ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶಕ್ಕಾಗಿ ತ್ಯಾಗ ಮಾಡಿದವರ ಸ್ಮರಣೆ ಅಗತ್ಯ – ಜಾವಡೇಕರ್

ಸ್ವಾತಂತ್ರ್ಯ ಹೋರಾಟಗಾರ್ತಿ ಚನ್ನಬಸಮ್ಮಗೆ ಸನ್ಮಾನ
Last Updated 28 ಆಗಸ್ಟ್ 2016, 20:13 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷಗಳಾದ ಈ ಸಂದರ್ಭದಲ್ಲಿ ಹಿರಿಯರ ತ್ಯಾಗ ಸ್ಮರಣೆ ಮಾಡುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಆಶಯದಂತೆ ದೇಶದಾದ್ಯಂತ ತಿರಂಗಾ ಯಾತ್ರೆ ಆಯೋಜಿಸಲಾಗಿದೆ. ಅದರ ಭಾಗವಾಗಿ ಸ್ವಾತಂತ್ರ್ಯ ಹೋರಾಟಗಾರರನ್ನು ಸನ್ಮಾನಿಸಲಾಗುತ್ತಿದೆ’ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ ಜಾವಡೇಕರ್‌ ಹೇಳಿದರು.

ನಗರದ ಹಳೆಹುಬ್ಬಳ್ಳಿ ಪ್ರದೇಶದ ನವ ಅಯೋಧ್ಯಾ ನಗರದಲ್ಲಿರುವ ಸ್ವಾತಂತ್ರ್ಯ ಹೋರಾಟಗಾರ್ತಿ ಚನ್ನಬಸಮ್ಮ ಚನ್ನಕಟ್ಟಿ (105) ಅವರ ಮನೆಗೆ ಭಾನುವಾರ ಬೆಳಿಗ್ಗೆ ಭೇಟಿ ನೀಡಿ, ಅವರನ್ನು ಸನ್ಮಾನಿಸಿ, ಮಾತನಾಡಿದರು.

‘ಚನ್ನಬಸಮ್ಮ  ಮೂರು ತಿಂಗಳ ಮಗುವಿನೊಂದಿಗೆ ಸೆರೆಮನೆ ವಾಸ ಅನುಭವಿಸಿದ್ದಾರೆ ಎಂದು ಕೇಳಿದ್ದೇನೆ. ಅವರ ತ್ಯಾಗದಿಂದಲೇ ಇಂದು ಸ್ವತಂತ್ರ ಭಾರತದಲ್ಲಿ ನಾವೆಲ್ಲ ಸುಖವಾಗಿದ್ದೇವೆ. ಈ ಭಾಗದಲ್ಲಿ ಐಐಟಿಯೂ ಬಂದಿದೆ. ಇದಕ್ಕೆ ಸ್ವಾತಂತ್ರ್ಯ ಹೋರಾಟಗಾರರ ಶ್ರಮವೂ ಇದೆ’ ಎಂದರು.

‘ಸ್ವಾತಂತ್ರ್ಯ ಬಂದ ದಿನದಿಂದ ಇಲ್ಲಿಯವರೆಗೆ ಎರಡು ಪೀಳಿಗೆಗಳು ಬಂದು ಹೋಗಿವೆ. ಈಗಲಾದರೂ ನಮ್ಮ ಸ್ವಾತಂತ್ರ್ಯ ಚಳವಳಿಯ ನೆನಪುಗಳನ್ನು ಇಂದಿನ ಯುವಕರಿಗೆ ಮಾಡಿಕೊಡಬೇಕು’ ಎಂದು ಅವರು ಹೇಳಿದರು.

‘ಮುಝೆ ಸಮಜ್ತಾ ಹೈ’: ಪೂರ್ವನಿಗದಿಯಂತೆ ಜಾವಡೇಕರ್‌ ಮಧ್ಯಾಹ್ನ ಬರುವ ಬದಲು, ಚನ್ನಬಸಮ್ಮ ಅವರನ್ನು ಭೇಟಿಯಾಗಲೆಂದೇ ಬೆಳಿಗ್ಗೆ ಬಂದಿದ್ದಾರೆ ಎಂದು ಸಂಸದ ಪ್ರಹ್ಲಾದ ಜೋಶಿ ಮೊದಲು ಕನ್ನಡದಲ್ಲಿ ಹೇಳಿ, ಆ ಬಳಿಕ ಹಿಂದಿಯಲ್ಲಿ ಮಾತನಾಡಲು ಆರಂಭಿಸಿದರು. ಇದನ್ನು ಗಮನಿಸಿದ ಜಾವಡೇಕರ್‌, ‘ಮುಝೆ ಸಮಜ್ತಾ ಹೈ’ ಎನ್ನುವ ಮೂಲಕ ಕನ್ನಡ ಅರ್ಥವಾಗುತ್ತದೆ ಎಂದು ಪರೋಕ್ಷವಾಗಿ ಹೇಳಿದರು.

ಪ್ರೇಕ್ಷಕರ ಸಾಲಿನಲ್ಲಿ ಪ್ರಾಚಿ:  ಪತಿ ಪ್ರಕಾಶ ಜಾವಡೇಕರ್‌ ಅವರೊಂದಿಗೆ ಬೆಂಗಳೂರಿನಿಂದ ವಿಶೇಷ ವಿಮಾನದಲ್ಲಿ ಬಂದಿದ್ದ ಪ್ರಾಚಿ ಜಾವಡೇಕರ್‌, ಕಾರ್ಯಕ್ರಮ ನಡೆಯುವಾಗ ಪ್ರೇಕ್ಷಕರಂತೆ ವೇದಿಕೆಯ ಕೆಳಗೆ ನಿಂತಿದ್ದರು. ಇದನ್ನು ಗಮನಿಸಿದ ಸಚಿವ ಅನಂತಕುಮಾರ್‌, ‘ಪ್ರಾಚಿ ವೈನಿ (ಅತ್ತಿಗೆ) ನೀವೂ ವೇದಿಕೆಗೆ ಬನ್ನಿ’ ಎಂದು ಕರೆದಾಗ ವೇದಿಕೆಗೆ ಬಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT