ಬೆಂಗಳೂರು: ಟೆಂಡರ್ ಶ್ಯೂರ್ ಕಾಮಗಾರಿಗಾಗಿ ನೃಪತುಂಗ ರಸ್ತೆ ಸೇರಿ ನಗರದ 50 ರಸ್ತೆಗಳ ಮರಗಳ ಹನನಕ್ಕೆ ಮುಂದಾಗಿರುವ ಬಿಬಿಎಂಪಿ ಕ್ರಮ ಖಂಡಿಸಿ ವಿವಿಧ ಪರಿಸರವಾದಿ ಸಂಘಟನೆಗಳು ಸೆ.27ರಂದು ಪಾಲಿಕೆ ಕಚೇರಿ ಎದುರು ಬೆಳಿಗ್ಗೆ 11ಕ್ಕೆ ಪ್ರತಿಭಟನೆ ಹಮ್ಮಿಕೊಂಡಿವೆ.
ಹಸಿರು ಉಸಿರು, ಗ್ರೀನ್ ಬೆಂಗಳೂರು ಕ್ಯಾಂಪೇನ್, ಫೋರಂ ಫಾರ್ ಅರ್ಬನ್ ಅಂಡ್ ಕಾಮನ್ಸ್ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಲಿದ್ದಾರೆ.
‘ನೃಪತುಂಗ ರಸ್ತೆಯ ಫುಟ್ಪಾತ್ ನಿರ್ಮಾಣಕ್ಕೆ ನಮ್ಮ ಅಡ್ಡಿಯೇನಿಲ್ಲ. ಆದರೆ ಶಿಥಿಲಗೊಂಡ ಐದು ಮರಗಳನ್ನಷ್ಟೇ ಕಡಿಯುವುದಾಗಿ ಬಿಬಿಎಂಪಿ ಅರಣ್ಯ ಅಧಿಕಾರಿಗಳು ಹೇಳುತ್ತಿದ್ದಾರೆ. ಸಮೃದ್ಧ ಮರಗಳ ಬೇರುಗಳನ್ನು ಕತ್ತರಿಸುವುದು ಸೂಕ್ತವಲ್ಲ. ಒಂದು ಮರ ಕಡಿಯುವುದಕ್ಕೂ ಬಿಡುವುದಿಲ್ಲ. ಪ್ರತಿಭಟನೆ ಜತೆಗೆ ಹಲವು ಬೇಡಿಕೆಗಳನ್ನು ಬಿಬಿಎಂಪಿ ಮುಂದಿಡಲಿದ್ದೇವೆ’ ಎಂದು ಹಸಿರು ಉಸಿರು ಸಂಘಟನೆಯ ಕಾರ್ಯಕರ್ತ ವಿನಯ್ ಶ್ರೀನಿವಾಸ್ ತಿಳಿಸಿದರು.