ಬೆಂಗಳೂರು: ‘2020ರ ಹೊತ್ತಿಗೆ ಭಾರತವನ್ನು ಕಾರ್ನಿಯ ಅಂಧತ್ವದಿಂದ ಮುಕ್ತಗೊಳಿಸಲು ಪ್ರತಿಯೊಬ್ಬರು ಕೈಜೋಡಿಸಬೇಕು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದರು.
ರಾಷ್ಟ್ರೀಯ ನೇತ್ರದಾನ ಜಾಗೃತಿ ಪಾಕ್ಷಿಕದ ಅಂಗವಾಗಿ ಸಕ್ಷಮ ಸಂಘಟನೆ ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ಕಾರ್ನಿಯಾ ಅಂಧತ್ವಮುಕ್ತ ಭಾರತ ಜಾಗೃತಿ ಅಭಿಯಾನ’ ಉದ್ಘಾಟಿಸಿ ಅವರು ಮಾತನಾಡಿದರು.
‘12 ವರ್ಷದೊಳಗಿನ ಶೇ 60ರಷ್ಟು ಬಡ ಮಕ್ಕಳು ಕಾರ್ನಿಯಾ ಅಂಧತ್ವದಿಂದ ಬಳಲುತ್ತಿದ್ದಾರೆ. ನೇತ್ರದಾನದಿಂದ ಅವರ ಬಾಳಿನಲ್ಲಿ ಬೆಳಕು ತರಲು ಸಾಧ್ಯ. ಎಲ್ಲರೂ ಕಣ್ಣು ದಾನ ಮಾಡುವ ಸಂಕಲ್ಪ ಮಾಡಬೇಕು’ ಎಂದರು.
ಶೇಖರ್ ಕಣ್ಣಿನ ಆಸ್ಪತ್ರೆಯ ಮುಖ್ಯಸ್ಥ ಡಾ. ರಾಜಶೇಖರ್ ಮಾತನಾಡಿ, ‘ನೇತ್ರದಾನದ ಕುರಿತು ಜನರಲ್ಲಿನ ತಪ್ಪು ತಿಳಿವಳಿಕೆ ಹೋಗಲಾಡಿಸಬೇಕು. ಕುಟುಂಬದವರು ಸಾವಿನ ದುಃಖ ದಲ್ಲಿರುವಾಗ ನೇತ್ರದಾನದ ಮಹತ್ವವನ್ನು ಅವರಿಗೆ ತಿಳಿಸುವ ಕಾಳಜಿಯನ್ನು ಎಲ್ಲರೂ ಬೆಳೆಸಿಕೊಳ್ಳಬೇಕು’ ಎಂದರು.
SMS ಮೂಲಕ ನೇತ್ರದಾನ ಸಂಕಲ್ಪ ಕಾರ್ಯಕ್ರಮಕ್ಕೂ ಚಾಲನೆ ನೀಡಲಾಯಿತು. ‘eye’ ಎಂದು ಟೈಪ್ ಮಾಡಿ, ಸ್ಥಳ ಬಿಟ್ಟು ದಾನ ಮಾಡುವವರ ಹೆಸರು ಟೈಪ್ ಮಾಡಿ, ಸ್ಥಳ ಬಿಟ್ಟು ವಿಳಾಸ ಟೈಪ್ ಮಾಡಿ 7619644655 ಸಂಖ್ಯೆಗೆ ಕಳುಹಿಸಬಹುದು.
ರಂಗದರ್ಪಣ ನಾಟಕ ತಂಡ ನೇತ್ರದಾನದ ಜಾಗೃತಿ ಮೂಡಿಸುವ ಕಿರು ನಾಟಕವನ್ನು ಸಂದರ್ಭ ಪ್ರಸ್ತುತ ಪಡಿಸಿತು.