನಮ್ಮ ಸಂಸ್ಕೃತಿಯ ಬೇರುಗಳಿಗೆ ನೀರೆರೆಯುವ ಕೆಲಸ  ಸದ್ದಿಲ್ಲದೇ ಸಾಗುತ್ತಿದೆ.
 

ಮಾನವ ಕುಲದ ಬೇರುಗಳಿರುವುದು ಇತಿಹಾಸದಲ್ಲಿ, ಕಲೆ–ಸಂಸ್ಕೃತಿಗಳ ನೆಲೆಯಲ್ಲಿ. ಆದರೆ ಕಾಲದ ಕೈಯಲ್ಲಿ ಉಳಿವುದೆಷ್ಟೋ, ಅಳಿವುದೆಷ್ಟೋ... ಶತಶತಮಾನಗಳ ಪರಂಪರೆ, ಪದ್ಧತಿಗಳು, ಆಚರಣೆಗಳು, ಜನಾಂಗಗಳು, ಅವರ ಜೀವನಶೈಲಿ, ಕಲಾ ಪ್ರಕಾರಗಳು, ಇವೆಲ್ಲದರ ಬಗ್ಗೆ ಮುಂದಿನ ಪೀಳಿಗೆ ಮಾತನಾಡಲು ಸಾಧ್ಯವಿದೆಯೇ?

ಇಂಥದ್ದೇ ಒಂದು ಪ್ರಶ್ನೆಗೆ ಉತ್ತರ ನೀಡುವ ಯತ್ನವಾಗಿ ಕೇಂದ್ರ ಸಾಂಸ್ಕೃತಿಕ ಸಚಿವಾಲಯದ ಸ್ವಾಯತ್ತ ಸಂಸ್ಥೆಯಾಗಿ ರೂಪುಗೊಂಡಿದ್ದು ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರ.

1987ರಲ್ಲಿ ದೆಹಲಿಯಲ್ಲಿ ಆರಂಭವಾದ ಈ ಕೇಂದ್ರದ ದಕ್ಷಿಣ ವಿಭಾಗದ ಕಚೇರಿ ಬೆಂಗಳೂರಿನಲ್ಲಿ ಆರಂಭವಾದದ್ದು 2001ರಲ್ಲಿ. 2007ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯ ಕೆಂಗುಂಟೆಯಲ್ಲಿ ಇಂದಿರಾಗಾಂಧಿ ದಕ್ಷಿಣ ವಲಯ ಕಲಾ ಕೇಂದ್ರ ಅಧೀಕೃತವಾಗಿ ಕೆಲಸ ಆರಂಭಿಸಿತು. ದಕ್ಷಿಣ ಭಾರತದ ಸಂಸ್ಕೃತಿ, ಕಲಾ ಪ್ರಕಾರಗಳನ್ನು ಗುರುತಿಸುವ, ದಾಖಲಿಸುವ, ಪೋಷಿಸುವ ಆ ಮೂಲಕ ಜೀವಂತವಾಗಿರಿಸುವ ಪ್ರಯತ್ನ ಇಲ್ಲಿ ಸಾಗುತ್ತಿದೆ.

‘ಎಷ್ಟೋ ಕಲಾ ಪ್ರಕಾರಗಳು ದಾಖಲಿತಗೊಳ್ಳದ ಕಾರಣಕ್ಕೇ ನಶಿಸಿವೆ. ಇನ್ನೂ ಹಲವು ಅವನತಿ ಹಾದಿ ಹಿಡಿಯುತ್ತಿವೆ. ಹೀಗೇ ಮುಂದುವರೆದರೆ ಮುಂದಿನ ಜನಾಂಗಕ್ಕೆ ನಾವು ತಿಳಿಸಲೇನೂ ಉಳಿಯುವುದಿಲ್ಲ.

ಇದೇ ನಿಟ್ಟಿನಿಂದ ಪ್ರಾಚೀನ ಕಲೆ, ಸಂಸ್ಕೃತಿಯ ಸಂಶೋಧನೆ, ದಾಖಲೀಕರಣ ಹಾಗೂ ಪ್ರಸರಣ ಕೆಲಸ ಇಲ್ಲಿ ನಡೆಯುತ್ತಿದೆ. ಲಿಖಿತ ಮಾತ್ರವಲ್ಲ, ವಿಡಿಯೊ– ಆಡಿಯೊ ರೂಪದಲ್ಲೂ ಮಾಹಿತಿಗಳನ್ನು ಕಾಪಿಡಲಾಗುತ್ತಿದೆ’ ಎಂದು ಸಂಸ್ಥೆಯ ಹಲವು ಕಾರ್ಯಗಳ ಕುರಿತು ಮಾತನಾಡಿದರು ಸಂಸ್ಥೆ ಕಾರ್ಯಕ್ರಮ ಅಧಿಕಾರಿ ಕೆ.ಎಂ. ಚಂದ್ರಶೇಖರ್.

ಸಂಶೋಧನಾ ಮೂಲ: ಕಲೆ ಹಾಗೂ ಸಂಸ್ಕೃತಿ ಸಂಬಂಧಿ ಸಂಶೋಧನೆಗಳ ಕಾರ್ಯಗಳಿಗೆ ಇಲ್ಲಿ ಪ್ರಾಮುಖ್ಯ. ಪ್ರತಿ ಪ್ರದೇಶ, ಜನಾಂಗವೂ ತನ್ನದೇ ಏಕತೆ, ಸಾಮಾಜಿಕ ರಚನೆಗಳನ್ನು ಹೊಂದಿರುತ್ತದೆ. ಅವುಗಳ ನೆಲೆಗಟ್ಟಿನಲ್ಲೇ ಅಧ್ಯಯನ ಮಾಡಿದ ಹಲವು ಸಂಶೋಧನೆಗಳು ಇಲ್ಲಿವೆ.

ದಕ್ಷಿಣ ಭಾರತದ ವಾಸ್ತು ಶಿಲ್ಪ, ಶಿಲ್ಪ ಕಲೆ, ಚಿತ್ರಕಲೆಯಿಂದಿಡಿದು ಸಂಸ್ಕೃತಿ, ಛಾಯಾಚಿತ್ರಕಲೆ, ಸಂಗೀತ, ನೃತ್ಯ, ಉತ್ಸವ, ಹಬ್ಬಗಳು ಹಾಗೂ ಜೀವನ ಶೈಲಿ ಸಂಬಂಧಿ ಸಂಶೋಧನೆಗಳು ಇಲ್ಲಿ ಸಾಕಷ್ಟಿವೆ.

‘ಮೇಲುಕೋಟೆಯಲ್ಲಿ ದೇವಸ್ಥಾನ ಸಂಪ್ರದಾಯ ಹಾಗೂ ಹಬ್ಬಗಳು’, ‘ಶ್ರೀವೈಷ್ಣವ– ದಕ್ಷಿಣ ಭಾರತದ ದೇವಸ್ಥಾನ ಸಂಪ್ರದಾಯ’, ‘ಶ್ರವಣಬೆಳಗೊಳದ ಮಹಾಮಸ್ತಕಾಭಿಷೇಕ ಆಚರಣೆ ಹಾಗೂ ಸಂಪ್ರದಾಯಗಳು’, ‘ದಕ್ಷಿಣ ಭಾರತದ ಭಿತ್ತಿ ಚಿತ್ರಕಲೆಗಳು’, ‘ಗಂಜೀಫ ಕಾರ್ಡ್‌ಗಳು ಹಾಗೂ ರಾಗಮಾಲಾ ಚಿತ್ರಕಲೆಗಳ ಡಿಜಿಟಲ್ ದಾಖಲೀಕರಣ’,

