ಬೆಂಗಳೂರು: ಇತ್ತೀಚೆಗೆ ನಿಧನರಾದ ಹಿರಿಯ ಆರ್ಎಸ್ಎಸ್ ಕಾರ್ಯಕರ್ತ, ತಮ್ಮ ಒಡನಾಡಿ ಕೃ. ಗೋಪಿನಾಥ್ ಅವರ ಮನೆಗೆ ಶುಕ್ರವಾರ ಭೇಟಿ ನೀಡಿದ ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಅವರು ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.
ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಶುಕ್ರವಾರ ಸಂಜೆ ನಗರಕ್ಕೆ ಬಂದ ಅಡ್ವಾಣಿ ಅವರನ್ನು ಪರಿಷತ್ ಸದಸ್ಯ ರಾಮಚಂದ್ರಗೌಡ ಸ್ವಾಗತಿಸಿದರು.
ಬಳಿಕ ಅವರ ಜತೆಯಲ್ಲಿ ಗೋಪಿನಾಥ್ ಮನೆಗೆ ತೆರಳಿದ ಅಡ್ವಾಣಿ, ಅವರ ಸೋದರರಾದ ಕೃ. ಸೂರ್ಯನಾರಾಯಣರಾವ್, ಕೃ. ನರಹರಿ ಅವರಿಗೆ ಸಾಂತ್ವನ ಹೇಳಿದರು.
ಖಾಸಗಿ ಹೋಟೆಲ್ನಲ್ಲಿ ವಾಸ್ತವ್ಯ ಹೂಡಿರುವ ಅಡ್ವಾಣಿ ಅವರನ್ನು ರಾತ್ರಿ ಭೇಟಿಯಾದ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ, ಶಾಸಕ ಎಸ್. ಸುರೇಶಕುಮಾರ್ ಅವರು ಕುಶಲೋಪರಿ ವಿಚಾರಿಸಿದರು.