ಬೆಂಗಳೂರು: ಲೋಕಾಯುಕ್ತರ ನೇಮಕಕ್ಕೆ ಒತ್ತಾಯಿಸಿ ಲೋಕಾಯುಕ್ತ ಕಚೇರಿ ಎದುರು ಪ್ರತಿಭಟನೆ ನಡೆಸಿದ ಆರ್ಟಿಐ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.
ಮಂಗಳವಾರ ಬೆಳಿಗ್ಗೆ ಕಪ್ಪು ಬಟ್ಟೆ ಧರಿಸಿ ಭಿತ್ತಿ ಪತ್ರಗಳೊಂದಿಗೆ ಕಚೇರಿ ಮೆಟ್ಟಿಲುಗಳ ಮೇಲೆ ಆರ್ಟಿಐ ಕಾರ್ಯಕರ್ತರು ಧರಣಿ ಆರಂಭಿಸಿದರು. ಎಲ್ಲರನ್ನು ಪೊಲೀಸರು ಬಂಧಿಸಿ ಕರೆದೊಯ್ದರು.
ಹನ್ನೊಂದು ತಿಂಗಳಿಂದ ಲೋಕಾಯುಕ್ತರಿಲ್ಲದೆ ಸಂಸ್ಥೆ ಮುಚ್ಚಿದ ಸ್ಥಿತಿಯಲ್ಲಿದೆ. ಸಂಸ್ಥೆಗೆ ಸಲ್ಲಿಕೆಯಾಗುವ ದೂರುಗಳು ಧೂಳು ಹಿಡಿಯುತ್ತಿವೆ ಎಂದು ಪ್ರತಿಭಟನಾಕಾರರು ದೂರಿದರು.
ಇಬ್ಬರು ಉಪ ಲೋಕಾಯುಕ್ತರು ಇದ್ದರೂ ದೂರುಗಳ ವಿಲೇವಾರಿ ಆಗುತ್ತಿಲ್ಲ. ಆರ್ಟಿಐನಲ್ಲಿ ಸಲ್ಲಿಸುವ ಅರ್ಜಿಗೂ ಮಾಹಿತಿ ನೀಡುತ್ತಿಲ್ಲ. ಸರ್ಕಾರ ಕೂಡಲೇ ಲೋಕಾಯುಕ್ತರನ್ನು ನೇಮಿಸಬೇಕು ಎಂದು ಒತ್ತಾಯಿಸಿದರು.