‘ರಾಸಧ್ವನಿ ಔಚಿತ್ಯ ವಕ್ರೋಟಿ ಸಿದ್ಧಾಂತ ಹಾಗೂ ಕಲಾನುಭವ’, ‘10–13ನೇ ಶತಮಾನಕ್ಕೆ ಪೂರಕವಾಗಿ ದಕ್ಷಿಣ ಭಾರತದಲ್ಲಿನ ಸಾಂಸ್ಕೃತಿಕ ಸಂಗಮ’,  ‘ದಕ್ಷಿಣ ಭಾರತದ ದೇವಾಲಯ ವಾಸ್ತುಶಿಲ್ಪ ಕುರಿತ ಪ್ರಬಂಧಗಳು’, ‘ನಾಡಕಲಸಿಯ ರೇಖಾ ಚಿತ್ರಗಳ ದಾಖಲೀಕರಣ’, ‘ಅವಧಾನ ಕಲೆಯ ಗ್ರಂಥ, ಯಕ್ಷಗಾನ ಕುರಿತ ಉಪನ್ಯಾಸ’, ‘ಪಂಡರಿಕ ವಿಠ್ಠಲೋತ್ಸವ, ವಿದ್ವಾಂಸರಿಂದ ಉಪನ್ಯಾಸಗಳು’, ‘ನಾಗಪಟ್ಟಿನಂನ ಮೀನುಗಾರ ಸಮುದಾಯದ ಅಡಿಪಟ್ಟಿ ನಯನ್ಮಾರ್ ಆಚರಣೆಗಳು’ ಹೀಗೆ ಸಂಶೋಧನೆಗಳ  ಪಟ್ಟಿ ಬೆಳೆಯುತ್ತಾ ಹೋಗುತ್ತದೆ.

ಸಂಸ್ಕೃತಿ ಉಳಿಸುವ ಪ್ರಯತ್ನದಲ್ಲಿ...
ವಿಭಿನ್ನ ವಿಭಾಗಗಳೊಂದಿಗೆ ಇಲ್ಲಿ ಮಾಹಿತಿಗಳನ್ನು ದಾಖಲಿಸುವ ಕೆಲಸ ನಡೆಯುತ್ತಿದೆ. ಕಲಾ ನಿಧಿ ವಿಭಾಗದಲ್ಲಿ– ಗ್ರಂಥಾಲಯವಿದೆ. ಸಂಗೀತ, ನೃತ್ಯ, ಸಾಹಿತ್ಯ, ಜೀವನಚರಿತ್ರೆ, ಭಾರತ ಇತಿಹಾಸ, ಕಲೆ, ಶಿಲ್ಪಕಲೆ, ಧರ್ಮ, ವೇದಾಂತ ಕುರಿತ ಸುಮಾರು 14,000 ಪುಸ್ತಕಗಳು ಇಲ್ಲಿವೆ. 4600 ಪುಸ್ತಕಗಳು ಇಂಗ್ಲಿಷ್ ಭಾಷೆಯಲ್ಲಿದ್ದರೆ, 3000 ಕನ್ನಡ ಮತ್ತು ದಕ್ಷಿಣ ಭಾರತದ ಇತರ ಭಾಷೆಗಳ ಪುಸ್ತಕಗಳಾಗಿವೆ. ಉಲ್ಲೇಖನೀಯ ಸಂಗ್ರಹಗಳು, ನಿಘಂಟುಗಳು, ಎನ್‌ಸೈಕ್ಲೋಪೀಡಿಯಾಗಳು, ಗ್ರಂಥಗಳು, ಸಂಶೋಧನೆಗಳು ಹಾಗೂ ಪ್ರಕಟಣೆಗಳು ಇಲ್ಲಿ ಲಭ್ಯವಿವೆ.

ಕಲಾಕೋಶ– ಸಂಸ್ಕೃತಿ ಹಾಗೂ ಕಲೆಯ ಇದುವರೆಗಿನ ಸಂಶೋಧನೆಗಳ ಪ್ರಕಟಣೆಗಳಿಗೆ ಸಂಬಂಧಿಸಿದ ಭಾಗ. ಕಲಾದರ್ಶನ ವಿಭಾಗದಲ್ಲಿ– ಸಂಶೋಧನೆ ಹಾಗೂ ಅಧ್ಯಯನಗಳ ಪ್ರಸ್ತುತಪಡಿಸುವಿಕೆ, ಚಿತ್ರಕಲಾ ಪ್ರದರ್ಶನಗಳನ್ನು ಕ್ರೋಡೀಕರಿಸುವ ಕೆಲಸ ನಡೆಯುತ್ತದೆ.

ಜನಪದ ಸಂಪದ ವಿಭಾಗದಲ್ಲಿ–ಜೀವನಶೈಲಿ ಸಂಬಂಧಿತ ಅಧ್ಯಯನಗಳನ್ನು ದಾಖಲೀಕರಿಸಲಾಗಿದೆ. ಸೂತ್ರಧಾರಾ– ಎಲ್ಲಾ ಕೆಲಸಗಳ ಆಡಳಿತ ವಿಭಾಗ. ಎಲ್ಲಾ ಚಟುವಟಿಕೆಗಳಿಗೆ ಬೆಂಬಲಿಸುವ ತಂಡ. ಬೆಂಗಳೂರಿನ ಕೇಂದ್ರದಲ್ಲಿ ರಘುಕುಮಾರ್, ವಲ್ಸಕುಮಾರ್, ಪ್ರಕಾಶ್ ವಾಲಿ, ವೆಂಕಟೇಶ್ ದೇಶಪಾಂಡೆ, ಕೆ.ಎಂ. ಚಂದ್ರಶೇಖರ್ ಅವರು ದಾಖಲೀಕರಣ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.

ಮಾಹಿತಿಗಿಲ್ಲಿ ಡಿಜಿಟಲ್ ರೂಪ: ಕಂಪ್ಯೂಟರ್‌ ತಂತ್ರಜ್ಞಾನ ಬಳಸಿ ಮಾಹಿತಿ ಕಲೆ ಹಾಕಿ ಅವುಗಳಿಗೆ ಡಿಜಿಟಲ್ ರೂಪ ನೀಡಲಾಗುತ್ತಿದೆ. ತಂತ್ರಜ್ಞಾನ ಬಳಸಿಕೊಂಡು ಪರಿಷ್ಕೃತಗೊಳ್ಳಲಾಗುತ್ತಿದೆ. ಇದಕ್ಕೆ ಉದಾಹರಣೆ ಸಂಸ್ಥೆಯಲ್ಲಿನ ರೆಪ್ರೋಗ್ರಫಿ ವಿಭಾಗ. ಲಭ್ಯವಾದ ತಾಳೆಗರಿಗಳನ್ನು  ಸ್ಕ್ಯಾನ್ ಮಾಡಿ ಅದನ್ನು ರೆಪ್ರೋಗ್ರಫಿ ವಿಭಾಗದಲ್ಲಿ ಇಡಲಾಗಿದೆ.

13,500 ಮೈಕ್ರೊಫಿಲ್ಮ್‌ಗಳು ಸದ್ಯಕ್ಕೆ ಲಭ್ಯ. ದೇಶಾದ್ಯಂತ ಸಂಗ್ರಹಿಸಿರುವ ಅಪರೂಪದ ಹಾಗೂ ಪ್ರಮುಖ ಮೈಕ್ರೊಫಿಲ್ಮ್‌ಗಳ ಸಂಗ್ರಹವಿಲ್ಲಿದೆ. ಸ್ವಾಮಿ ವಿವೇಕಾನಂದರ ನುಡಿಗಳು, ಅಲಂಕಾರಗಳು, ಉಪನಿಷತ್ತುಗಳು, ಕಾವ್ಯ, ಕೋಶ, ಗಣಿತ, ಧರ್ಮಶಾಸ್ತ್ರ, ಜ್ಯೋತಿಷ, ಪುರಾಣೇತಿಹಾಸ–ರಾಮಾಯಣ, ಪುರಾಣ ಇತಿಹಾಸ ಮಹಾಭಾರತ, ಗೀತಾ ಗೋವಿಂದ, ಜ್ಯೋತಿಷಶಾಸ್ತ್ರ, ತಂತ್ರ, ಮಂತ್ರ, ಸಂಗೀತ, ನೃತ್ಯ, ನಿರುಕ್ತ, ಕಲ್ಪಸೂತ್ರ, ನ್ಯಾಯ, ಪುರಾಣ, ಕಥಾ, ಮೀಮಾಂಸೆ, ನಾಟ್ಯಶಾಸ್ತ್ರ, ಆಯುರ್ವೇದ, ಉಪನಿಷತ್ತು, ವೇದಾಂತ, ವೇದ, ಜೈನ ಸಾಹಿತ್ಯ ಮುಂತಾದುವಕ್ಕೆ ಸಂಬಂಧಪಟ್ಟ ಮೈಕ್ರೋ ಫಿಲ್ಮ್‌ಗಳಿವೆ. 

