ಚೆನ್ನೈ: ನೀರು ಹರಿಸಲು ಕರ್ನಾಟಕ ಸರ್ಕಾರ ನಿರಾಕರಿಸಿದ ಕಾರಣ ಮೆಟ್ಟೂರು ಜಲಾಶಯದ ಒಳಹರಿವು 600 ಕ್ಯುಸೆಕ್ಗೆ ಇಳಿದಿದೆ. ಈ ನಡುವೆ ಕೃಷಿಗೆ ತಮಿಳುನಾಡು ಸರ್ಕಾರವು 12 ಸಾವಿರ ಕ್ಯುಸೆಕ್ ನೀರು ಹರಿಸಿದ್ದರಿಂದ ಜಲಾಶಯದ ಸಂಗ್ರಹ ಮಟ್ಟವೂ ಕುಸಿತ ಕಂಡಿದೆ.
‘ಶುಕ್ರವಾರ 900 ಕ್ಯುಸೆಕ್ ಇದ್ದ ಒಳಹರಿವು ಭಾನುವಾರ 611 ಕ್ಯುಸೆಕ್ಗೆ ಇಳಿದಿದೆ’ ಎಂದು ಜಲಸಂಪನ್ಮೂಲ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
‘ಕಳೆದ ವಾರ 86 ಅಡಿ ಇದ್ದ ಜಲಾಶಯದ ನೀರಿನ ಮಟ್ಟವು ಒಳಹರಿವಿನ ಪ್ರಮಾಣದಲ್ಲಿ ಕುಸಿತ ಹಾಗೂ ಕೃಷಿಗೆ ನೀರು ಹರಿಸಿದ್ದರಿಂದ 75 ಅಡಿಗೆ ತಲುಪಿದೆ. (ಗರಿಷ್ಠ ಮಟ್ಟ 120 ಅಡಿ) ಸದ್ಯ 39.1 ಟಿಎಂಸಿ ಅಡಿ ನೀರು ಜಲಾಶಯದಲ್ಲಿದೆ’ ಎಂದು ಅವರು ತಿಳಿಸಿದ್ದಾರೆ.