ಬೆಂಗಳೂರು: ‘ಬಿಜೆಪಿಯ ಕೆ.ಎಸ್. ಈಶ್ವರಪ್ಪ ಮತ್ತು ಕಾಂಗ್ರೆಸ್ನ ಎಚ್.ಎಂ.ರೇವಣ್ಣ ಅವರು ಅಹಿಂದ ಹೆಸರಿನಲ್ಲಿ ದೊಂಬರಾಟ ಆಡುತ್ತಿದ್ದಾರೆ’ ಎಂದು ಕರ್ನಾಟಕ ಹಿಂದುಳಿದ ದಲಿತ ಹಾಗೂ ಅಲ್ಪಸಂಖ್ಯಾತರ ಜಂಟಿ ಕ್ರಿಯಾ ವೇದಿಕೆಯ ರಾಜ್ಯ ಘಟಕದ ಕೃಷ್ಣಾ ನಾಯಕ್ ಕಿಡಿಕಾರಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಅನೇಕ ರಾಜಕೀಯ ಮುಖಂಡರು ಕಾಲಕಾಲಕ್ಕೆ ತಮ್ಮ ಬೇಳೆ ಬೇಯಿಸಿಕೊಳ್ಳಲು ಅಹಿಂದ ಹೆಸರಿನಲ್ಲಿ ಸಭೆ ಸಮಾರಂಭಗಳನ್ನು ನಡೆಸುವುದರ ಮೂಲಕ ರಾಜ್ಯದ ಜನರನ್ನು ದಿಕ್ಕು ತಪ್ಪಿಸುವ ಕೆಲಸಕ್ಕೆ ಮುಂದಾಗುತ್ತಿದ್ದಾರೆ’ ಎಂದು ದೂರಿದರು. ‘ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಎಂದು ಹೇಳುತ್ತಾ ರಾಯಣ್ಣನ ಹೆಸರನ್ನು ರಾಜಕೀಯಕ್ಕೆ ಎಳೆತಂದು ಜಾತಿ ಬಣ್ಣ ಬಳಿಯುತ್ತ ಅವಮಾನ ಮಾಡಲಾಗುತ್ತಿದೆ’ ಎಂದರು.