ಇತ್ತೀಚೆಗೆ ‘ಆಡಿಯೊ ವಿಷುಯಲ್ ಆರ್ಕೈವಲ್’ ವಿಭಾಗ ಕೂಡ ಆರಂಭಗೊಂಡಿದೆ. ಇದರಲ್ಲಿ 2000 ಗಂಟೆಗಳ ಅವಧಿ ರೆಕಾರ್ಡ್‌ ಮಾಡಿದ ಸಂಗೀತ ಕಾರ್ಯಕ್ರಮಗಳು ಹಾಗೂ ಸ್ಲೈಡ್ ಯುನಿಟ್‌ನಲ್ಲಿ 80,000ಕ್ಕೂ ಹೆಚ್ಚು ಸ್ಲೈಡ್‌ಗಳನ್ನು ಸಂಗ್ರಹಿಸಲಾಗಿದೆ. ನೇರ ಪ್ರಸಾರ ಕಾರ್ಯಕ್ರಮಗಳನ್ನು ದಾಖಲಿಸಿಕೊಂಡು ಸಂಗ್ರಹಿಸಿಡಲಾಗಿದೆ.

ಚೆಂಬೈ ವೈದ್ಯನಾಥ ಭಾಗವತರ್, ಎಂ.ಎಸ್.ಸುಬ್ಬುಲಕ್ಷ್ಮಿ, ಡಿ.ಕೆ.ಪಟ್ಟಮ್ಮಲ್, ಕೆ.ವಿ.ನಾರಾಯಣಸ್ವಾಮಿ, ಅಲತೂರು ಸಹೋದರರು, ಸೆಮ್ಮನಗುಂಡಿ ಶ್ರೀನಿವಾಸ ಅಯ್ಯರ್, ಎಂ.ಡಿ.ರಮಾನಾಥನ್ ಹೀಗೆ ಸಾಕಷ್ಟು ಗಣ್ಯರ ಸಂಗೀತ ಕಛೇರಿಗಳ ಸಂಗ್ರಹವಿದೆ. ಆರ್ಕೈವ್‌ನಲ್ಲಿ ಗ್ರಾಮಾಫೋನ್ ರೆಕಾರ್ಡಿಂಗ್ ಕೂಡ ಇದೆ.

1902ರ ಅವಧಿಯ ಹಿಂದೂಸ್ತಾನಿ ಹಾಗೂ ಕರ್ನಾಟಕ ಶಾಸ್ತ್ರಿಯ ಸಂಗೀತವನ್ನು ಇಂದಿಗೂ ಕೇಳುವ ಅವಕಾಶವಾಗಿದೆ. ಗಾಂಧಿ, ಟಾಗೋರ್, ಸುಭಾಷ್ ಚಂದ್ರ ಬೋಸ್ ಸೇರಿದಂತೆ ಹಲವರ ಭಾಷಣಗಳು ಈ ಸಂಗ್ರಹದ ಭಾಗಗಳಾಗಿವೆ.

ಪ್ರಮುಖ ವ್ಯಕ್ತಿಗಳ ಭಾವಚಿತ್ರಗಳನ್ನೂ, ಕ್ಯಾರಿಕೇಚರ್‌ಗಳನ್ನೂ ಸಂಸ್ಥೆಯಲ್ಲಿ ಪ್ರದರ್ಶನಕ್ಕಿಡಲಾಗಿದೆ. ಸಂಶೋಧನಾ ವಿದ್ವಾಂಸರಿಗೆ ಹಾಗೂ ಶೈಕ್ಷಣಿಕವಾಗಿ ಅಧ್ಯಯನ ಕೈಗೊಳ್ಳಲು ಬಯಸುವವರಿಗೆ ಈ ಸಂಸ್ಥೆ ಮೂಲವಾಗಿದೆ.

ಸಂಗ್ರಹ ಮಾಡುವುದಷ್ಟೇ ಅಲ್ಲ, ಜನರಿಗೆ ಇವುಗಳನ್ನು ತಲುಪಿಸಲು ಹಲವು ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ‘ಸಾಕ್ಷ್ಯ ದೃಶ್ಯ’ದಲ್ಲಿ ತಿಂಗಳಿನ ಎರಡನೇ ಹಾಗೂ ನಾಲ್ಕನೇ ಶುಕ್ರವಾರ ಸಾಕ್ಷ್ಯಚಿತ್ರಗಳ ಪ್ರದರ್ಶನವಿರುತ್ತದೆ. ಶಾಲಾ ಮಕ್ಕಳಿಗೆ ವಿಶೇಷ ಪ್ರದರ್ಶನವಿದೆ. ‘ಸಂಸ್ಕೃತಿ ಸ್ಮರಣೆ’ ಕಾರ್ಯಕ್ರಮದಲ್ಲಿ ಮೂರನೇ ಶುಕ್ರವಾರ ವಿವಿಧ ವಿಷಯದ ಕುರಿತು ಉಪನ್ಯಾಸ, ಚರ್ಚೆ, ಸಂವಾದ ಕಾರ್ಯಕ್ರಮಗಳು ನಡೆಯುತ್ತವೆ.

ಕಲಾನುಭವ– ಕಲಾ ಶಿಕ್ಷಣದ ಕುರಿತಾದ್ದು. ಕಾರ್ಯಾಗಾರಗಳ ಮೂಲಕ ಜನರನ್ನು ತಲುಪುವ ಕಾರ್ಯಕ್ರಮ. ‘ಸಂಗೀತ ಸಮಕ್ಷಮ’– ತ್ರೈಮಾಸಿಕ ಸಂಗೀತ ಕಾರ್ಯಕ್ರಮ. ಹೀಗೆ ಪ್ರತಿ ತಿಂಗಳೂ ನಿರಂತರ ಕಾರ್ಯಕ್ರಮಗಳು ನಡೆಯುತ್ತಿವೆ. ಈ ಮೂಲಕ ನಮ್ಮ ಕಲೆ, ಸಂಸ್ಕೃತಿ ಯನ್ನು ಪೋಷಿಸುವ ಕೆಲಸ ಸದ್ದಿಲ್ಲದೆ ನಡೆಯುತ್ತಿದೆ.
ಸಂಸ್ಥೆಯ ಸಂಪರ್ಕಕ್ಕೆ: 080 23212320. 

*
ಕಲೆ, ಸಂಸ್ಕೃತಿಯನ್ನು ದಾಖಲಿಸುವುದಷ್ಟೇ ಅಲ್ಲ, ಅವುಗಳನ್ನು ಜನರಲ್ಲಿ ಬಿತ್ತುವ ಕೆಲಸವೂ ನಡೆಯುತ್ತಿದೆ. ನಶಿಸಿಹೋಗುತ್ತಿರುವ ವಿವಿಧ ಕಲೆಗಳು, ಸಂಪ್ರದಾಯಗಳ ಕುರಿತು  ಉಪನ್ಯಾಸ, ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಜೊತೆಗೆ ಸಾಕ್ಷ್ಯ ಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ.

ಶಾಲಾ ಮಕ್ಕಳಲ್ಲಿ ಇದರ ಪ್ರಾಮುಖ್ಯದ ಕುರಿತು ಅರಿವು ಮೂಡಿಸುವ ಹಲವು ಯೋಜನೆಗಳನ್ನು ಹಾಕಿಕೊಂಡಿದ್ದೇವೆ. ಭಾರತದ ಮೊದಲ ಎಥ್ನೋಗ್ರಫಿಕ್ ಆರ್ಕೈವ್ ಸೃಷ್ಟಿಸುವ ಉದ್ದೇಶದಲ್ಲಿ ಸಂಸ್ಥೆ ಕೆಲಸ ಮುಂದುವರಿಸಿದೆ.

ಸಂಶೋಧಿಸಿ, ದಾಖಲಿಸಿ ಮುಂದಿನ ಪೀಳಿಗೆಗೆ ಮಾಹಿತಿ ಕಣಜವಾಗುವುದು ನಮ್ಮ ಉದ್ದೇಶ. ಸಂಸ್ಕೃತಿ, ಜನಾಂಗಗಳ ವೈಜ್ಞಾನಿಕ ಅಧ್ಯಯನಗಳಿಗೆ ಪ್ರಾಮುಖ್ಯ ನೀಡಲಾಗುತ್ತಿದೆ.
ಡಾ. ದೀಪ್ತಿ ನವರತ್ನ, ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT