ಬೆಂಗಳೂರು: ಗೆಜೆಟೆಡ್ ಪ್ರೊಬೇಷನರ್್ಸ ಗಳ ಸಂದರ್ಶನ ನಿಯಮಾವಳಿಯಲ್ಲಿ ಅಭ್ಯರ್ಥಿಗಳ ಆಯ್ಕೆ ಅನುಪಾತವನ್ನು ಪಿ.ಸಿ. ಹೋಟಾ ಸಮಿತಿ ಶಿಫಾರಸು ಪ್ರಕಾರ 1:3ರಂತೆ ಮುಂದುವರೆಸಬೇಕು ಎಂದು ಒತ್ತಾಯಿಸಿ ಸಂದರ್ಶನಕ್ಕೆ ಕಾಯುತ್ತಿರುವ ಕೆಲವು ಅಭ್ಯರ್ಥಿಗಳು ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಮತ್ತು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ (ಡಿಪಿಎಆರ್) ಮನವಿ ಸಲ್ಲಿಸಿದ್ದಾರೆ.
ಕೆಪಿಎಸ್ಸಿ ಸುಧಾರಣೆಗಾಗಿ ರಚಿಸಲಾದ ಹೋಟಾ ಸಮಿತಿ ಶಿಫಾರಸು ಮಾಡಿದ 1:3 ಅನುಪಾತವನ್ನು 2013ರ ಆ. 23ರಂದು ನಡೆದ ಸಚಿವ ಸಂಪುಟ ಒಪ್ಪಿಕೊಂಡಿದೆ. ಅದಕ್ಕೆ ಅನುಗುಣವಾಗಿ 2014ರ ಗೆಜೆಟೆಡ್ ಪ್ರೊಬೇಷನರ್್ಸ ಅಧಿಸೂಚನೆಯಲ್ಲಿ ಅನುಪಾತವನ್ನು ಸ್ಪಷ್ಟವಾಗಿ ತಿಳಿಸಲಾಗಿದೆ ಎಂದೂ ಮನವಿಯಲ್ಲಿ ತಿಳಿಸಿದ್ದಾರೆ.
ಆದರೆ, ಅಧಿಸೂಚನೆಯಲ್ಲಿರುವ ಅಂಶ ಇದೀಗ ಬದಲಾಯಿಸುವುದು ಸಂವಿಧಾನದ ಮೂಲಭೂತ ಹಕ್ಕು ಮತ್ತು ಕಾನೂನಿನ ಉಲ್ಲಂಘನೆಯಾಗುತ್ತದೆ. ಖಲೀಲ್ ಅಹ್ಮದ್ ಮತ್ತು ಸರ್ಕಾರ ಮಧ್ಯದ ಪ್ರಕರಣದಲ್ಲಿ ಹೈಕೋರ್ಟ್ ನೀಡಿದ ಆದೇಶದ ಉಲ್ಲಂಘನೆಯಾಗುತ್ತದೆ.
ಸಂದರ್ಶನ ಮಂಡಳಿಯಲ್ಲಿ ಕೆಪಿಎಸ್ಸಿ ಸದಸ್ಯ ಮತ್ತು ನಾಲ್ಕು ಜನ ತಜ್ಞ ಸದಸ್ಯರು ಇರಬೇಕು ಎಂದೂ ಹೋಟಾ ಸಮಿತಿ ಶಿಫಾರಸು ಮಾಡಿದೆ. ಹೈಕೋರ್ಟ್ ಕೂಡಾ ಸಮಿತಿಯ ಶಿಫಾರಸು ಪಾಲಿಸುವಂತೆ ಸರ್ಕಾರಕ್ಕೆ ಆದೇಶಿಸಿದೆ ಎಂದೂ ಮನವಿಯಲ್ಲಿ ಉಲ್ಲೇಖಿಸಲಾಗಿದೆ.