ಈಚಿನ ದಿನಗಳಲ್ಲಿ ಗೆಲುವು ಸಾಧಿಸಿದ ಬಹುತೇಕ ಚಿತ್ರಗಳಲ್ಲಿ– ಥ್ರಿಲ್ಲರ್, ಸಸ್ಪೆನ್ಸ್ ಹಾಗೂ ಹಾರರ್ ಅಂಶಗಳೇ ಹೆಚ್ಚು. ಈ ಜಾಡು ಹಿಡಿದು, ಕೇಶವ ಅವರೀಗ ‘ಮಾಸ್ಕ್’ ಎಂಬ ಚಿತ್ರದ ಮೂಲಕ ಥ್ರಿಲ್ಲರ್ ಕಥೆ ಹೇಳಲು ಹೊರಟಿದ್ದಾರೆ.
‘ವೀಕೆಂಡ್ನಲ್ಲಿ ಪಶ್ಚಿಮ ಘಟ್ಟದ ಪರಿಸರದಲ್ಲಿ ಸುತ್ತಾಡಲು ಹೋಗುವ ಐ.ಟಿ–ಬಿ.ಟಿ ಕಂಪೆನಿಯ ಉದ್ಯೋಗಿಗಳ ಸುತ್ತ ‘ಮಾಸ್ಕ್’ ಕಥೆ ಹೆಣೆಯಲಾಗಿದೆ. ಅಪರಿಚಿತ ಸ್ಥಳಕ್ಕೆ ಹೋಗುವ ಅವರಿಗೆ ವಿಚಿತ್ರ ಅನುಭವಗಳಾಗುತ್ತವೆ. ಮಾಸ್ಕ್ (ಮುಖವಾಡ) ಧರಿಸಿದ ವ್ಯಕ್ತಿಯೊಬ್ಬ ತಂಡದ ಮೇಲೆ ಎರಗುತ್ತಾನೆ. ಯಾರವನು? ಯಾಕಾಗಿ ಇವರ ಹಿಂದೆ ಬೀಳುತ್ತಾನೆ ಎಂಬುದೇ ಕಥೆ. ಪ್ರತಿ ದೃಶ್ಯದಲ್ಲೂ ಥ್ರಿಲ್ಲಿಂಗ್ ಅಂಶಗಳಿವೆ’ ಎಂದು ಕೇಶವ ಅವರು ಕಥೆಯ ತಿರುಳನ್ನು ಹೇಳಿದರು.
‘ಬೆಂಗಳೂರು ಮೂವೀಸ್’ ಬ್ಯಾನರಿನಡಿ ಸ್ವತಃ ನಿರ್ದೇಶಕರೇ ಈ ಚಿತ್ರವನ್ನು ನಿರ್ಮಿಸಿದ್ದಾರೆ. ರಾಮ್ ಚರಣ್ ಮತ್ತು ರಜನಿ ಚಿತ್ರದ ನಾಯಕ–ನಾಯಕಿ. ರಾಮ್ಗೆ ಬೆಳ್ಳಿತೆರೆಯ ಮೊದಲ ಅನುಭವವಾಗಿದ್ದು, ಚಿತ್ರದಲ್ಲಿ ಅವಕಾಶ ನೀಡಿದ ನಿರ್ದೇಶಕರಿಗೆ ಕೃತಜ್ಞತೆ ಸಲ್ಲಿಸಿದರು.
ಕುಕ್ಕೆ ಸುಬ್ರಮಣ್ಯ ಸುತ್ತಮುತ್ತ 25 ದಿನ ಚಿತ್ರೀಕರಣ ನಡೆಸಲಾಗಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದ್ದು, ನವೆಂಬರ್ನಲ್ಲಿ ಚಿತ್ರವನ್ನು ತೆರೆಗೆ ತರುವ ಆಲೋಚನೆ ನಿರ್ದೇಶಕರದು. ಮಾರುತಿ ಸಂಗೀತ ನಿರ್ದೇಶನ, ಪ್ರಮೋದ್ ಛಾಯಾಗ್ರಹಣ, ಎಸ್.ಕೆ. ಸಿದ್ದರಾಜು ಸಂಕಲನ ಹಾಗು ಶೇಷಗಿರಿ ಸಾಹಿತ್ಯ ಚಿತ್ರಕ್ಕಿದೆ.