ಲಖನೌ: ರೋಡ್ ಶೋದಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಮೇಲೆ ಯುವಕನೊಬ್ಬ ಶೂ ಎಸೆದ ಘಟನೆ ಉತ್ತರ ಪ್ರದೇಶದ ಸೀತಾಪುರದಲ್ಲಿ ಸೋಮವಾರ ನಡೆದಿದೆ.
ಆರೋಪಿ ಯುವಕನನ್ನು ಹರಗಾ ವ್ನ ನಿವಾಸಿ ಹರಿ ಓಂ ಮಿಶ್ರಾ ಎಂದು ಗುರುತಿಸಲಾಗಿದೆ. ಆತ ಸ್ಥಳೀಯ ಸುದ್ದಿ ವಾಹಿನಿಯ ಉದ್ಯೋಗಿ ಎನ್ನಲಾಗಿದೆ.
ರೋಡ್ಶೋ ಪ್ರಾರಂಭವಾದ ಟ್ರಾನ್ಸ್ಪೋರ್ಟ್ ಕ್ರಾಸಿಂಗ್ ಬಳಿ ರಾಹುಲ್ ಗಾಂಧಿ ಅವರತ್ತ ಹರಿ ಓಂ ಮಿಶ್ರಾ ತನ್ನ ಬೂಟನ್ನು ಎಸೆದಿದ್ದಾನೆ. ಆದರೆ ಅದು ರಾಹುಲ್ ಅವರ ಬದಲು, ಅವರ ಪಕ್ಕದಲ್ಲಿದ್ದ ವ್ಯಕ್ತಿಗೆ ತಾಗಿತು. ಪೊಲೀಸರು ಕೂಡಲೇ ಯುವಕ ನನ್ನು ಬಂಧಿಸಿ ನಗರದ ಠಾಣೆಗೆ ಕರೆ ದೊಯ್ದರು. ‘ರೋಡ್ಶೋ ನಿಷ್ಪ್ರ ಯೋಜಕ’ ಎಂದು ಯುವಕ ಕೂಗಿದ್ದಾಗಿ ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.
ಈ ಯುವಕನಿಗೆ ಯಾವುದೇ ರಾಜಕೀಯ ನಂಟುಗಳಿಲ್ಲ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಪ್ರಕರಣ ಕುರಿತು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಉರಿಯಲ್ಲಿ ನಡೆದ ಉಗ್ರರ ದಾಳಿಯಲ್ಲಿ ಜೀವಕಳೆದುಕೊಂಡ 18 ಯೋಧರ ಬಲಿದಾನವನ್ನು ರಾಹುಲ್ ನಿರ್ಲಕ್ಷಿಸಿದ್ದಾರೆ ಎಂದು ಮಿಶ್ರಾ ಆರೋಪಿಸಿದ್ದಾನೆ.
ಆರ್ಎಸ್ಎಸ್–ಬಿಜೆಪಿ ವಿರುದ್ಧ ಆರೋಪ
ತಮ್ಮ ಮೇಲಿನ ಶೂ ಎಸೆದ ಪ್ರಕರಣ ಆರ್ಎಸ್ಎಸ್ ಮತ್ತು ಬಿಜೆಪಿಯ ಕೃತ್ಯ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ‘ಈ ರೀತಿಯ ದಾಳಿಗಳಿಗೆ ನಾನು ಹೆದರುವುದಿಲ್ಲ ಎಂದು ಬಿಜೆಪಿ ಮತ್ತು ಆರ್ಎಸ್ಎಸ್ಗಳಿಗೆ ಹೇಳಲು ಬಯಸುತ್ತೇನೆ. ನೀವು ನನ್ನತ್ತ ಶೂಗಳನ್ನು ಎಸೆಯುವುದನ್ನು ಮುಂದುವರಿಸ ಬಹುದು. ನಾನು ನಿಮ್ಮ (ಆರ್ಎಸ್ಎಸ್–ಬಿಜೆಪಿ) ಶೂಗಳನ್ನು ನಿಮಗೆ ಮರಳಿಸುತ್ತೇನೆ. ನನ್ನಲ್ಲಿನ ಪ್ರೀತಿ ಮತ್ತು ಮೋಹವನ್ನು ಜನರಿಗಾಗಿ ಉಳಿಸಿಕೊಳ್ಳುತ್ತೇನೆ’ ಎಂದಿದ್ದಾರೆ.