ಪ್ರತಿಭಟನಾಕಾರರು ತಮ್ಮ ಸಿಟ್ಟನ್ನು ವ್ಯಕ್ತಪಡಿಸಲಿಕ್ಕೆ ಹೊಸ ಹೊಸ ವಿಧಾನಗಳನ್ನು ಕಂಡುಕೊಳ್ಳುತ್ತಿರುತ್ತಾರೆ. ಲಬೊ ಲಬೊ ಎಂದು ಬಾಯಿ ಬಡಿದುಕೊಳ್ಳುವುದು, ಧಿಕ್ಕಾರ ಕೂಗುವುದು, ಪ್ರತಿಕೃತಿ ದಹನ, ಚಪ್ಪಲಿ ಏಟು, ಶವದ ಆಕೃತಿಯ ಮೆರವಣಿಗೆ, ತಿಥಿ ಊಟ – ಹೀಗೆ ಬಂದ್ನಲ್ಲಿ ತೊಡಗಿಕೊಂಡವರ ಸೃಜನಶೀಲತೆ ಹಲವು ರೂಪದಲ್ಲಿ ವ್ಯಕ್ತಗೊಳ್ಳುತ್ತದೆ.
1967ರ ಜುಲೈ 19ರಂದು ನಡೆದ ಬೆಂಗಳೂರು ಬಂದ್ ಸಂದರ್ಭದ ಇಲ್ಲಿನ ಚಿತ್ರದಲ್ಲೂ ಅಂತಹುದೇ ರಸವತ್ತಾದ ದೃಶ್ಯವೊಂದಿದೆ. ಕನ್ನಡಪರ, ರೈತಪರ ಚಳವಳಿ–ಪ್ರದರ್ಶನಗಳಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುವ ವಾಟಾಳ್ ನಾಗರಾಜ್ ಅವರನ್ನು ಚಿತ್ರದಲ್ಲಿ ಕಾಣಬಹುದು.ಸ್ವಾಮೀಜಿ ವೇಷದಲ್ಲಿ ಇರುವ ವಾಟಾಳರನ್ನು ಓರ್ವ ಪೊಲೀಸ್ ರಸ್ತೆಯಲ್ಲಿ ತಡೆದುನಿಲ್ಲಿಸಿ ವಿಚಾರಿಸುತ್ತಿದ್ದಾರೆ. ಚಿತ್ರದ ಮತ್ತೊಂದು ತುದಿಯಲ್ಲಿರುವ ಜನರ ಮೋರೆಯಲ್ಲಿನ ಮಂದಹಾಸವನ್ನು ಗಮನಿಸಿದರೆ, ಪ್ರಸಂಗದಲ್ಲಿನ ಲಘುತನವನ್ನು ಕಲ್ಪಿಸಿಕೊಳ್ಳಬಹುದಾಗಿದೆ.