ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸ್ತಿಯ ಜಾತ್ರೆ, ಅಖಾಡದಲ್ಲೇ ಹಬ್ಬ

Last Updated 10 ಅಕ್ಟೋಬರ್ 2016, 4:15 IST
ಅಕ್ಷರ ಗಾತ್ರ

ಮೈಸೂರಿನಲ್ಲಿ ದಸರಾ ಕುಸ್ತಿ ನಡೆಯುವ ಸಂದರ್ಭದಲ್ಲಿ ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳ ಅಖಾಡಗಳು ಖಾಲಿ; ಕುಸ್ತಿ ತರಬೇತುದಾರರು ತಮ್ಮೂರಿನಲ್ಲಿರುವುದಿಲ್ಲ. ಯಾಕೆಂದರೆ ಅವರೆಲ್ಲರೂ ಮೈಸೂರಿನಲ್ಲಿ ಬೀಡುಬಿಟ್ಟಿರುತ್ತಾರೆ.

ತಮ್ಮ ಶಿಷ್ಯಂದಿರ ಸ್ಪರ್ಧೆ ಇರಲಿ, ಇಲ್ಲದಿರಲಿ; ಅವರು ದಸರಾ ಕುಸ್ತಿಯ ಸೊಬಗು ಸವಿಯುವ ಅವಕಾಶ ಕೈಚೆಲ್ಲಲು ಸಿದ್ಧರಿಲ್ಲ. ಕುಸ್ತಿ ಮೇಲಿನ ಪ್ರೀತಿ ಇದಕ್ಕೆ ಒಂದು ಕಾರಣವಾದರೆ, ದಸರಾ ಕುಸ್ತಿಯಲ್ಲಿ ಪಾಲ್ಗೊಳ್ಳುವವರ ಪೈಕಿ ಮತ್ತು ಬಹುಮಾನ ಗೆಲ್ಲುವವರಲ್ಲಿ ಬಹುಪಾಲು ಉತ್ತರ ಕರ್ನಾಟಕದವರು  ಎಂಬುದು ಮತ್ತೊಂದು ಕಾರಣ ಎಂಬುದು ಇಲ್ಲಿನವರ ವಿಶ್ಲೇಷಣೆ.

ದಸರಾ ಕುಸ್ತಿಯಂತೆ ಉತ್ತರ ಕರ್ನಾಟಕದಲ್ಲಿ ಹಬ್ಬ–ಉತ್ಸವಗಳಲ್ಲಿ ಕುಸ್ತಿಗೆ ಆದ್ಯತೆ ಇದೆ. ಜಾತ್ರೆಗಳಿಗೆ ಇಲ್ಲಿ ಕುಸ್ತಿಗಳು ಕಳೆಗಟ್ಟುತ್ತವೆ.
ದಶಕಗಳ ಹಿಂದೆ ಥಿಯೇಟರ್‌ ಕುಸ್ತಿ (ಟಿಕೆಟ್‌ ಇರಿಸಿ ಆಡಿಸುವ ಸ್ಪರ್ಧೆ) ನಡೆಯುತ್ತಿದ್ದ ಈ ಭಾಗದಲ್ಲಿ ನಂತರ ಕುಸ್ತಿ ಅನೇಕ ಬದಲಾವಣೆಗಳನ್ನು ಕಂಡಿದೆ. ಜಂಗೀ ಕಾಟಾ ನಿಕಾಲಿಯಲ್ಲಿನ ‘ಡಾವ್‌’ಗಳ ಸವಿಯುಂಡ ಜನರು ಪಾಯಿಂಟ್ ಕುಸ್ತಿಯ ಪಟ್ಟುಗಳಿಗೂ ಮಾರುಹೋಗಿದ್ದಾರೆ.

ಮಣ್ಣಿನಲ್ಲಿ ನಡೆಯುತ್ತಿದ್ದ ‘ಮಟ್ಟಿ ಕುಸ್ತಿ’ ನಿಧಾನಕ್ಕೆ ಮ್ಯಾಟ್‌ ಮೇಲೇರಿದೆ. ಫ್ರೀ ಸ್ಟೈಲ್‌ ಕುಸ್ತಿಯಿಂದ ಗ್ರೀಕೊ ರೋಮನ್‌ ಶೈಲಿಗೂ ಪದಾರ್ಪಣೆಯಾಗಿದೆ. ಇದ್ಯಾವುದೂ ಕುಸ್ತಿ ಮೇಲಿನ ಮೋಹಕ್ಕೆ ಧಕ್ಕೆ ತರಲಿಲ್ಲ. ಮೈಯನ್ನು ಕಟ್ಟುಮಸ್ತಾಗಿಸಲು, ಹೆಸರು ಗಳಿಸಲು ಮತ್ತು ಊರ ಜನರ ಪ್ರೀತಿಗೆ ಪಾತ್ರರಾಗಲು ಕುಸ್ತಿ ಆಡುತ್ತಿದ್ದವರು ಈಗ ಪಾಯಿಂಟ್‌ ಕುಸ್ತಿಯ ಬೆನ್ನುಹತ್ತಿ ಉದ್ಯೋಗ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಈಗ ಕುಸ್ತಿ ಜೀವನೋಪಾಯ ಮಾರ್ಗವಾಗಿಯೂ ಮಾರ್ಪಟ್ಟಿದೆ. ಈ ಕ್ರೀಡೆಯ ಬಗ್ಗೆ ಕಾಳಜಿ ವಹಿಸಲು ಇದು ಕೂಡ ಒಂದು ಕಾರಣವಾಗಿದೆ.

1950ರ ಅವಧಿಯಲ್ಲೇ ಚಿನ್ನದ ಸಾಧನೆ ಮಾಡಿದ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ, ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೂ ತರಬೇತಿ ನೀಡುತ್ತಿರುವ ಭಾರತ ಕ್ರೀಡಾ ಪ್ರಾಧಿಕಾರದ (ಸಾಯ್‌) ಧಾರವಾಡ ತರಬೇತಿ ಕೇಂದ್ರ, ಬೆಳಗಾವಿ, ಬಾಗಲಕೋಟೆ, ಗದಗ, ಹಳಿಯಾಳದಲ್ಲಿ ಕುಸ್ತಿ ತರಬೇತಿಯನ್ನೂ ನೀಡುತ್ತಿರುವ ಕ್ರೀಡಾನಿಲಯಗಳು ಮುಂತಾದ ಸಂಸ್ಥೆಗಳು ಕೂಡ ಇಲ್ಲಿನ ಕುಸ್ತಿ ಪೋಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ.

ಧಾರವಾಡ, ಹಳಿಯಾಳ, ಬಾಗಲಕೋಟೆ, ಬೆಳಗಾವಿ ಮುಂತಾದ ಕಡೆಗಳಲ್ಲಿ ರಾಷ್ಟ್ರೀಯ ಕ್ರೀಡಾ ಸಂಸ್ಥೆಯಲ್ಲಿ (ಎನ್‌.ಐ.ಎಸ್‌) ತರಬೇತಿ ಪಡೆದ ಕೋಚ್‌ಗಳು ಕುಸ್ತಿ ತರಬೇತಿ ನೀಡುತ್ತಿದ್ದರೆ ಅನುಭವದಿಂದ ಪಡೆದ ವಿದ್ಯೆಯನ್ನು ಧಾರೆ ಎರೆಯುವ ನೂರಾರು ಕೋಚ್‌ಗಳು ಕುಸ್ತಿಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುತ್ತಿದ್ದಾರೆ.

ಜಾತ್ರೆ, ಉತ್ಸವಗಳಲ್ಲಿ ಕುಸ್ತಿ: ಜಾತ್ರೆ ಮತ್ತು ಉತ್ಸವಗಳು ಉತ್ತರ ಕರ್ನಾಟಕ ಕುಸ್ತಿಯ ಪ್ರಮುಖ ಪ್ರೇರಣೆಗಳು. ಕಿತ್ತೂರು ಉತ್ಸವ, ಬೆಳವಡಿ ಮಲ್ಲಮ್ಮ ಉತ್ಸವ ಮುಂತಾದವುಗಳಲ್ಲಿ ಕುಸ್ತಿಯದ್ದೇ ಜಾತ್ರೆ ನಡೆಯುತ್ತದೆ. ಊರ ದೇವರ ಜಾತ್ರೆಗಳಲ್ಲಿ ಕುಸ್ತಿ ಅವಿಭಾಜ್ಯ ಅಂಗವಾಗಿರುತ್ತದೆ. ಅದನ್ನು ನೋಡಲು ಸೇರುವ ಜನರು ಸಾವಿರಾರು. ಬಾಗಲಕೋಟೆ ಜಿಲ್ಲೆಯ ಮುಧೋಳ, ಜಮಖಂಡಿ, ಬಾದಾಮಿ, ಬೆಳಗಾವಿ ಜಿಲ್ಲೆಯ ಅಥಣಿ, ಚಿಕ್ಕೋಡಿ, ರಾಯಬಾಗ, ಸಂಕೇಶ್ವರ, ಗೋಕಾಕ ಮುಂತಾದ ಕಡೆಗಳಲ್ಲಿ ಜಾತ್ರೆಯ ಸಂದರ್ಭ ನಡೆಯುವ ಕುಸ್ತಿ ನೋಡಲು ಜನರು ಮುಗಿ ಬೀಳುತ್ತಾರೆ.

ಹಳಿಯಾಳದಲ್ಲಿ ಪ್ರತಿ ವರ್ಷ ನಡೆಯುವ ರಾಷ್ಟ್ರಮಟ್ಟದ ಕುಸ್ತಿ ಚಾಂಪಿಯನ್‌ಷಿಪ್‌ನಂಥ ವಾರ್ಷಿಕ ಕುಸ್ತಿ ಸಂಪ್ರದಾಯ ಕೂಡ ಗ್ರಾಮೀಣ ಪ್ರದೇಶಗಳಲ್ಲಿ ಕುಸ್ತಿಗೆ ಚೇತನ ತುಂಬುತ್ತಿವೆ.

‘ಬೆಳಗಾವಿ, ವಿಜಯಪುರ, ಧಾರವಾಡ, ಬಾಗಲಕೋಟೆ, ಹಳಿಯಾಳ ಮುಂತಾದ ಪ್ರದೇಶಗಳನ್ನು ಕುಸ್ತಿಯ ನಾಡು ಎಂದೇ ಕರೆಯುವವರು ಇದ್ದಾರೆ. ಗರಡಿ ಮನೆಗಳು ಕಡಿಮೆಯಾಗಿದ್ದರೂ ಕುಸ್ತಿಗೆ ಉತ್ತರ ಕರ್ನಾಟಕದಲ್ಲಿ ಧಕ್ಕೆಯಾಗಲಿಲ್ಲ. ಆಡುವ ವಾತಾವರಣ, ಶೈಲಿ ಇತ್ಯಾದಿಗಳಲ್ಲಿ ಸ್ವಲ್ಪ ಆಧುನಿಕ ಸ್ಪರ್ಶ  ಲಭಿಸಿದ್ದರೂ ಕುಸ್ತಿಯ ಕುರಿತ ಪ್ರೀತಿ ಇಲ್ಲಿ ಎಳ್ಳಷ್ಟೂ ಕಡಿಮೆಯಾಗಲಿಲ್ಲ’ ಎನ್ನುತ್ತಾರೆ ಹಳಿಯಾಳ ಮೂಲದವರಾದ, ಆಳ್ವಾಸ್ ಕಾಲೇಜಿನ ಕುಸ್ತಿ ಕೋಚ್‌ ತುಕಾರಾಮ ಗೌಡ.

‘ಕುಸ್ತಿಗೆ ರಾಜ್ಯದ ಬೇರೆ ಯಾವ ಭಾಗದಲ್ಲೂ ಇಲ್ಲದಷ್ಟು ಸೌಲಭ್ಯ ಉತ್ತರ ಕರ್ನಾಟಕದಲ್ಲಿ ಇದೆ ಎನ್ನಬಹುದು. ಈ ಭಾಗದ ಕ್ರೀಡಾನಿಲಯಗಳಲ್ಲಿ ತಲಾ 25 ಮಂದಿ ತರಬೇತಿ ಪಡೆಯುತ್ತಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕುಸ್ತಿಯ ಪಟ್ಟುಗಳನ್ನು ಕಲಿಯುತ್ತಿದ್ದಾರೆ. ಹಬ್ಬ, ಜಾತ್ರೆಯ ಸಂದರ್ಭದ ಕುಸ್ತಿಯಲ್ಲಿ ಪಾಲ್ಗೊಂಡು ಪ್ರಶಸ್ತಿ ಗೆಲ್ಲುವುದಕ್ಕಾಗಿ ವರ್ಷವಿಡೀ ಅಭ್ಯಾಸ ನಡೆಯುತ್ತಿರುತ್ತದೆ. ಆದ್ದರಿಂದ ಜಾತ್ರೆಗಳಿಗೆ ಕುಸ್ತಿ ಉಳಿಸುವುದರಲ್ಲಿ ಪ್ರಮುಖ ಪಾತ್ರವಿದೆ’ ಎಂಬುದು ಅವರ ಅಭಿಪ್ರಾಯ.

*
ಮಣ್ಣಿನಲ್ಲಿ ಆಡುವ ಜಂಗೀ ಕಾಟಾ ನಿಕಾಲಿ ಕುಸ್ತಿ ಈಗ ಕಡಿಮೆಯಾಗುತ್ತಿದೆ. ರಾಷ್ಟ್ರೀಯ – ಅಂತರರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆಲ್ಲುವ ಮತ್ತು ಆ ಮೂಲಕ ಜೀವನಕ್ಕೆ ದಾರಿ ಕಂಡುಕೊಳ್ಳುವ ಉದ್ದೇಶದಿಂದ ಕುಸ್ತಿಪಟುಗಳು ಪಾಯಿಂಟ್ ಕುಸ್ತಿಯ ಕಡೆಗೆ ಹೆಚ್ಚು ಒಲವು ತೋರಿಸುತ್ತಿದ್ದಾರೆ. ಪಾಲಕರು ಕೂಡ ಮಕ್ಕಳು ಪಾಯಿಂಟ್‌ ಕುಸ್ತಿಯಲ್ಲಿ ಸಾಧನೆ ಮಾಡಬೇಕೆಂದು ಬಯುಸುತ್ತಿದ್ದಾರೆ. ಆದರೆ ಉತ್ಸವಗಳಲ್ಲಿ ಇನ್ನೂ ಮಣ್ಣಿನ ಕುಸ್ತಿ ಜೀವಂತವಾಗಿದೆ. ಆದ್ದರಿಂದ ಕುಸ್ತಿಗೆ ಧಕ್ಕೆಯಾಗುವ ಯಾವುದೇ ಆತಂಕ ಇಲ್ಲ.
–ತುಕಾರಾಮ ಗೌಡ, ಕುಸ್ತಿ ಕೋಚ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT