ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನೂನು ಬಲ...

Last Updated 26 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಬೀದರ್‌ನಲ್ಲಿ ಭಾರಿ ಮಳೆಯಿಂದಾಗಿ ಇಬ್ಬರು ನ್ಯಾಯಾಧೀಶರ ಮನೆಗಳಿಗೆ ಮಳೆ ನೀರು ನುಗ್ಗಿದ್ದರಿಂದ ಆದ ತೊಂದರೆಗಾಗಿ ಜಿಲ್ಲಾ ನ್ಯಾಯಾಧೀಶರು ನಾಲ್ವರು ಆಧಿಕಾರಿಗಳಿಗೆ ಬಂಧನದ ವಾರಂಟ್ ಜಾರಿಗೊಳಿಸಿ, ಅವರನ್ನು ಕೋರ್ಟ್‌ ಕಟಕಟೆಯಲ್ಲಿ ವಿಚಾರಣೆಗೆ ಒಳಪಡಿಸಿ, ಮುಚ್ಚಳಿಕೆ ಬರೆಸಿಕೊಂಡು ಬಿಡುಗಡೆಗೊಳಿಸಿದ್ದಾರೆ.

ಹೀಗೇ ಅನೇಕ ಊರುಗಳಲ್ಲಿ ಮನೆಗಳಿಗೆ ಮಳೆಗಾಲದಲ್ಲಿ ನೀರು ನುಗ್ಗಿ ಜನ ತೊಂದರೆ ಅನುಭವಿಸುತ್ತಿದ್ದಾರೆ. ಇದಕ್ಕಾಗಿ ಯಾರನ್ನೂ ಜವಾಬ್ದಾರರನ್ನಾಗಿಸಿದ ನಿದರ್ಶನಗಳಿಲ್ಲ. ಸಾರ್ವಜನಿಕ ಹಿತಾಸಕ್ತಿಗೆ ತೊಂದರೆಯಾದಾಗ ಧಾರವಾಡ, ಕಲಬುರ್ಗಿ ಹೈಕೋರ್ಟ್ ಪೀಠಗಳಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್‌) ಹೂಡಲು ಅವಕಾಶವಿಲ್ಲ. ದೂರದ ಬೆಂಗಳೂರಿನ ಹೈಕೋರ್ಟ್‌ಗೇ ಹೋಗಬೇಕು. ವಕೀಲರ ಮೂಲಕ ಪಿಐಎಲ್ ದಾಖಲಿಸಲು ಸಾವಿರಾರು ರೂಪಾಯಿ  ಭರಿಸಬೇಕಾಗುತ್ತದೆ. ಜನಸಾಮಾನ್ಯರಿಗೆ ಇಷ್ಟು ಹಣ ಖರ್ಚು ಮಾಡಿ ಪಿಐಎಲ್ ದಾಖಲಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಅವರು ನ್ಯಾಯ ಕೇಳಲು ಸಾಧ್ಯವಾಗುತ್ತಿಲ್ಲ.

ರಸ್ತೆ ಮತ್ತು ಚರಂಡಿಗಳನ್ನು ಬಡಾವಣೆ ಪ್ರದೇಶಕ್ಕಿಂತ ಎತ್ತರದಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಲಾಗುತ್ತಿದೆ. ಇದರಿಂದ ಮನೆಗಳು, ತಗ್ಗುಪ್ರದೇಶದಲ್ಲಿ ಉಳಿಯುತ್ತವೆ. ಇಲ್ಲಿ ಮಳೆ ನೀರು ಹೊರಹೋಗಲು ಸಾಧ್ಯವಾಗದೆ ಮನೆಗಳಿಗೆ ನುಗ್ಗುತ್ತದೆ. ಇದು ಪ್ರತಿ ಮಳೆಗಾಲದಲ್ಲೂ ಕಾಡುವ ಗಂಭೀರ ವಿಷಯವಾದರೂ ಯಾರೂ ಅಷ್ಟಾಗಿ ತಲೆಕೆಡಿಸಿಕೊಳ್ಳುವುದಿಲ್ಲ. ತೊಂದರೆಗೊಳಗಾದವರು ಅಸಹಾಯಕರಾಗಿದ್ದಾರೆ. ನ್ಯಾಯಾಧೀಶರಿಗೆ ತೊಂದರೆಯಾದರೆ ಅವರಿಗೆ ಕಾನೂನು ಹಾಗೂ ಅಧಿಕಾರ ಬಲವಿದೆ. ಸಾಮಾನ್ಯರಿಗೆ ತೊಂದರೆಯಾದರೆ ಯಾರಿದ್ದಾರೆ?

ಪತ್ರಿಕೆಗಳಲ್ಲಿ ಪ್ರಕಟವಾಗುವ ಸಾರ್ವಜನಿಕ ಸಮಸ್ಯೆಗಳನ್ನು ಪ್ರತಿ ನ್ಯಾಯಾಧೀಶರೂ ಎತ್ತಿಕೊಂಡು ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಬಂಧನದ ವಾರಂಟ್ ಹೊರಡಿಸಿ ವಿಚಾರಣೆಗೆ ಒಳಪಡಿಸಿದರೆ ಭಾರಿ ಬದಲಾವಣೆಯನ್ನು ನಿರೀಕ್ಷಿಸಬಹುದು.
-ಜಿ.ಬಿ.ಕಂಬಾಳಿಮಠ, ಹುನಗುಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT