ಬೆಂಗಳೂರು: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮತ್ತು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ನಡುವಿನ ಕಿತ್ತಾಟ ತಾರಕಕ್ಕೆ ಏರಿದೆ.
ಇಬ್ಬರು ನಾಯಕರು ಇದೀಗ ಬಹಿರಂಗವಾಗಿ ಪರಸ್ಪರ ಕಾಲೆಳೆಯಲು ಆರಂಭಿಸಿರುವುದು ಪಕ್ಷದ ಆಂತರಿಕ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಅ.6ರಂದು ಪಕ್ಷದ ರಾಜ್ಯ ಸಮನ್ವಯ ಸಮಿತಿ ಸಭೆ ನಡೆಯಲಿದ್ದು, ಅದರಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮಲಾಲ್ ಭಾಗವಹಿಸಲಿದ್ದಾರೆ. ಈ ಸಭೆಯಲ್ಲಿ ಭಿನ್ನಮತ ಪ್ರಸ್ತಾವ ಆಗುವ ಸಾಧ್ಯತೆ ಇದೆ ಎಂದು ಸ್ವತಃ ಈಶ್ವರಪ್ಪ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
ಪಕ್ಷದ ವರಿಷ್ಠರು ಮಾತುಕತೆ ನಡೆಸಿ ಕಿವಿಮಾತು ಹೇಳಿದ ಬಳಿಕವೂ ಯಡಿಯೂರಪ್ಪ ಅವರ ಕಾರ್ಯಶೈಲಿ ಬದಲಾಗಿಲ್ಲ. ರಾಜ್ಯ ಕಾರ್ಯಕಾರಿಣಿಯಲ್ಲಿ ತಮಗೆ ಬೇಕಾದವರಿಗೆ ಯಡಿಯೂರಪ್ಪ ಅವಕಾಶ ನೀಡಿದ್ದಾರೆ. ವರಿಷ್ಠರ ಸಲಹೆಯ ಬಳಿಕವೂ ಉಳಿದ ನಾಯಕರನ್ನು ವಿಶ್ವಾಸಕ್ಕೆ ತೆಗದುಕೊಳ್ಳುತ್ತಿಲ್ಲ ಎಂದು ಅವರು ದೂರಿದರು.
‘ಪಕ್ಷದ ಸಮನ್ವಯ ಸಮಿತಿ ರಚನೆಗೊಂಡ ಕಳೆದ ನಾಲ್ಕು ತಿಂಗಳಲ್ಲಿ ಒಮ್ಮೆ ಮಾತ್ರ ಸಭೆ ಸೇರಿದೆ. ಪ್ರತಿ ತಿಂಗಳು ಸಭೆ ನಡೆಸಲು ನಿಶ್ಚಯವಾಗಿದ್ದರೂ ಯಡಿಯೂರಪ್ಪ ಸಭೆ ಕರೆಯುವ ಗೋಜಿಗೆ ಹೋಗಿಲ್ಲ’ ಎಂದೂ ಅವರು ಆರೋಪಿಸಿದರು.